ಸಾರಾಂಶ
ಹರಪನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚನೆ । ಮಾದರಿ ಕ್ಷೇತ್ರವಾಗಿಸಲು ಶ್ರಮ; ಭರವಸೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಕ್ಷೇತ್ರದ ಸಂಸದೆಯಾಗಿ ಕೆಲಸ ಮಾಡಲು ನನಗೊಮ್ಮೆ ಅವಕಾಶ ಕೊಡಿ, ಪ್ರಾಮಾಣಿಕವಾಗಿ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ. ಆ ಮೂಲಕ ನಿಮ್ಮೆಲ್ಲರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಹರಪನಹಳ್ಳಿ ತಾಲೂಕಿನ ಜನತೆಗೆ ಮನವಿ ಮಾಡಿದರು.ಹರಪನಹಳ್ಳಿ ತಾಲೂಕು ದುಗ್ಗಾವತಿ, ಕಡತಿ, ನಿಟ್ಟೂರು ಇತರೆ ಗ್ರಾಮಗಳಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ನನಗೊಮ್ಮೆ ಅವಕಾಶ ಕೊಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವೆ. ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ನಿಸ್ವಾರ್ಥದಿಂದ ಕೆಲಸ ಮಾಡುವೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 10 ತಿಂಗಳಲ್ಲಿ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ತಮ್ಮನ್ನು ಕ್ಷೇತ್ರದ ಮತದಾರರು ಸಂಸದೆಯಾಗಿ ಆಯ್ಕೆ ಮಾಡಿದರೆ, ಕೇಂದ್ರ ಸರ್ಕಾರದಿಂದಲೂ ಹೆಚ್ಚು ಅನುದಾನ ತಂದು, ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು. ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಒಟ್ಟಿನಲ್ಲಿ ಪ್ರಾಮಾಣಿಕವಾಗಿ, ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿ ಹಿಂದೆ ತಮ್ಮ ಮಾವ ಡಾ.ಶಾಮನೂರು ಶಿವಶಂಕರಪ್ಪ ಸಚಿವರಿದ್ದಾಗ, ಪತಿ ಎಸ್.ಎಸ್. ಮಲ್ಲಿಕಾರ್ಜುನ ಮೂರನೇ ಅವದಿಗೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಜನ ಸೇವೆ, ಅಭಿವೃದ್ಧಿ ಕಾರ್ಯ ಕೈಗೊಳ್ಳುವೆ ಎಂದು ಅವರು ಹೇಳಿದರು.ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹರಪನಹಳ್ಳಿ ಭಾಗಕ್ಕೆ ₹279 ಕೋಟಿ ಅನುದಾನ ತಂದು, 107 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದ್ದೇನೆ. ಕಾರ್ಮಿಕ ಇಲಾಖೆಯಿಂದ 1200 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. 1050 ಫಲಾನುಭವಿಗಳಿಗೆ ಬೆಸ್ಕಾಂನಿಂದ ಅಕ್ರಮ ಸಕ್ರಮದಡಿ ಅನುಕೂಲ ಮಾಡಿಸಿಕೊಟ್ಟಿದ್ದೇವೆ. ರಸ್ತೆಗಳ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಮಹಿಳೆಯರನ್ನು ಸಬಲರನ್ನಾಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದ ಅವರು, ಹರಪನಹಳ್ಳಿ ಕ್ಷೇತ್ರ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಸ್ತ ಮತದಾರರು ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮತ ನೀಡಿ, ಆಶೀರ್ವದಿಸಬೇಕು. ಆ ಮೂಲಕ ಪ್ರಥಮ ಸಂಸದೆಯಾಗಿ ಮಾಡಬೇಕು. ಬಹುಮತದಿಂದ ಡಾ.ಪ್ರಭಾರನ್ನು ಗೆಲ್ಲಿಸಿ, ಲೋಕಸಭೆಗೆ ನಮ್ಮ ಕ್ಷೇತ್ರದ ಪ್ರತಿನಿಧಿಯಾಗಿ ಕಳಿಸಲು ಸಂಕಲ್ಪ ಮಾಡೋಣ ಎಂದು ಅವರು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕೆ.ಕುಬೇರಪ್ಪ, ಮಹಿಳಾ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮೀ, ಮುಖಂಡರಾದ ಎಂ.ರಾಜಶೇಖರ, ಆಲದಹಳ್ಳಿ ಷಣ್ಮುಖಪ್ಪ, ಪ್ರಕಾಶ ಪಾಟೀಲ, ಸುಷ್ಮಾ ಪಾಟೀಲ, ಎಚ್.ಎಂ.ಮಲ್ಲಿಕಾರ್ಜುನ, ಕೋಡಿಹಳ್ಳಿ ಭೀಮಪ್ಪ, ಹಲಗೇರಿ ಮಂಜಪ್ಪ, ಪುರಸಭಾ ಸದಸ್ಯ ಟಿ.ವೆಂಕಟೇಶ, ಲಾಠಿ ದಾದಾಪೀರ, ತೆಲಗಿ ಜಿ.ಬಿ.ಟಿ. ಮಹೇಶ, ಯೋಗೇಶ, ಮತ್ತೂರು ಬಸವರಾಜ, ಇ.ದೇವದಾಸ, ಉದಯಶಂಕರ, ಕೊಟ್ಟೂರು ಪ್ರದೀಪ, ಮೋತಿ ನಾಯ್ಕ, ದುಗ್ಗಾವತಿ ಮಂಜು, ಕಡತಿ ಜಗದೀಶ, ಬಂಡೇಶ, ಹಾಲೇಶ ಗೌಡ ಇತರರು ಇದ್ದರು.
ಕಡತಿ ಗ್ರಾಮಕ್ಕೆ ಮತಯಾಚಿಸಲು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಆಗಮಿಸುತ್ತಿದ್ದಂತೆ ಮುತ್ತೈದೆಯರು, ಯುವತಿಯಲು ಆರತಿ ಬೆಳಗಿ, ಸ್ವಾಗತಿಸಿದರು. ಯುವಕರು ಪಟಾಕಿ ಸಿಡಿಸಿ, ತಮ್ಮ ಊರಿಗೆ ಡಾ.ಪ್ರಭಾರನ್ನು ಬರ ಮಾಡಿಕೊಂಡರು. ಕಡತಿ, ಹಲುವಾಗಲು, ಕುಂಚೂರು, ಕೆ.ಕಲ್ಲಹಳ್ಳಿ, ನೀಲಗುಂದ, ಗುಂಡಗತ್ತಿ, ಯಡಿಹಳ್ಳಿ, ತೆಲಿಗಿ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಶಾಸಕಿ ಎಂ.ಪಿ.ಲತಾ ಮತಯಾಚನೆ ಮಾಡಿದರು.- - - - - -
-14ಕೆಡಿವಿಜಿ1:ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚಿಸಿದರು. ಶಾಸಕ ಎಂ.ಪಿ.ಲತಾ ಮಲ್ಲಿಕಾರ್ಜುನ ಇತರರು ಇದ್ದರು.