ಸಾರಾಂಶ
ಚಿತ್ರಕಲೆಯು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಭಾವನೆಗಳ ಅಭಿವ್ಯಕ್ತಿಯ ಕಲ್ಪನಾಶಕ್ತಿ ಅಧಿಕಗೊಳ್ಳಲು ಚಿತ್ರಕಲೆ ನೆರವಾಗುತ್ತದೆ.
ಧಾರವಾಡ:
ಪ್ರತಿ ಮಗುವೂ ವಿಭಿನ್ನ ಶೈಲಿಗಳಲ್ಲಿ ತನ್ನ ಮನದಾಳದ ಕಲ್ಪನೆಗಳಿಗೆ ಅನುಸಾರವಾಗಿ ಗೀಚುವುದರಲ್ಲಿಯೇ ಆನಂದ ಅನುಭವಿಸುತ್ತದೆ. ನಂತರ ಶಾಲಾ ಕಲಿಕೆಯಲ್ಲಿ ಶಿಕ್ಷಕರು ಚಿತ್ರಗಳ ಮೂಲಕವೇ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಪ್ರತಿಪಾದಿಸಿದರು.ಇಲ್ಲಿಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಐದು ದಿನಗಳ ಕಲಾಕೃತಿ ರಚನಾ ಶಿಬಿರವನ್ನು ಉದ್ಘಾಟಿಸಿದ ಅವರು, ಚಿತ್ರಕಲೆಯು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಭಾವನೆಗಳ ಅಭಿವ್ಯಕ್ತಿಯ ಕಲ್ಪನಾಶಕ್ತಿ ಅಧಿಕಗೊಳ್ಳಲು ಚಿತ್ರಕಲೆ ನೆರವಾಗುತ್ತದೆ ಎಂದರು.
ಪ್ರಸ್ತುತ 2024-25ರ ಶೈಕ್ಷಣಿಕ ಬಲವರ್ಧನೆ ವರ್ಷದ ಅಂಗವಾಗಿ ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಎಂಬ ಪ್ರಧಾನ ಆಶಯದ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸದ ಪರಿಕಲ್ಪನೆಗಳೊಂದಿಗೆ ವಿಜಯಪುರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ 50 ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರು ವಿಶಿಷ್ಟ ಕಲಾಕೃತಿ ಸಿದ್ಧಪಡಿಸಲಿದ್ದಾರೆ ಎಂದರು.ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಮಕ್ಕಳ ಚಿತ್ರಗಳಲ್ಲಿ ಒಂದು ಶಕ್ತಿ ಇದೆ. ಕಾರಣ ಮಕ್ಕಳ ಚಿತ್ರಕಲೆ ಶುದ್ಧವಾದ ಕಲೆ. ಹಾಗಾಗಿ ಮಕ್ಕಳ ಚಿತ್ರಗಳು ಅಮೂಲ್ಯವಾದವು. ಅವರು ತಮ್ಮದೇ ಆದ ಕಲ್ಪನೆಯಿಂದಲೇ ಚಿತ್ರಿಸುತ್ತಾರೆ. ಅವರ ಚಿತ್ರಗಳೆಂದರೆ ಅನುಭವ ಪರಂಪರೆಯ ಅಭಿವ್ಯಕ್ತಿ ಎಂದರು.
ಆಯುಕ್ತರ ಕಚೇರಿಯ ಆಡಳಿತ ಡಿಡಿಪಿಐ ಸಂಜೀವ ಬಿಂಗೇರಿ, ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕುರಿಯವರ ಹಾಗೂ ನಿವೃತ್ತ ಶಿಕ್ಷಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಎಸ್.ಎ. ಕೇಸರಿ, ಗುರುರಾಜ ಅಂಬೇಕರ ಮತ್ತಿತರು ಇದ್ದರು. ಪ್ರವೀಣ ಬಿರಾದಾರ ಸ್ವಾಗತಿಸಿದರು. ಬಿ.ವೈ. ಭಜಂತ್ರಿ ವಂದಿಸಿದರು. ಡಾ. ಸಂಗಮೇಶ ಬಗಲಿ ಸ್ವತಃ ಸಿದ್ಧಪಡಿಸಿ ತಂದಿದ್ದ ಆಯುಕ್ತರ ಭಾವಚಿತ್ರವನ್ನು ಜಯಶ್ರೀ ಶಿಂತ್ರಿ ಅವರಿಗೆ ಸಲ್ಲಿಸಿದರು.