ಸಾರಾಂಶ
ಹಿಂದೂ ಯುವಕರೇ ಪಂಜಾಗಳನ್ನು ಹಿಡಿದು ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಭಕ್ತಾದಿಗಳು ಪಂಜಾಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯವನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಾರೆ.
ಬಸವರಾಜ ಹಿರೇಮಠಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮವು ಸುಮಾರು ೧೨೦ ಮನೆ, ೭೦೦ ಜನಸಂಖ್ಯೆ ಹೊಂದಿರುವ ಪುಟ್ಟ ಹಳ್ಳಿ. ಈ ಗ್ರಾಮದಲ್ಲಿ ಒಂದೂ ಮುಸ್ಲಿಂ ಮನೆ ಇಲ್ಲದಿದ್ದರೂ ಹಿಂದೂಗಳೇ ಮೊಹರಂ ಹಬ್ಬ ಆಚರಿಸುತ್ತಾ ಸೌಹಾರ್ದದ ಸಂದೇಶ ಸಾರುತ್ತಿದ್ದಾರೆ.
ಹಿಂದೂ ಯುವಕರೇ ಪಂಜಾಗಳನ್ನು ಹಿಡಿದು ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಭಕ್ತಾದಿಗಳು ಪಂಜಾಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯವನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಾರೆ. ಖತ್ತಲ ರಾತ್ ದಿನದಂದು ಮೌಲಾ ಅಲಿ, ಬೀಬಿ ಫಾತಿಮಾ, ಹಸೇನ್ ಹುಸೇನ ದೇವರ ಪಂಜಾಗಳಿಗೆ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿ ಹರಕೆ ತೀರಿಸುತ್ತಾರೆ.ಮೊಹರಂ ಕೊನೆಯ ದಿನದಂದು ಬೆಳಗ್ಗೆ ಪಂಜಾಗಳನ್ನು ಹಿಡಿದು ಡೋಲಿಯನ್ನು ಹೊತ್ತ ಯುವಕರು ಗ್ರಾಮದ ತುಂಬೆಲ್ಲ ಸಂಚಾರ ಮಾಡುತ್ತಾರೆ ಹಾಗೂ ಬಳಿಕ ಕೆಂಡ ಹಾಯುವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗುತ್ತದೆ.ಪಕ್ಕದ ಕುನ್ನೂರ ಗ್ರಾಮದ ಮುಸ್ಲಿಂ ಸಮುದಾಯದ ಹಿರಿಯರು ಬಂದು ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಪ್ರತಿವರ್ಷ ಗ್ರಾಮದ ದೇವಸ್ಥಾನದ ದ್ಯಾಮವ್ವ ದೇವಿ ಮುಂಭಾಗದಲ್ಲಿ ಪಂಜಾಗಳ ಪ್ರತಿಷ್ಠಾಪನೆ ಮಾಡಿ ಐದು ದಿನಗಳವರೆಗೆ ವಿಶೇಷ ಪೂಜೆ ಮಾಡಲಾಗುತ್ತದೆ.ಬೀಬಿ ಫಾತಿಮಾ ಮತ್ತು ಮೌಲಾ ವಲಿ ದೇವರಿಗೆ ಗ್ರಾಮಸ್ಥರು ತಮ್ಮ ಇಷ್ಟಾರ್ಥ ಪೂರೈಸುವಂತೆ ಹರಕೆ ಸಲ್ಲಿಸುತ್ತಾರೆ. ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಗ್ರಾಮಸ್ಥರ ನೆಂಟರೂ ಆಗಮಿಸಿ ಪಾಲ್ಗೊಳ್ಳುವುದು ವಿಶೇಷವಾಗಿದೆ.ಕಳೆದ ಒಂದು ತಿಂಗಳಿಂದಲೆ ಯುವಕರು ಹಬ್ಬದ ತಯಾರಿ ಮಾಡುತ್ತಾ ರಿವಾಯತ್ ಹಾಡುಗಳಿಗೆ ಹೆಜ್ಜೆ ಹಾಕುತ್ತ ಸಂಭ್ರಮಿಸುತ್ತಾರೆ. ಕೊನೆಯ ದಿನ ದೇವರನ್ನು ಹೊಳೆಗೆ ಕಳುಹಿಸುವ ಆಚರಣೆ ವೇಳೆ ಗ್ರಾಮಸ್ಥರು ಡೋಲಿ ಮತ್ತು ಪಂಜಾ ದೇವರುಗಳಿಗೆ ಬೆಲ್ಲ ಉತ್ತತ್ತಿ ಎಸೆಯುತ್ತಾರೆ. ಮೊಹರಂ ಹಬ್ಬ ಆಚರಿಸುತ್ತಾ ಭಾವೈಕ್ಯತೆಯನ್ನು ಮೆರೆಯುತ್ತಿದ್ದಾರೆ.ಕೈಲಾದ ಸೇವೆ: ಕಷ್ಟ ಎಂದು ಬಂದವರಿಗೆ ಅಲೈ ದೇವರು ಒಳಿತು ಮಾಡುತ್ತಾನೆ ಎಂಬ ನಂಬಿಕೆ ಇದೆ. ನಮ್ಮೂರಲ್ಲಿ ಮಸಲ್ಮಾನರು ಇಲ್ಲದಿದ್ದರೂ ಎಲ್ಲರೂ ಒಗ್ಗೂಡಿ ಪ್ರತಿವರ್ಷ ಮೊಹರಂ ಆಚರಿಸುತ್ತ ಬಂದಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮುಖಂಡ ವರುಣಗೌಡ್ರ ಪಾಟೀಲ ತಿಳಿಸಿದರು.