ವಿಧಾನಸಭೆ: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ನಿತ್ಯ 8,000 ಟನ್‌ ಕಸ ಸಂಗ್ರಹವಾಗುತ್ತಿದ್ದು, ಈ ಕಸವನ್ನು ಸಂಸ್ಕರಣೆ ಮಾಡಲು ಬೆಂಗಳೂರು ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಘಟಕ ಸ್ಥಾಪಿಸಿ ಹೊಸ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸಭೆ: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ನಿತ್ಯ 8,000 ಟನ್‌ ಕಸ ಸಂಗ್ರಹವಾಗುತ್ತಿದ್ದು, ಈ ಕಸವನ್ನು ಸಂಸ್ಕರಣೆ ಮಾಡಲು ಬೆಂಗಳೂರು ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಘಟಕ ಸ್ಥಾಪಿಸಿ ಹೊಸ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕೇವಲ ದೊಡ್ಡಬಳ್ಳಾಪುರ ಮಾತ್ರವಲ್ಲ. ಕನಕಪುರ ಹಾಗೂ ಬಿಡದಿಯಲ್ಲೂ ಘಟಕ ಸ್ಥಾಪನೆ ಮಾಡುತ್ತೇವೆ. ಸ್ಥಳೀಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ ಎಂದು ಹೇಳಿದ ಡಿಸಿಎಂ, ಪ್ರಬಲವಾಗಿರುವ ಕಸದ ಮಾಫಿಯಾವನ್ನು ಮಟ್ಟ ಹಾಕಲು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ದೊಡ್ಡಬಳ್ಳಾಪುರದ ಬಿಜೆಪಿ ಸದಸ್ಯ ಧೀರಜ್‌ ಮುನಿರಾಜು, ಈ ಹಿಂದೆ ಮುಚ್ಚಿರುವ ಟೆರಾಫಾರ್ಮಾ ಬಳಿ ಮತ್ತೊಂದು ಘಟಕ ಸ್ಥಾಪಿಸಬಾರದೆಂದೂ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂದಲಹಳ್ಳಿಯಲ್ಲಿ ಒಟ್ಟು 134.10 ಎಕರೆ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿಯಲ್ಲಿ 84.14 ಎಕರೆ ಹಾಗೂ 31.14 ಎಕರೆ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 26 ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ನಗರದ ನಾಲ್ಕು ಭಾಗದಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವೆ. ಕಸದಿಂದ ಗ್ಯಾಸ್‌, ಬಯೋ ಗ್ಯಾಸ್‌ ಉತ್ಪಾದನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದರು.

ರೈತರ ಮನವೊಲಿಸಿ:

ಕಸ ವಿಲೇವಾರಿ ಘಟಕ ಮತ್ತೆ ತೆರೆದರೆ ಜನರ ವಿರೋಧಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದಾಗ, “ಈಗ ತಂತ್ರಜ್ಞಾನ ಮುಂದುವರಿದಿದೆ. ಜನರಿಗೆ ಮನವರಿಕೆ ಮಾಡಿ ನಾನು ಬರುತ್ತೇನೆ. ಈ ಘಟಕಗಳನ್ನು ನಗರದ ನಾಲ್ಕೈದು ಕಡೆ ಮಾಡುತ್ತೇವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೇ ರೀತಿಯ ಘಟಕವನ್ನು ನಾನು ಕನಕಪುರದಲ್ಲಿಯೂ ತೆರೆಯಲು ಹೊರಟಿದ್ದೇನೆ. ಬಿಡದಿಯಲ್ಲಿಯೂ ಮಾಡುತ್ತಿದ್ದೇವೆ, ನಗರದ ಒಳಭಾಗದಲ್ಲಿ, ದಾಸರಹಳ್ಳಿ ಹಾಗೂ ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ನೀವು ರೈತರ ಮನವೊಲಿಸಿ, ಅಗತ್ಯವಿದ್ದರೆ ನಾನೂ ಬರುತ್ತೇನೆ ಎಂದು ಹೇಳಿದರು.

ಕಸದ ಮಾಫಿಯಾ ನಿಯಂತ್ರಿಸುತ್ತೇವೆ:

ಕಸದ ಮಾಫಿಯಾವನ್ನು ಬಗ್ಗುಬಡಿಯಲು ಹೊಸ ಕಾಯ್ದೆ ತನ್ನಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಕಸದ ಮಾಫಿಯಾ ಮಟ್ಟ ಹಾಕಲು ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂಬುದನ್ನು ನೋಡುತ್ತೇನೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಬಿಜೆಪಿ ಸಮಯದಲ್ಲಿ 89 ಪ್ಯಾಕೇಜ್‌ಗಳನ್ನು ಕಸ ವಿಲೇವಾರಿಗೆ ತರಲಾಗಿತ್ತು. ಇದನ್ನು ಜಾರಿಗೆ ತರಲು ಆಗಲೇ ಇಲ್ಲ. ನ್ಯಾಯಾಲಯಕ್ಕೆ ತೆರಳಿದ್ದರು. ಈಗ ಏನೇನೋ ಮಾಡಿ 33 ಪ್ಯಾಕೇಜ್‌ಗಳನ್ನು ತರಲಾಗಿದೆ ಎಂದು ಮಾಫಿಯಾ ಪ್ರಾಬಲ್ಯವನ್ನು ವಿವರಿಸಿದರು.

ಬಾಕ್ಸ್..................

ಮೋದಿ ಮೆಚ್ಚಿದ ಮಂಗಳೂರು ಮಾದರಿ ಪರಿಶೀಲಿಸುವೆ: ಡಿಕೆಶಿ

ಮಂಗಳೂರಿನಲ್ಲಿ ರೇಷ್ಮೆ ಹುಳ ಮಾದರಿಯ ಬ್ಲಾಕ್‌ ಸೋಲ್ಜರ್‌ ಫ್ಲೈ ಬಳಸಿಕೊಂಡು ಕಸವನ್ನು ಗೊಬ್ಬರ ಮಾಡಲಾಗಿದೆ. ಇದು ಕಸವನ್ನು ತಿಂದು ಗೊಬ್ಬರ ಮಾಡುತ್ತದೆ. ಈ ಪ್ರಯೋಗದ ಬಗ್ಗೆ ಪ್ರಧಾನಿ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಯತ್ನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ವೇಳೆ ಬಿಜೆಪಿಯ ಸುನಿಲ್‌ ಕುಮಾರ್‌, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ತೋಟದಲ್ಲಿ ಮಾಡಿರುವ ಪ್ರಯೋಗವಿದು. ನೀವು ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದರು.

ಡಿ.ಕೆ. ಶಿವಕುಮಾರ್‌, ‘ಬರುತ್ತೇನೆ. ಒಳ್ಳೆಯದನ್ನು ಎಲ್ಲಿದ್ದರೂ ಅಳವಡಿಸಿಕೊಳ್ಳುತ್ತೇವೆ. ಮಂಗಳೂರಿನಲ್ಲಿ ಹುಳದ ಮೂಲಕ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ವೀಕ್ಷಿಸಿ ಬೆಂಗಳೂರಿನಲ್ಲಿ ಅದನ್ನು ಅಳವಡಿಸುವ ಬಗ್ಗೆಯೂ ಪರಿಶೀಲಿಸುತ್ತೇವೆ’ ಎಂದರು.