ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ

| Published : Aug 23 2024, 01:11 AM IST

ಸಾರಾಂಶ

ಈ ಭಾಗದಲ್ಲಿ ಬಂಡೆಗಳು ಇರುವ ಕಾರಣ ಶೌಚಾಲಯಕ್ಕೆ ಗುಂಡಿ ತೋಡುವುದು ಸಹ ಕಷ್ಟಕರವಾಗಿದೆ. ಈ ಹಿಂದೆ ಪಟ್ಟಣ ಪಂಚಾಯತಿಯಿಂದ ಒಂದು ಶೌಚ ಗುಂಡಿಯನ್ನು ತೋಡಿಸಿಕೊಟ್ಟಿದ್ದರು. ಇದೀಗ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ನಮಗೆ ಮತಷ್ಟು ಸಮಸ್ಯೆಯಾಗಲಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪಟ್ಟಣದ ಬಾಪೂಜಿನಗರದ ಪದವಿ ಪೂರ್ವ ಕಾಲೇಜಿನ ಬಳಿ ವಾಸಿಸುವ ನಿವಾಸಿಗಳು ಚರಂಡಿ, ರಸ್ತೆ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯತಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳೀಯ ನಿವಾಸಿ ಮುನಿರಾಜು ಮಾತನಾಡಿ, ಸುಮಾರು ವರ್ಷಗಳಿಂದ ನಾವು ಮೂಲಭೂತ ಸಮಸ್ಯೆಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಚರಂಡಿ, ರಸ್ತೆಯಿಲ್ಲದ ಕಾರಣ ಪರದಾಡುವಂತಾಗಿದೆ. ಅದರಲ್ಲೂ ಶೌಚಾಲಯ ಸಮಸ್ಯೆ ಇದೆ ಎಂದರು.

ಶೌಚಾಲಯ ನಿರ್ಮಿಸಲು ಆಗ್ರಹ

ಈ ಭಾಗದಲ್ಲಿ ಬಂಡೆಗಳು ಇರುವ ಕಾರಣ ಶೌಚಾಲಯಕ್ಕೆ ಗುಂಡಿ ತೋಡುವುದು ಸಹ ಕಷ್ಟಕರವಾಗಿದೆ. ಈ ಹಿಂದೆ ಪಟ್ಟಣ ಪಂಚಾಯತಿಯಿಂದ ಒಂದು ಶೌಚ ಗುಂಡಿಯನ್ನು ತೋಡಿಸಿಕೊಟ್ಟಿದ್ದರು. ಇದೀಗ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ನಮಗೆ ಮತಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಪ.ಪಂ ಮುಖ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಮನೆ ನಿರ್ಮಾಣ ಮಾಡುತ್ತಿರುವವರಿಗೆ ನೋಟಿಸ್‌ ನೀಡಿ, ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ತಿಳಿಸುತ್ತೇನೆ. ಜೊತೆಗೆ ಈ ಭಾಗದಲ್ಲಿ ಕೂಡಲೇ ಸ್ವಚ್ಛಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.