ಸಾರಾಂಶ
ಜಿಲ್ಲೆಯ ರೈತರು ಸ್ವಾವಲಂಬಿಗಳಾಗಿ ಗೌರವದಿಂದ ಬದುಕುವುದಕ್ಕೆ ಮಾವು ಸಂಸ್ಕರಣಾ ಘಟಕ ಮತ್ತು ಟೊಮ್ಯಾಟೋ ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು
ಕೋಲಾರ : ಜಿಲ್ಲೆಯ ರೈತರು ಸ್ವಾವಲಂಬಿಗಳಾಗಿ ಗೌರವದಿಂದ ಬದುಕುವುದಕ್ಕೆ ಮಾವು ಸಂಸ್ಕರಣಾ ಘಟಕ ಮತ್ತು ಟೊಮ್ಯಾಟೋ ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ತಾಲೂಕಿನ ಕುಂಬಾರಹಳ್ಳಿಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ ರೈತರಿಗೆ ಬೆಳೆ ಮತ್ತು ಬೆಲೆಯ ಸಮಸ್ಯೆ ಎದುರಾಗುತ್ತಲೇ ಇದೆ, ರೈತರದ್ದು ಹೋರಾಟದ ಬದುಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಮಾವು ಸಂಸ್ಕರಣಾ ಘಟಕದ ಒಕ್ಕೂಟ ಮತ್ತು ಟೊಮ್ಯಾಟೋ ಸಂಸ್ಕರಣಾ ಘಟಕದ ಒಕ್ಕೂಟವನ್ನು ಸ್ಥಾಪಿಸಲು ಜಿಲ್ಲೆಯ ಎಲ್ಲ ಮುಖಂಡರು ಸೇರಿ ಒಮ್ಮತದಿಂದ ತೀರ್ಮಾನಿಸಿರುವುದಾಗಿ ತಿಳಿಸಿದರು.1 ಲಕ್ಷ ಟನ್ ಮಾವು ಸಂಸ್ಕರಣೆ:
ಶ್ರೀನಿವಾಸಪುರ ಮತ್ತು ಮುಳಬಾಗಿಲು ಮಧ್ಯದಲ್ಲಿ ಇದೀಗ ೧೦ ಎಕರೆ ಪ್ರದೇಶದಲ್ಲಿ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ೨೫ ಎಕರೆಗೆ ವಿಸ್ತರಣೆ ಮಾಡುವ ಉದ್ದೇಶವಿದೆ. ಪ್ರಸ್ತುತ ೧೦ ಎಕರೆಯಲ್ಲಿ ನಿರ್ಮಿಸುವ ಸಂಸ್ಕರಣಾ ಘಟಕದಲ್ಲಿ ವಾರ್ಷಿಕ ೧ ಲಕ್ಷ ಟನ್ ಮಾವು ಸಂಸ್ಕರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಾವು ಸಂಸ್ಕರಣೆ ನಂತರ ಅದರಿಂದ ಉತ್ಪತ್ತಿಯಾಗುವ ಜ್ಯೂಸ್ಅನ್ನು ಬೋಟ್ ಪ್ಯಾಕ್ ಮೂಲಕ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಸಂಸ್ಕರಣಾ ಘಟಕವನ್ನು ಸಹಕಾರಿ ಸಂಘದ ಅಡಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಸ್ಪಷ್ಟ ರೂಪುರೇಷೆ ತಯಾರಿಸಲಾಗುವುದು ಎಂದರು.
10 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಘಟಕ:
ಅದೇ ರೀತಿ ಟೊಮ್ಯಾಟೋ ಸಂಸ್ಕರಣಾ ಘಟಕವನ್ನು ಕೋಲಾರ- ಮುಳಬಾಗಿಲು ಮಧ್ಯದಲ್ಲಿ ಪ್ರಸ್ತುತ ೧೦ ಎಕರೆಯಲ್ಲಿ ಪ್ರಾರಂಭಿಸಿ, ಮುಂದೆ ೫೦ ಎಕರೆ ಪ್ರದೇಶಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ವಾರ್ಷಿಕ ೫ ಲಕ್ಷ ಟನ್ ಟೊಮ್ಯಾಟೋವನ್ನು ಸಂಸ್ಕರಿಸಲು ಉದ್ದೇಶಿಸಲಾಗಿದೆ. ಟೊಮ್ಯಾಟೋನಿಂದ ಪ್ರಥಮವಾಗಿ ಕ್ಯಾನ್ಸರ್ ಕಾಯಿಲೆಯ ಔಷಧಿಯಲ್ಲಿ ಬಳಕೆಯಾಗುವ ಲೈಖೋಫೆನ್ ಎಂಬ ಒಣ ಪುಡಿಯನ್ನು ಉತ್ಪಾದಿಸಿದ ನಂತರ ಉಳಿಕೆ ಟೊಮ್ಯಾಟೋವನ್ನು ಟೊಮ್ಯಾಟೋ ಜ್ಯೂಸ್, ಟೊಮ್ಯಾಟೋ ಪೌಡರ್ ಇತ್ಯಾದಿ ಪದಾರ್ಥಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದರು.
ಇಲ್ಲಿನ ರೈತರಿಗಲ್ಲದೆ ಪಕ್ಕದಲ್ಲಿರುವ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ರೈತರಿಗೂ ಅನುಕೂಲ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಇಲಾಖೆಯ ಹಿರಿಯ ವಿಜ್ಞಾನಿಗಳ ಹಾಗೂ ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಲಾಗುವುದು ಎಂದರು.
ಘಟಕಗಳಿಂದ ಉದ್ಯೋಗ ಸೃಷ್ಟಿ:
ಸಹಕಾರಿ ಸಂಘದ ಅಡಿ ನಿರ್ಮಿಸಲು ಉದ್ದೇಶಿಸಿರುವ ಈ ಸಂಸ್ಕರಣಾ ಘಟಕಗಳಿಂದ ಸ್ಥಳೀಯ ರೈತರೂ ಪಾಲುದಾರರಾಗಲಿದ್ದಾರೆ, ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ, ಈ ಘಟಕಗಳ ನಿರ್ಮಾಣದಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಹ ಸಿಗಲಿದೆ. ಸ್ಥಳೀಯ ಜನರ ಜೀವನ ಮಟ್ಟವೂ ಸುಧಾರಿಸುವ ಭರವಸೆ ಇರುವುದಾಗಿ ತಿಳಿಸಿದರು.
ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಿಲ್ಲೆಯ ನಾಯಕರ ಸಹಕಾರ
ಆಷಾಢ ಮಾಸ ಮುಗಿದೊಡನೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಹಕಾರಿ ಸಂಘದ ಅನುದಾನದೊಂದಿಗೆ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಮುಂದಿನ ವರ್ಷ ಮಾವಿಗೆ ಬೆಲೆಯಿಲ್ಲ ಎಂದು ರೈತರು ಬೀದಿಗೆ ಇಳಿಯುವ ಅಗತ್ಯ ಇರುವುದಿಲ್ಲ, ಈ ಬಗ್ಗೆ ಜಿಲ್ಲೆಯ ನಾಯಕರಾದ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ, ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್, ಕೋಲಾರದ ಟೊಮ್ಯಾಟೋ ಉದ್ಯಮಿ ಸಿ.ಎಂ.ಆರ್.ಶ್ರೀನಾಥ್, ಎಂ.ಎಲ್.ಸಿ. ಗೋವಿಂದರಾಜು ಇವರೊಂದಿಗೆ ಚರ್ಚಿಸಿದ್ದು, ಎಲ್ಲರೂ ಸಹಕಾರದ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಟೊಮ್ಯಾಟೋ ಸಂಸ್ಕರಣಾ ಘಟಕದ ಸ್ಥಾಪನೆ ಮತ್ತು ಪ್ರಾರಂಭಿಕ ಹಂತದಲ್ಲಿ ಅಗತ್ಯ ಸಂಪನ್ಮೂಲ, ತಂತ್ರಜ್ಞಾನ ಪೂರೈಸುವ ಜವಾಬ್ದಾರಿ ಸಿ.ಎಂ.ಆರ್. ಶ್ರೀನಾಥ್ ವಹಿಸಿಕೊಳ್ಳಲಿದ್ದಾರೆ, ಸಂಸ್ಕರಣಾ ಘಟಕಕ್ಕೆ ಬೇಕಾದ ಜಮೀನನ್ನು ಪಡೆದುಕೊಳ್ಳುವ ಜವಾಬ್ದಾರಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ವಹಿಸಿಕೊಂಡಿದ್ದಾರೆ, ಮಾವು ಸಂಸ್ಕರಣಾ ಘಟಕಕ್ಕೆ ಬೇಕಾದ ಮಾವು ಪೂರೈಕೆಯ ಜವಾಬ್ದಾರಿಯನ್ನು ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ವಹಿಸಿಕೊಂಡಿದ್ದಾರೆ, ಹಣಕಾಸಿನ ಪೂರೈಕೆ ಮತ್ತು ಇತರೆ ವ್ಯವಸ್ಥೆಯ ಜವಾಬ್ದಾರಿ ಎಂ.ಎಲ್.ಸಿ. ಗೋವಿಂದರಾಜು ಮೇಲಿದೆ. ಕೇಂದ್ರ ಸರ್ಕಾರದಿಂದ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.