ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಸಚಿವರಿಂದ ಚಾಲನೆ

| Published : Jul 02 2025, 12:19 AM IST

ಸಾರಾಂಶ

ವಿಜಯಪುರ: ಪಟ್ಟಣದ ಯಲುವಹಳ್ಳಿ ರಸ್ತೆಯ ಮುನೇಶ್ವರಸ್ವಾಮಿ ದೇವಾಲಯದಿಂದ ವೆಂಕಟೇನಹಳ್ಳಿಯ ಕಡೆಗೆ ಸಂಚರಿಸುವ ರಸ್ತೆ ನಡುವೆ ೨ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಿರುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶುಂಕುಸ್ಥಾಪನೆ ಮಾಡಿದರು.

ವಿಜಯಪುರ: ಪಟ್ಟಣದ ಯಲುವಹಳ್ಳಿ ರಸ್ತೆಯ ಮುನೇಶ್ವರಸ್ವಾಮಿ ದೇವಾಲಯದಿಂದ ವೆಂಕಟೇನಹಳ್ಳಿಯ ಕಡೆಗೆ ಸಂಚರಿಸುವ ರಸ್ತೆ ನಡುವೆ ೨ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಿರುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶುಂಕುಸ್ಥಾಪನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಅನುಕೂಲವಾಗುವಂತೆ, ಇಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವಂತೆ ರಾಜ್ಯ ರೈತ ಸಂಘದ ಮುಖಂಡರೂ ಸೇರಿದಂತೆ ಸ್ಥಳೀಯರಿಂದ ಬೇಡಿಕೆ ಇದ್ದ ಕಾರಣ, ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜ್ ಅವರಿಗೆ ಮನವಿ ಸಲ್ಲಿಸಿ, ಚೆಕ್ ಡ್ಯಾಂ ನಿರ್ಮಾಣ ಮಾಡಲು ಚಾಲನೆ ನೀಡಲಾಗಿದೆ. ಇದರಿಂದ ಸುತ್ತಮುತ್ತಲಿನ ರೈತರ ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಹೆಚ್ಚಾಗಲು ಸಹಕಾರಿಯಾಗುತ್ತದೆ. ಜೊತೆಗೆ ರೈತರ ಆರ್ಥಿಕ ಸದೃಢತೆಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮುನೇಶ್ವರಸ್ವಾಮಿ ದೇವಾಲಯದಿಂದ ವೆಂಕಟೇನಹಳ್ಳಿಯ ತೋಟಗಳ ಮನೆಗಳವರೆಗೆ ರಸ್ತೆ ನಿರ್ಮಾಣ ಹಾಗೂ ಚೆಕ್ ಡ್ಯಾಂ ಮೇಲ್ಸೆತುವೆ ನಿರ್ಮಾಣಕ್ಕೆ ಸ್ಥಳೀಯರು ಮನವಿ ಮಾಡಿದ್ದು, ಈ ಕೆಲಸದ ಜೊತೆಗೆ, ಅವರ ಬೇಡಿಕೆಯನ್ನೂ ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಪುರಸಭಾಧ್ಯಕ್ಷರಾದ ಭವ್ಯ ಮಹೇಶ್ ಪೌರಕಾರ್ಮಿಕರೊಂದಿಗೆ ಪೌರಕಾರ್ಮಿಕರ ನಿವೇಶನಗಳಿಗಾಗಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯಪುರ ತಾಲೂಕು ಕೇಂದ್ರಕ್ಕೆ ಪ್ರಯತ್ನ:

ಜು.೨ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ಇಡಲಾಗುವುದು. ಸ್ಥಳೀಯವಾಗಿ ವಿ.ಮಂಜುನಾಥ್, ಎಂ.ಸತೀಶ್ ಕುಮಾರ್, ಪುರಸಭೆ ಅಧ್ಯಕ್ಷೆ ಭವ್ಯಾಮಹೇಶ್ ಮತ್ತು ಸದಸ್ಯರು ಬೇಡಿಕೆ ಇಟ್ಟಿದ್ದಾರೆ. ನಾವೂ ಪ್ರಯತ್ನದಲ್ಲಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪುರಸಭೆ ಅಧ್ಯಕ್ಷೆ ಎಸ್ ಭವ್ಯಾಮಹೇಶ್, ಸದಸ್ಯರಾದ ರವಿ, ವಿ.ನಂದಕುಮಾರ್, ಬೈರೇಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ತಾಲೂಕು ಅಧ್ಯಕ್ಷ ಎಸ್ .ಅಶೋಕ್ ಕುಮಾರ್, ಕಾರ್ಯದರ್ಶಿ ವೈ.ಮುನಿಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಹೋಬಳಿ ಅಧ್ಯಕ್ಷ ವೆಂಕಟೇನಹಳ್ಖಿ ವೀರೇಗೌಡ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಎಂ.ವೀರಣ್ಣ, ವಿರೂಪಾಕ್ಷಪ್ಪ, ಗ್ಯಾಸ್ ಸೀನಣ್ಣ, ಕೆ.ಎಮ್.ಮಧುಮಹೇಶ್, ಅಶ್ವಥಪ್ಪ, ಗೊಡ್ಲುಮುದ್ದೇನಹಳ್ಳಿ ಮುನಿರಾಜ್, ಭಟ್ರೇನಹಳ್ಳಿನಾರಾಯಣಪ್ಪ, ಸೊಣ್ಣೇಗೌಡ, ಹುರುಳುಗುರ್ಕಿ ಸಜ್ಜದ್, ಎಚ್.ನಾರಾಯಣಸ್ವಾಮಿ, ಮಹೇಶ್, ಪುರ ರಾಮಕೃಷ್ಣಪ್ಪ ಇತರರಿದ್ದರು.