ಸಾರಾಂಶ
ಉಡುಪಿ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ ನಲ್ಲಿ ಇತ್ತೀಚೆಗೆ ಉಡುಪಿ ನಗರಸಭೆಯ ಈಶ್ವರನಗರ ವಾರ್ಡ್ ನ ಜನಸಂಪರ್ಕ ಸಭೆ ನಡೆಯಿತು. ಶಾಸಕ ಯಶ್ಪಾಲ್ ಸುವರ್ಣ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಭಾಗಗಳಿಗೆ ಅನುಗುಣವಾಗಿ ಸಾರ್ವಜನಿಕ ಸಮಸ್ಯೆಗಳು ಕೂಡ ಭಿನ್ನವಾಗಿರುತ್ತವೆ. ಸ್ಥಳೀಯರನ್ನು ಭೇಟಿ ಮಾಡಿ ಅವರ ಜೊತೆ ಸಂವಾದ ನಡೆಸಿದಾಗ ಸಮಸ್ಯೆಗಳ ತೀವ್ರತೆ ಮತ್ತು ನೈಜತೆಯ ಸ್ಪಷ್ಟ ಚಿತ್ರಣದ ಅರಿವಾಗುತ್ತದೆ ಮತ್ತು ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ. ಈ ಉದ್ದೇಶದಿಂದ ಉಡುಪಿ ನಗರದ ಎಲ್ಲಾ ಭಾಗಗಳಲ್ಲಿಯೂ ಜನಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕರಾದ ಯಶಪಾಲ್ ಸುವರ್ಣ ಹೇಳಿದರು. ಅವರು ಇಲ್ಲಿನ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ ನಲ್ಲಿ ನಗರಸಭೆಯ ಈಶ್ವರನಗರ ವಾರ್ಡ್ ನ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಅವರು ಮಾತನಾಡಿ, ಸುಮಾರು ಒಂದುವರೆ ವರ್ಷಗಳ ಕಾಲ ಉಡುಪಿ ನಗರಸಭೆ ಆಡಳಿತವು ಜಿಲ್ಲಾಡಳಿತದ ಮೂಲಕ ನಡೆಯುತ್ತಿದ್ದು ಎರಡು ತಿಂಗಳ ಹಿಂದೆ ತಮ್ಮ ನೇತೃತ್ವದ ನಗರಸಭೆ ಸ್ಥಾಪಿತವಾದ ನಂತರ ಹಲವಾರು ಜನಪರ ಯೋಜನೆಗಳನ್ನು ಕೈಗೊಳ್ಳ ಲಾಗಿದೆ. ಅದರಂತೆ ಕುಡಿಯುವ ನೀರಿನ ದರವನ್ನು ಕೂಡ ಕಡಿಮೆ ಮಾಡಲಾಗಿದೆ ಎಂದು ಹೇಳಿದರು.ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಮಾಜಿ ನಗರಸಭೆಯ ಅಧ್ಯಕ್ಷೆ ಸುಮಿತ್ರ ಆರ್. ನಾಯಕ್, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಟಿ.ಜಿ ಹೆಗಡೆ, ವಿಜಯಲಕ್ಷ್ಮಿ, ಅನಿತಾ ಬೆಲಿಂಡ ಡಿಸೋಜ, ಸ್ಥಳೀಯ ಸಾಮಾಜಿಕ ಸಂಸ್ಥೆಗಳ ಪ್ರಮುಖರಾದ ರಾಜವರ್ಮ ಅರಿಗ, ಹರೀಶ್ ಜಿ. ಕಲ್ಮಾಡಿ, ದಿನೇಶ್ ಹೆಗ್ಡೆ ಆತ್ರಾಡಿ ಇತರ ಪ್ರಮುಖರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್ ಅವರು ಕಾರ್ಯಕ್ರಮ ಸಂಘಟಿಸಿದರು