ಸಾರಾಂಶ
ಗಣಪತಿ ದೇವಾಲಯದಲ್ಲಿ ಕಾಂಗ್ರೆಸ್ ಮುಖಂಡ ಕಾಂಗ್ರೆಸ್ ಮುಖಂಡ ಕೆ.ಭರತ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗಳಿಸಲು ಹಾಗೂ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮಳೆಗಾಗಿ ಪ್ರಾರ್ಥಿಸಿ ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಭರತ್ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಸೇರಿದಂತೆ ದೇಶಾದ್ಯಂತ ಐಎನ್ಡಿಐಎ ಒಕ್ಕೂಟಗಳು ಸೇರಿ ಒಟ್ಟಾರೆ 369 ಸಂಸದರನ್ನು ಗೆಲ್ಲಿಸುವ ಮೂಲಕ ದೇಶದ ಸಂವಿಧಾನ ಹಾಗೂ ಸೌಮ್ಯತೆಯನ್ನು ಬದಲಿಸಲು ಹೊರಟಿರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಭಾರತದ ಲಕ್ಷಾಂತರ ಜನರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯಗೊಂಡ ದೇಶ. ಆಮಿಷ ಅಥವಾ ಒತ್ತಡಗಳಿಗೆ ತಲೆ ಬಾಗಬಾರದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭು. ದೇಶದ ಉಳಿವಿಗೆ ಈ ಬಾರಿ ರಾಜ್ಯ ಹಾಗೂ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಭಾರತವನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.ನೀರಿಲ್ಲದೇ ಹಾಹಾಕಾರ ಉಂಟಾಗಿ ಇಡೀ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ. ಅಲ್ಲದೇ ಬೃಹತ್ ಸಮಾರಂಭಗಳಲ್ಲಿ ಅತಿಹೆಚ್ಚು ನೀರನ್ನು ವ್ಯಯಿಸುತ್ತಿರುವ ಕಾರ್ಯಕ್ರಮಗಳಿಗೆ ತಡೆವೊಡ್ಡಿ ನೀರನ್ನು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಹೀಗಾಗಿ ಬರಗಾಲದಿಂದ ತತ್ತರಿಸಿರುವ ಜೀವಸಂಕುಲಕ್ಕೆ ಮಳೆಗಾಗಿ ಪ್ರಾರ್ಥನೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿ ಎಂಬ ಸದುದ್ದೇಶದಿಂದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಸಂಚಾಲಕಿ ನೇತ್ರಾವತಿ, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಮಾಜಿ ಸಿಡಿಎ ಸದಸ್ಯ ಆರ್. ಚಂದ್ರು, ಮುಖಂಡರಾದ ಹಾಲಪ್ಪ, ಓಂಕಾರೇಶ್, ಕುಸುಮ ಕೆ. ಭರತ್, ಆಶಾ, ಜಯಂತಿ ಜಿ.ಶಿವಾಜಿ, ಮಲ್ಲಿಕಾದೇವಿ ಇದ್ದರು.
17 ಕೆಸಿಕೆಎಂ 3ಮಳೆಗಾಗಿ ಪ್ರಾರ್ಥನೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲೆಂದು ಚಿಕ್ಕಮಗಳೂರಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.