ಸಾರಾಂಶ
ಪುತ್ತೂರಿನ ದರ್ಬೆ ಸಮೀಪ ವಾಣಿಜ್ಯ ತೆರಿಗೆಗಳ ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-265, ಲೆಕ್ಕಪರಿಶೋಧನೆ ಕಚೇರಿ ಹಾಗೂ ಜಾರಿ ವಿಭಾಗದ ಕಚೇರಿಗಳ ‘ವಾಣಿಜ್ಯ ತೆರಿಗೆ ಭವನ’ವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಪುತ್ತೂರು : ರಾಜಸ್ವ ವಸೂಲಿ ಸಂಗ್ರಹದಲ್ಲಿ ರಾಜ್ಯದಲ್ಲಿ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹಾಕಿದಷ್ಟೂ ಹೆಚ್ಚು ಆದಾಯ ಉತ್ಪಾದಿಸುವ ಜಿಲ್ಲೆ ಮಂಗಳೂರು ಆಗಿದ್ದು, ಕಾನೂನು ಸುವ್ಯವಸ್ಥೆ, ಸಹೋದರತ್ವವನ್ನು ಕಾಪಾಡಿಕೊಂಡರೆ ಮಂಗಳೂರು ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ಪುತ್ತೂರಿನ ದರ್ಬೆ ಸಮೀಪ ವಾಣಿಜ್ಯ ತೆರಿಗೆಗಳ ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ- 265, ಲೆಕ್ಕಪರಿಶೋಧನೆ ಕಚೇರಿ ಹಾಗೂ ಜಾರಿ ವಿಭಾಗದ ಕಚೇರಿಗಳ ‘ವಾಣಿಜ್ಯ ತೆರಿಗೆ ಭವನ’ ಉದ್ಘಾಟಿಸಿ ಅವರು ಮಾತನಾಡಿದರು. ಕಟ್ಟಡಗಳು ಸುಸ್ಥಿತಿಯಲ್ಲಿದ್ದಾಗ ಕೆಲಸ ಮಾಡಲೂ ಅನುಕೂಲದ ವಾತಾವರಣ ನಿರ್ಮಾಣವಾಗುವುದರಿಂದ ಸರ್ಕಾರ ಉತ್ತಮ ಕಟ್ಟಡಗಳನ್ನು ಒದಗಿಸಲು ಗಮನಹರಿಸುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಎಂದಿಗೂ ಡಬಲ್ ಗೇಮ್ ಮಾಡುವುದಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಎಲ್ಲರಿಗೂ ಒಂದೇ ರೀತಿಯ ಅನುದಾನ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಸಂಗ್ರಹ ಮಾಡುವುದ ಮಾತ್ರವಲ್ಲ, ಕಚೇರಿಗಳೂ ಚೆನ್ನಾಗಿರಬೇಕು ಎಂದು ಪುತ್ತೂರಿಗೆ ತುರ್ತು ಅನುದಾನ ಬಿಡುಗಡೆ ಮಾಡಿ ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.
ಮೂರು ವರ್ಷದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆಯಲಿದೆ ಎಂದರು. ಪುತ್ತೂರಿನ ಆರೋಗ್ಯ ಇಲಾಖೆಗೆ ೪ ಕೋಟಿ, ೬ ಪಿ.ಎಚ್.ಸಿ. ಸೇರಿದಂತೆ ರು.೪೦ ಕೋಟಿಯಷ್ಟು ಅನುದಾನ ಪುತ್ತೂರಿಗೆ ಆರೋಗ್ಯ ಸಚಿವರು ನೀಡಿದ್ದಾರೆ ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದ.ಕ. ನಿರ್ಮಿತಿ ಕೇಂದ್ರದ ಹರೀಶ್ ಮೆದು, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಆಶಿಕುದ್ದೀನ್ ಅಖ್ತರ್ ಅವರನ್ನು ಗೌರವಿಸಲಾಯಿತು.ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ(ಮನವಿಗಳು) ಸುಲಕ್ಷಣ ಎಸ್. ಎನ್., ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ(ಜಾರಿ) ಲಕ್ಷಾಪತಿ ನಾರಾಯಣ ನಾಯ್ಕ್, ಹಿರಿಯ ಉಪ ಆಯುಕ್ತ ಬಾಲಚಂದ್ರ, ಉಪ ಆಯುಕ್ತ ಬೆಳ್ಳಿಯಪ್ಪ, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಇದ್ದರು. ದತ್ತಾಂಶ ನಮೂದು ಸಹಾಯಕಿ ಚಂಚಲ ಪ್ರಾರ್ಥನೆ ಹಾಡಿದರು. ಮಂಗಳೂರು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ವಿ. ಕುಮಾರ್ ಸ್ವಾಗತಿಸಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್ ವಂದಿಸಿದರು. ಉಪ ಆಯಕ್ತೆ ಹೇಮಲತಾ ಎನ್. ಕಾರ್ಯಕ್ರಮ ನಿರ್ವಹಿಸಿದರು.