ತೆಲುಗುಗೌಡ ಸಮಾಜಕ್ಕೆ ರಾಜಕೀಯ ಮೀಸಲಾತಿ: ಶಾಸಕ ಆನಂದ್ ಭರವಸೆ

| Published : Aug 14 2024, 12:45 AM IST

ತೆಲುಗುಗೌಡ ಸಮಾಜಕ್ಕೆ ರಾಜಕೀಯ ಮೀಸಲಾತಿ: ಶಾಸಕ ಆನಂದ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ತೆಲುಗುಗೌಡ ಸಮಾಜ ರಾಜಕೀಯ ಮೀಸಲಾತಿ ಇಲ್ಲದೆ ಇಂದು ಪ್ರಗತಿಯಲ್ಲಿನ ಹಿನ್ನಡೆಗೆ ಕಾರಣವಾಗಿದ್ದು, ಸಂಬಂದಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಮೀಸಲಾತಿಗೆ ಶ್ರಮಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.

ತೆಲುಗುಗೌಡ ಸಮಾಜದಿಂದ ಶಾಸಕರಿಗೆ ಅಭಿನಂದನ ಸಮಾರಂಭ

ಕನ್ನಡಪ್ರಭ ವಾರ್ತೆ,ಬೀರೂರು ತೆಲುಗುಗೌಡ ಸಮಾಜ ರಾಜಕೀಯ ಮೀಸಲಾತಿ ಇಲ್ಲದೆ ಇಂದು ಪ್ರಗತಿಯಲ್ಲಿನ ಹಿನ್ನಡೆಗೆ ಕಾರಣವಾಗಿದ್ದು, ಸಂಬಂದಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಮೀಸಲಾತಿಗೆ ಶ್ರಮಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.ಪಟ್ಟಣದ ರಾಜಾಜಿ ನಗರದಲ್ಲಿರುವ ಕರ್ನಾಟಕ ರಾಜ್ಯ ತೆಲುಗುಗೌಡ ಸಮಾಜ ಸಮುದಾಯ ಭವನದಲ್ಲಿ ಮಂಗಳವಾರ ಸಮಾಜ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, 2002ರಲ್ಲಿ ಸರ್ಕಾರ ತೆಲುಗು ಗೌಡ ಸಮಾಜಕ್ಕೆ ಪ್ರವರ್ಗ 1ರಡಿ ಉದ್ಯೋಗ, ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಮೀಸಲಾತಿ ನೀಡಿದೆ. ಆದರೆ ರಾಜಕೀಯ ಮೀಸಲಾತಿ ಯಾಕೆ ನೀಡಿಲ್ಲ ಎಂಬುದು ಗೊತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಿಂದ ಈ ಸಮಾಜದಲ್ಲಿ ಬಹಳಷ್ಟು ಅಭಿವೃದ್ಧಿ ಕಂಡು ಬದಲಾವಣೆಯಾಗಿದೆ.

ಸದ್ಯ ನೀವು ಸರ್ಕಾರಕ್ಕೆ ನೀಡಿರುವ ಮೀಸಲಾತಿ ಅರ್ಜಿ ಎಲ್ಲಿದೆ, ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ಸಂಬಂದಪಟ್ಟ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ, ಇದರ ಸಾಧಕ ಬಾಧಕ ಬಗ್ಗೆ ಚರ್ಚಿಸಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆವರಿಗೆ ಈ ಮೀಸಲಾತಿ ವಿಚಾರವಾಗಿ ಮನವಿ ನೀಡೋಣ. ಸಾಧ್ಯವಾದರೇ ಈ ಮಲತಾಯಿ ಧೋರಣೆ ನಿವಾರಿಸುವಂತೆ ನಮ್ಮ ಸಂಸದ ಶ್ರೇಯಸ್ ಪಟೇಲ್ ಗೂ ಮನವಿ ನೀಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಸಂಸತ್ ನಲ್ಲಿ ಚರ್ಚಿಸಲು ಒತ್ತಡ ಹಾಕೋಣ. ಈ ನಿಮ್ಮ ಸಮಾಜಕ್ಕೆ ಮೀಸಲಾತಿ ಲಭಿಸುವವರೆಗೂ ಸದಾ ನಿಮ್ಮ ಜೊತೆಗಿರುತ್ತೇನೆ ಎಂದರು. ಸಮಾಜದ ಮುಖಂಡರು, ಬ್ಯಾಗಡೇಹಳ್ಳಿ ಗೇಟ್ ಮುಂಭಾಗದ ಸಮಾಜಕ್ಕೆ ಸುಮಾರು 2.5ಎಕರೆ ಭೂಮಿ ಹೊಂದಿದ್ದು, ಅದರ ಅಭಿವೃದ್ಧಿಗೆ ಏನೇನು ಬೇಕು ಅವುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಕ್ಷೇತ್ರಕ್ಕೆ ಬರುತ್ತಿರುವ ಅನುದಾನದಲ್ಲಿ ತಾಲೂಕಿನಲ್ಲಿರುವ ನಿಮ್ಮ ಎಲ್ಲಾ ಊರುಗಳ ರಸ್ತೆ, ಸಮುದಾಯಭವನ, ದೇಗುಲ ಅಭಿವೃದ್ಧಿ ಮತ್ತಿತರ ಕಾರ್ಯಕ್ಕೆ ಅನುದಾನ ಸಮಾನ ಹಂಚಿಕೆ ಮಾಡಿದ್ದು, ಅಭಿವೃದ್ಧಿಯತ್ತ ಗ್ರಾಮಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.ವಕೀಲ ಗೋವಿಂದಸ್ವಾಮಿ, ಸಾಮಾನ್ಯ ರೈತನ ಮಗನೂ ಕೂಡ ಶಾಸಕನಾಗಬಹುದು ಎಂದು ಕಡೂರು ಜನತೆ ನಿಮ್ಮನ್ನು ಗೆಲ್ಲಿಸಿ ತೋರಿಸಿದ್ದಾರೆ. ಕಳೆದ ಅಧಿವೇಶನದಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಯನ್ನು ಸದನದಲ್ಲಿ ಪ್ರಬುದ್ಧತೆಯಿಂದ ಮಂಡಿಸಿ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತಂದಿರುವುದು ತಾಲೂಕಿನ ಜನರ ಹೆಮ್ಮೆ. ತಾಲುಕಿನ ರೈತರ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು. ತೆಲುಗುಗೌಡ ಸಮಾಜದ ಉಪಾಧ್ಯಕ್ಷ ವಾಸುದೇವ ಮೂರ್ತಿ, ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿದ ಈ ಸಮಾಜಕ್ಕೆ ಬರೀ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಮೀಸಲಾತಿ ಕಲ್ಪಿಸಿದೆ.ಆದರೆ ರಾಜಕೀಯದಿಂದ ವಂಚಿತರನ್ನಾಗಿ ಮಾಡಿದೆ. ಗ್ರಾಪಂ ನಿಂದ ಜಿಪಂ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದ್ದರೂ ಮೀಸಲಾತಿಯಿಂದ ಅವಕಾಶ ವಂಚಿತರಾಗಿದ್ದೇವೆ. ನಮ್ಮ ಸಮಾಜದವರು ಸದಾ ನಿಮ್ಮ ಬೆನ್ನೆಲುಬಾಗಿದ್ದು, ಈ ರಾಜಕೀಯ ಮೀಸಲಾತಿ ಕೊಡಿಸಿ, ಸಮಾಜಕ್ಕೆ ಶಕ್ತಿ ತುಂಬಿ ಎಂದು ಶಾಸಕರಿಗೆ ಮನವಿ ಮಾಡಿದರು.ತಾಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಸರಸ್ವತಿಪುರ ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಹೋಗರೇಹಳ್ಳಿ ಶಶಿಕುಮಾರ್ ಮಾತನಾಡಿದರು.ವೇದಿಕೆಯಲ್ಲಿ ತೆಲುಗುಗೌಡ ಸಮಾಜದ ಕಾರ್ಯದರ್ಶಿ ಮಂಜಣ್ಣ, ಎಲ್.ಟಿ.ಹನುಮಂತಪ್ಪ, ಎಸ್.ಎಲ್.ಮಂಜುನಾಥ್, ಕುರುಬಗೆರೆ ಲೋಕೇಶ್, ಗ್ರಾಪಂ ಸದಸ್ಯ ನರಸಿಂಹಮೂರ್ತಿ, ಬಸವರಾಜ್, ರಂಗನಾಥ್, ಕೃಷ್ಣಮೂರ್ತಿ, ಸೇರಿದಂತೆ ತಾಲೂಕಿನ ತೆಲುಗುಗೌಡ ಸಮಾಜದ ಗೌಡರು, ಮುಖಂಡರು ಇದ್ದರು.13 ಬೀರೂರು 1ಬೀರೂರಿನ ರಾಜಾಜಿನಗರದ ಕರ್ನಾಟಕ ರಾಜ್ಯ ತೆಲುಗುಗೌಡ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ತೆಲುಗುಗೌಡ ಸಮಾಜದಿಂದ ಶಾಸಕ ಕೆ.ಎಸ್.ಆನಂದ್ ಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷ ವಾಸುದೇವ ಮೂರ್ತಿ, ಗೋವಿಂದಸ್ವಾಮಿ, ಕಾರ್ಯದರ್ಶಿ ಮಂಜಣ್ಣ, ಎಲ್.ಟಿ.ಹನುಮಂತಪ್ಪ, ಎಸ್.ಎಲ್.ಮಂಜುನಾಥ್ ಇದ್ದರು.