ಉದ್ಯಮಿಯಾಗಲು ಧನಾತ್ಮಕ ಚಿಂತನೆ ಮುಖ್ಯ: ಉದ್ಯಮಿ ದಿಲೀಪ ಚಂಡಕ

| Published : Aug 23 2024, 01:02 AM IST

ಸಾರಾಂಶ

ಯಾವುದೇ ಉದ್ಯಮ ಆರಂಭಿಸಬೇಕಾದರೆ ಮೊದಲು ಕಷ್ಟ ಮತ್ತು ನಷ್ಟಗಳು ಎರಡು ಜೊತೆಯಾಗುತ್ತವೆ. ಅದನ್ನು ಸಹಿಸಿಕೊಂಡು ತಾಳ್ಮೆಯಿಂದ ಮುಂದುವರೆದರೆ ಮಾತ್ರ ಬೆಳೆಯುವುದಕ್ಕೆ ಹಾಗೂ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಉದ್ಯಮಿ ದಿಲೀಪ ಚಂಡಕ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಾವುದೇ ಉದ್ಯಮ ಆರಂಭಿಸಬೇಕಾದರೆ ಮೊದಲು ಕಷ್ಟ ಮತ್ತು ನಷ್ಟಗಳು ಎರಡು ಜೊತೆಯಾಗುತ್ತವೆ. ಅದನ್ನು ಸಹಿಸಿಕೊಂಡು ತಾಳ್ಮೆಯಿಂದ ಮುಂದುವರೆದರೆ ಮಾತ್ರ ಬೆಳೆಯುವುದಕ್ಕೆ ಹಾಗೂ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಉದ್ಯಮಿ ದಿಲೀಪ ಚಂಡಕ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆಕ್ಷನ್ 8 ಕಂಪನಿಯಾದ ವಿಶ್ವೇಶ್ವರಯ್ಯ ರಿಸರ್ಚ್‌ ಮತ್ತು ಇನ್ನೋವೇಶನ್ ಫೌಂಡೇಶನ್ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವ ವಾಣಿಜ್ಯೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮದ ಬೆಳವಣಿಗೆಯ ಕಾಲದಲ್ಲಿ ಗುಣಮಟ್ಟ ಮತ್ತು ನಿರ್ವಹಣೆ ಬಗ್ಗೆ ಅನೇಕ ರೀತಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ಬರುವುದು ಸಹಜ. ಆ ಕ್ಷಣದಲ್ಲಿ ಧೃತಿಗಾಡಬಾರದು. ನಾವು ಎಲ್ಲರ ಬೇಡಿಕೆ ಮತ್ತು ಆಸಕ್ತಿಗಳನುಸಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್. ಅವರು ಜಗತ್ತಿನಲ್ಲೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಉದ್ಯೋಗಿಗಳ ಬದಲು ಉದ್ಯಮಿಗಳನ್ನು ಬೆಳೆಸುವ ಅವಶ್ಯಕತೆ ಇದೆ ಹೇಳಿದರು.

ಒಬ್ಬ ವ್ಯಕ್ತಿ ಉದ್ಯಮಿಯಾಗಿ ಬೆಳೆಯಲು ಅವನಲ್ಲಿರುವ ಆಸಕ್ತಿ ಮುಖ್ಯ ಕಾರಣವಾಗಿರುತ್ತದೆ ಅಂದರೆ ಆಸಕ್ತಿಯಿಂದ ಉದ್ಯಮಿಗಳಾಗುತ್ತಾರೆ. ಆದರೆ, ಇವತ್ತು ಆ ಆಸಕ್ತಿ ಇಲ್ಲದಿರುವ ವಿದ್ಯಾರ್ಥಿಗಳಲ್ಲಿ ಅಥವಾ ಯುವಜನರಲ್ಲಿರುವ ಇನ್ನೊವೇಟಿವ್‌ ಚಿಂತನೆ ಮತ್ತು ಕೌಶಲ್ಯವನ್ನು ಬಳಸಿಕೊಂಡು ಅವರನ್ನು ಸ್ಟಾರ್ಟ್‌ ಅಪ್ ಗಳನ್ನು ಹುಟ್ಟುಹಾಕಿ ಉದ್ಯಮಿಗಳಾಗಿ ಬೆಳೆಯುವಂತೆ ಆಸಕ್ತಿಯನ್ನು ಅವರಲ್ಲಿ ಹುಟ್ಟುಹಾಕಿ ಅದನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.

ಇದೇ ನಿಟ್ಟಿನಲ್ಲಿ ವಿಟಿಯು ವಿಶ್ವೇಶ್ವರಯ್ಯ ಸಂಶೋಧನಾ ಮತ್ತು ಇನ್ನೋವೇಶನ್ ಫೌಂಡೇಶನ್ ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬಗ್ಗೆ ಆಸಕ್ತಿ ಬೆಳೆಸಿ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.

ಎಮರ್ಜ್‌ -24 ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಟಿಯು ಕುಲಸಚಿವ ಪ್ರೊ.ಬಿ.ಈ ರಂಗಸ್ವಾಮಿ ಸ್ವಾಗತಿಸಿದರು. ವಿಆರ್ ಐಎಪ್ ಸಂಚಾಲಕ ಸಂತೋಷ ಇಟ್ಟಣಗಿ ವಂದಿಸಿದರು.