ಬೀದರ್‌ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಬಸ್‌ ಸೌಲಭ್ಯ

| Published : Jul 20 2025, 01:15 AM IST

ಬೀದರ್‌ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಬಸ್‌ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್‌ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್‌ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಅವರು ಶನಿವಾರ ಬೀದರ್‌ ನಗರದ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇವರು ಪ್ರಸ್ತುತಪಡಿಸಿರುವ ವಿನೂತನ ಪ್ರವಾಸ ಕಾರ್ಯಕ್ರಮ ''''''''''''''''ಬೀದರ್‌ ದರ್ಶನ'''''''''''''''' ಒಂದು ದಿನದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೀದರ್‌ ಜಿಲ್ಲೆಯಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಿಸರ ಪ್ರವಾಸಿ ತಾಣಗಳಾದ ಬೀದರ್‌ ಕೋಟೆ, ಗುರುದ್ವಾರ, ಬರೀದ್‌ ಶಾಹಿ ಉದ್ಯಾನ, ಪಾಪನಾಶ ದೇವಸ್ಥಾನ, ಝರಣಿ ನರಸಿಂಹ ದೇವಸ್ಥಾನ, ಅಷ್ಟೂರ ಗುಂಬಜ ಮತ್ತು ಚೌಖಂಡಿ, ಬ್ಲ್ಯಾಕ್‌ ಬಕ್‌ ಸಫಾರಿ, ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಭಾಲ್ಕಿ ಕೋಟೆ, ಹುಮನಾಬಾದ್‌ ವೀರಭಧ್ರೇಶ್ವರ ದೇವಸ್ಥಾನ, ಮಾಣಿಕಪ್ರಭು ದೇವಸ್ಥಾನ ಚಳಕಾಪುರ ಸಿದ್ಧಾರೂಢ ಮಠ, ಹನುಮಾನ ದೇವಸ್ಥಾನ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಲು ಈ ಬಸ್‌ ಸೌಲಭ್ಯ ಅನುಕೂಲ ಆಗಲಿದೆ.

ಪ್ರವಾಸಿಗರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು, ವಯಸ್ಕರಿಗೆ 685ರು., ಮತ್ತು ಶಾಲಾ ಮಕ್ಕಳಿಗೆ 400ರು,. ಟಿಕೆಟ್‌ ದರ ಇರುತ್ತದೆ ಹಾಗೂ ರಾಜ್ಯ ಮತ್ತು ಜಿಲ್ಲೆಯ ಪ್ರವಾಸಿಗರಿಗೆ ಬಹಳ ಅನುಕೂಲ ಆಗಲಿದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಅನಿರುದ್ಧ ದೇಸಾಯಿ, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ವ್ಯವಸ್ಥಾಪಕ ಶಿವಕುಮಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾಸ: ಪ್ಯಾಕೇಜ್‌ ವಿವರ

ಪ್ರತಿದಿನ ಪ್ರವಾಸಿ ಬಸ್‌ ಬರೀದ್‌ ಶಾಹಿ ಉದ್ಯಾನವನದಿಂದ ಆರಂಭವಾಗಲಿದೆ. ಪ್ಯಾಕೇಜ್‌ 1) 6.30 ಪ್ರಾರಂಭವಾಗಿ 7:30ಕ್ಕೆ ಬ್ಲ್ಯಾಕ್‌ ಬಕ್‌ ಸಫಾರಿ, 9:30ಕ್ಕೆ ಝರಣಾ, 11:30ಕ್ಕೆ ಅಷ್ಟೂರ ಗುಂಬಜ್‌ ಮತ್ತು ಚೌಖಂಡಿ, 1:30ಕ್ಕೆ ಗುರು ನಾನಕ ಝೀರಾ, 2:30 ಊಟದ ವಿರಾಮ, 4:30ಕ್ಕೆ ಬರೀದ್‌ ಶಾಹಿ ಉದ್ಯಾನ, 5:30ಕ್ಕೆ ಪಾಪನಾಶ ದೇವಸ್ಥಾನ, 6:30ಕ್ಕೆ ಮುಕ್ತಾಯವಾಗಲಿದೆ. ಇನ್ನು, ಪ್ಯಾಕೇಜ್‌ 2ರಲ್ಲಿ ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಭಾಲ್ಕಿ ಕೋಟೆ, ಹುಮನಾಬಾದ್‌ ವೀರಭದ್ರೇಶ್ವರ ದೇವಸ್ಥಾನ, ಮಾಣಿಕಪ್ರಭು ದೇವಸ್ಥಾನ ಚಳಕಾಪುರ ಸಿದ್ಧಾರೂಢ ಮಠ, ಹನುಮಾನ ದೇವಸ್ಥಾನ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಿಸಲಾಗುತ್ತದೆ ಹಾಗೂ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9845624001 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹೇಳಿದರು.