ಸಾರಾಂಶ
ಬಳ್ಳಾರಿ: ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ- 2024ರ ಅಂಗವಾಗಿ ಸಿರಿಧಾನ್ಯ ಬಳಕೆ ಹಾಗೂ ಆರೋಗ್ಯ ದೃಷ್ಠಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಗುರುವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ನಡೆಯಿತು. ಮೇಳಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಜಾಗೃತಿ ನಡಿಗೆಯಲ್ಲಿ ‘ಜೋಳ ತಿಂದವನು ತೋಳದಂತಾಗುವನು, ಅಕ್ಕಿಯನ್ನು ತಿಂದವನು ಹಕ್ಕಿಯಂತಾಗುವನು’, ‘ಸಿರಿಧಾನ್ಯ ತಾಕತ್ತು ಸಕಲ ಪೌಷ್ಟಿಕಾಂಶಗಳ ಸಂಪತ್ತು’, ‘ರಾಗಿ ತಿಂದವನು ರೋಗದಂತೆ ಮುಕ್ತರಾಗುವರು’, ‘ಸಿರಿಧಾನ್ಯ ತಿಂದವರು ಆರೋಗ್ಯದಿಂದ ಸಿರಿವಂತರಾಗುವರು’ ಎಂಬ ಸಂದೇಶ ಸಾರುವ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಎಚ್.ಆರ್. ಗವಿಯಪ್ಪ ವೃತ್ತದಿಂದ ಎಸ್ಪಿ ವೃತ್ತ ಮೂಲಕ ಕನಕದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಮರಳಿತು. ಡೊಳ್ಳು ಕುಣಿತ, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ನಡಿಗೆಯಲ್ಲಿ ಸುಮಾರು 300ಕ್ಕೂ ಜನ ಭಾಗವಹಿಸಿದ್ದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮೊಹಮ್ಮದ್ ಝುಬೇರ್, ಕೃಷಿ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಸೇರಿದಂತೆ ಕೃಷಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಡಿಗೆಯ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸವಿಯಲು ಸಿರಿಧಾನ್ಯದ ಸಾಮಿ ಪಾಯಸ, ಸಾಮೆ ಉಪ್ಪಿಟ್ಟು, ನವಣೆ ಬಾತ್, ಸಾವಯವದ ಬೆಲ್ಲದ ಛಾಯೆನು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು, ಇತರೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಿರಿಧಾನ್ಯಗಳಿಂದ ಮಾಡಿದ ಉಪ್ಪಿಟ್ಟು, ನವಣೆ ಬಾತ್ ಮತ್ತು ಸಿಹಿ ಪಾಯಸವನ್ನು ಸವಿದರು.