ಸಾರಾಂಶ
ಗಜೇಂದ್ರಗಡ: ಕಿತ್ತೂರ ರಾಣಿ ಚೆನ್ನಮ್ಮ, ರಾಯಣ್ಣನ ಇತಿಹಾಸವನ್ನು ಎಲ್ಲೊ ಒಂದು ಒಡೆ ಮುಚ್ಚಿಡುವ ಕಾರ್ಯವಾಗುತ್ತಿದೆ. ಆದರೆ ರಾಯಣ್ಣ, ಬಸವಣ್ಣ ಹಾಗೂ ಚೆನ್ನಮ್ಮನ ಇತಿಹಾಸ ಸೂರ್ಯನ ಕಿರಣಗಳಿದ್ದಂತೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನವರ ೧೯೩ನೇ ಹುತಾತ್ಮ ದಿನ, ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಜನಪದ ಸಂಜೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಉತ್ತರ ಭಾರತದ ಇತಿಹಾಸಕಾರರು ದಕ್ಷಿಣ ಭಾಗದ ನಾಯಕರನ್ನು ಕನ್ನಡಕ್ಕೆ ಸೀಮಿತಗೊಳಿಸುವ ಕೆಲಸವನ್ನು ಮಾಡಿ ಅಲ್ಲಿನ ನಾಯಕರನ್ನು ದೇಶದ ನಾಯಕರು ಎಂಬಂತೆ ಬಿಂಬಿಸುವ ಕೆಲಸ ಮಾಡಿದ್ದಾರೆ. ಪರಿಣಾಮ ಅಪ್ರತಿಪಮ ಹೋರಾಟಗಾರರಾದ ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕ ಅವರ ರಾಷ್ಟ್ರಮನ್ನಣೆಗೆ ಒಳಪಡದಂತೆ ಅವರ ಇತಿಹಾಸವನ್ನು ಮುಚ್ಚಿಡುವ ಕೆಲಸವನ್ನು ಮಾಡಲಾಗಿದ್ದು ನೋವಿನ ಸಂಗತಿ. ಇತ್ತ ಉತ್ತರ ಕರ್ನಾಟಕದ ನಾಯಕರಿಗೆ ಹಿಂದಿನಿಂದ ಹಿಡಿದು ಇಂದಿನವರೆಗೂ ಸಹ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ನಾವು ರಾಯಣ್ಣ, ಚೆನ್ನಮ್ಮನ ಆದರ್ಶಗಳನ್ನು ಅಳವಡಿಸಿಕೊಂಡು ಅವರು ಉಳಿಸಿದ ದೇಶ ಹಾಗೂ ನಾಡನ್ನು ಕಾಯುವ ಕೆಲಸವನ್ನು ಮಾಡಬೇಕಿದೆ ಎಂದ ಅವರು, ಬಸವಣ್ಣ ಜಗತ್ತಿನ ಮಹಾನ್ ದೊಡ್ಡ ವ್ಯಕ್ತಿ. ಆದರೆ ಭಾಷೆ ಹಾಗೂ ಸಮುದಾಯದ ಚೌಕಟ್ಟಿನ ಬಂಧನದಲ್ಲಿಟ್ಟ ಕಾರಣ ಉತ್ತರ ಕರ್ನಾಟಕದಿಂದ ಬಿಡುಗಡೆಗೊಳಿಸದ ಸಂದರ್ಭವಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಹೊರದೇಶದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಖಡ್ಗ ಸೇರಿ ಇತರ ರಾಜ್ಯಕ್ಕೆ ತರಿಸಿಕೊಳ್ಳಲು ಒಗ್ಗಟ್ಟಿನಿಂದ ತರಲು ಸಂಘಟಿತವಾಗೋಣ ಎಂದರು.ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಹೋರಾಟ ಅವಿಸ್ಮರಣೀಯ. ಅವರ ದೇಶಪ್ರೇಮ ಹಾಗೂ ನಾಡಿನ ಅಭಿಮಾನವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಮುಂದಾಗೋಣ ಎಂದ ಅವರು, ಎಚ್.ಎಸ್.ಸೋಂಪುರ ಹೋರಾಟದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿದರು.
ಈ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೌರವ ಪುರಸ್ಕಾರ ಬಳಿಕ ಗುರುರಾಜ ಹೊಸಕೋಟೆ ಹಾಗೂ ಸಾದ್ವೀನಿ ಅವರ ತಂಡದಿಂದ ಜನಪದ ಸಂಜೆ ಮತ್ತು ಗಾನಲಹರಿ ಕಾರ್ಯಕ್ರಮ ನಡೆಯಿತು.ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ, ಕನಕಗುರುಪೀಠ, ಬಾದಿಮನಾಳ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ವಿ.ಆರ್.ಗುಡಿಸಾಗರ, ಹನಮಂತಪ್ಪ ಅಬ್ಬಿಗೇರಿ, ವೀರಣ್ಣ ಶೆಟ್ಟರ, ಶಿವರಾಜ ಘೋರ್ಪಡೆ, ಮಂಜುಳಾ ರೇವಡಿ, ಅಮರೇಶ ಗಾಣಿಗೇರ, ಶರಣಪ್ಪ ರೇವಡಿ, ಹಸನಸಾಬ ತಟಗಾರ, ಶಶಿಧರ ಹೂಗಾರ, ವೆಂಕಟೇಶ ಮುದಗಲ್ಲ, ಶರಣಪ್ಪ ರೇವಡಿ, ಅರ್ಜುನ ರಾಠೋಡ, ಬಸವರಾಜ ಶೀಲವಂತರ, ಎ.ಡಿ.ಕೋಲಕಾರ ಸೇರಿ ಇತರರು ಇದ್ದರು.