ಸಾರಾಂಶ
ಗದಗ: ಗದಗ ಜಿಲ್ಲಾ ವಿವಿಧ ಆಟೋ ಚಾಲಕರ, ಮಾಲೀಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಜ. 28ರ ಭಾನುವಾರ ಬೆಳಗ್ಗೆ 10ಕ್ಕೆ ಡಾ.ಅಂಬೇಡ್ಕರ ಭವನದಲ್ಲಿ ಬೃಹತ್ ಸಮಾವೇಶ ಜರುಗಲಿದೆ ಎಂದು ಸಂಘಟನೆಯ ಪ್ರಮುಖರಾದ ವಿ.ಆರ್. ಗೋವಿಂದಗೌಡ್ರ ಹೇಳಿದರು. ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಗ್ಗೆಯೇ ನಗರದ ತೋಂಟದಾರ್ಯ ಮಠದಿಂದ ಅಂಬೇಡ್ಕರ ಭವನದವರೆಗೆ ಅಟೋಗಳ ಬೃಹತ್ ಮೆರವಣಿಗೆ ಜರುಗಲಿದ್ದು, ಒಟ್ಟು 5 ಸಾವಿರ ಅಟೋಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು. ಹುಬ್ಬಳ್ಳಿ ಧಾರವಾಡದಿಂದ 1 ಸಾವಿರಕ್ಕೂ ಹೆಚ್ಚಿನ ಅಟೋಗಳು ಪಾಲ್ಗೊಳ್ಳಲಿದ್ದು, ಅಲ್ಲಿಂದ ಗದಗವರೆಗೂ ಮೆರವಣಿಗೆ ನಡೆಸಲಿದ್ದಾರೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದ ಸಾನಿಧ್ಯನ್ನು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ಕಾರ್ಯಕ್ರಮವನ್ನು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಕಾರ್ಮಿಕ ಸಚಿವ ಸಂತೋಷ ಲಾಡ್ ಆಗಮಿಸುವರು, ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಗಮಿಸುವರು ಎಂದರು. ಅಂಬೇಡ್ಕರ ಭಾವಚಿತ್ರಕ್ಕೆ ಎಸ್.ಎನ್. ಬಳ್ಳಾರಿ ಪೂಜೆ ಸಲ್ಲಿಸುವರು. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಿವಿಧ ಆಟೋ ಚಾಲಕರ, ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ ವಹಿಸುವರು. ಅತಿಥಿಗಳಾಗಿ ರೋಣ ಶಾಸಕ ಜಿ.ಎಸ್.ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ವಿಪ ಸದಸ್ಯ ಸಲೀಂ ಅಹ್ಮದ, ಮಾಜಿ ಶಾಸಕ ಡಿ.ಆರ್.ಪಾಟೀಲ, ಹುಬ್ಬಳ್ಳಿ ಧಾರವಾಡ ಮಾಜಿ ಮಹಾಪೌರ ಅನಿಲಕುಮಾರ ಪಾಟೀಲ, ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಆಗಮಿಸುವರು. ಬೆಳಗ್ಗೆ ನಡೆಯುವ ಮೆರವಣಿಗೆಗೆ ಯುವ ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ ಚಾಲನೆ ನೀಡುವರು ಎಂದರು. ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಅಗಸಿಮನಿ, ಬಾಬಾಜಾನ ಬಳಗಾನೂರ, ಬಸವರಾಜ ಮನಗುಂಡಿ, ಹನಮಂತ ಗೆಜ್ಜಳ್ಳಿ, ಮುಂತಾದವರು ಹಾಜರಿದ್ದರು.