ಸಾರಾಂಶ
ಮಂಡ್ಯ : ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಸೇನಾ ಕಾರ್ಯಾಚರಣೆ ಮಾಡಿರುವ ಭಾರತದ ಸೈನಿಕರಿಗೆ ಮತ್ತಷ್ಟು ಬಲ ತುಂಬಲು ಚಾಮುಂಡೇಶ್ವರಿನಗರದ ಶ್ರೀಶನೇಶ್ಚರ ದೇವಾಲಯದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.
ಹಿಂದೂ ಹಿತರಕ್ಷಣಾ ಸಮಿತಿಯಿಂದ ಶನೇಶ್ಚರ ದೇವಾಲಯದಲ್ಲಿ ಮಹಾ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಭಾರತದ ಯೋಧರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಕಾಪಾಡುವಂತೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಆವರಣದಲ್ಲಿ ಅಗ್ನಿಕುಂಡವನ್ನು ಇಟ್ಟು ವಿಶೇಷವಾಗಿ ಅಲಂಕರಿಸಿ ಗಣಪತಿ ಪೂಜೆ, ಪುಣ್ಯಾಹಾ, ನವಗ್ರಹಶಾಂತಿ, ಗಣಪತಿ ಹೋಮ, ಮೃತ್ಯುಂಜಯ ಪೂಜೆ, ಮೃತ್ಯಂಜಯ ಹೋಮ ಸೇರಿದಂತೆ ವಿವಿಧ ಧಾರ್ಮಿ ಪೂಜಾ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ, ವಿಧಿ ವಿಧಾನದ ಮೂಲಕ ನಡೆಸಲಾಯಿತು.
ವೈರಿ ರಾಷ್ಟ್ರ ಪಾಕಿಸ್ತಾನದ ಸೈನಿಕರಿಂದ ಭಾರತದ ಯೋಧಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಎಲ್ಲ ರೀತಿಯಲೂ ನಮ್ಮ ಸೈನಿಕರಿಗೆ ದೈವಬಲ ಸಿಗಲಿ ಎಂಬ ಸದುದ್ದೇಶದಿಂದ ಹೋಮ ಮತ್ತು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀಶನೀಶ್ಚರ ದೇವಾಲಯದ ಪ್ರಧಾನ ಅರ್ಚಕ ನವೀನ್ ಧೀಕ್ಷಿತ್ ನೇತೃತ್ವದ ಋತ್ವಿಕರ ತಂಡ ಪೂಜಾ ಕಾರ್ಯಗಳನ್ನು ಕೈಗೊಂಡಿತು. ಹಿಂದೂ ಹಿತರಕ್ಷಣಾ ಸಮಿತಿ ಮುಖಂಡರು, ಜೀವಧಾರೆ ಟ್ರಸ್ಟ್ನ ನಟರಾಜು, ಮಂಡ್ಯ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮಂಟೇಸ್ವಾಮಿ, ಸೈನಿಕರ ಕುಟುಂಬದವರು ಭಾಗವಹಿಸಿದ್ದರು.