ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಾಡಿನ ಸೃಜನಾತ್ಮಕ ಜಾನಪದ ಕಲೆಗಳಲ್ಲಿರುವ ಕಲಾತ್ಮಕ ಮಾನವೀಯ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿ ಯುವ ಸಮುದಾಯ ಹೆಚ್ಚು ಅಧ್ಯಯನ ಮಾಡುವ ಅಗತ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪು ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಕಲೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆ ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಜಾನಪದ ನೃತ್ಯ ಗಾಯನ ಸಂಗೀತ ಪ್ರದರ್ಶನ ಕಲೆಗಳನ್ನು ಪ್ರಸ್ತುತ ಹೊಸ ಹೊಸ ಅತ್ಯಾಧುನಿಕ ತಂತ್ರಗಳನ್ನು ಹೆಚ್ಚಾಗಿ ಬಳಸಿಕೊಂಡು ಮೂಲ ಕಲೆಗಳ ಸಾರ ಮತ್ತು ಮೌಲ್ಯವನ್ನು ಕಸಿದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ನಮ್ಮ ಮೂಲ ಜಾನಪದಕ್ಕೆ ಪೆಟ್ಟು ಬೀಳುತ್ತಿರುವ ಸಂದರ್ಭದಲ್ಲಿ ಮಾತೃಶ್ರೀ ಸಂಸ್ಥೆ ಗಡಿನಾಡು ತಾಲೂಕಿನ ಸರ್ಕಾರಿ ಶಾಲಾ ಕಾಲೇಜು ಗ್ರಾಮಾಂತರ ಪ್ರದೇಶಗಳಲ್ಲಿ ಕಲೆ ಮತ್ತು ಕಲಾವಿದರ ಕಲ್ಯಾಣಾಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಕಲೆ ಸೇವೆ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಚಂದ್ರ ಎಂ (ನಮನ ಚಂದ್ರು) ಮಾತನಾಡಿ, ಜಾನಪದದಲ್ಲಿರುವ ಮೌಖಿಕ ಪರಂಪರೆ ಕಲೆ ಸಾಹಿತ್ಯ ಸಂಸ್ಕೃತಿ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿ ಯುವ ಸಮುದಾಯಕ್ಕೆ ತರಬೇತಿ ನೀಡುವ ಮೂಲಕ ಪ್ರತಿ ವರ್ಷ ರಾಜ್ಯಮಟ್ಟದ ಜಾನಪದ ಕಲೋತ್ಸವ ಕಾರ್ಯಕ್ರಮದಡಿಯಲ್ಲಿ ಮೂಲ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಜಾನಪದ ಗೌರವ ನೀಡುವ ಮೂಲಕ ಇಂತಹ ಜಾನಪದ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ ಎಂದರು.
ರಾಜ್ಯ ಆಹಾರ ಆಯೋಗದ ಸದಸ್ಯ ರೋಹಿಣಿ ಪ್ರಿಯ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಂ ಮಹದೇವನಾಯ್ಕ, ಪರಿಸರ ಪ್ರೇಮಿ ಮರಸಪ್ಪ ರವಿ, ಲಿಯೋ ಸಂದೀಪ್ ಎಂ, ಸಾಹಿತಿ ಕೂ.ಗಿ ಗಿರಿಯಪ್ಪ, ತಮಟೆ ಕಲಾವಿದ ಮರಿಸ್ವಾಮಿ ರವರಿಗೆ ಜಾನಪದ ಗೌರವ ನೀಡಿ ಸನ್ಮಾನಿಸಲಾಯಿತು.ಜಾನಪದ ಕಲೋತ್ಸವದಲ್ಲಿ ವೆಂಕಟಚಲ, ನಗೆಮಳೆರಾಜ ಚಂದ್ರಾಜ್,ಎಚ್ ಎಸ್ ಲೋಕೇಶ್, ಶ್ರೀನಿವಾಸ್ ತಂಡದಿಂದ ಜಾನಪದ ಗೀತೆ ಗಾಯನ, ದಿವಾಕರ್ ಮತ್ತು ತಂಡ ತಮಟೆ ವಾದನ ಕಿರಣ್ ಕುಮಾರ್ ಮತ್ತು ತಂಡ ಪೂಜೆ ಕುಣಿತ ಚಂದ್ರಮೌಳೇಶ್ವರ ಮತ್ತು ತಂಡ ವೀರಗಾಸೆ ಯೋಗೇಶ್ ಮತ್ತು ತಂಡ ಚರ್ಮ ವಾದ್ಯ ಚಿಕ್ಕಮುತ್ತಯ್ಯ ಮತ್ತು ತಂಡ ಜಂಬೆವಾದನ ಭರತ್ ಮತ್ತು ತಂಡ ಚಿಲಿಪಿಲಿ ಗೊಂಬೆ ಕಾರ್ತಿಕ್ ಮತ್ತು ತಂಡ ಕುಂಬು ಕಹಳೆ ಮೊದಲಾದ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.
ಇದೇ ಸಂದರ್ಭದಲ್ಲಿ ಜಾನಪದ ನೂರೊಂದು ಕೃತಿ ಬಿಡುಗಡೆ ಮಾಡಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಕೋಮಲ, ಮುಜಿಬ್ ಖಾನ್, ವಿಶ್ವರಾಧ್ಯ, ಸೌಮ್ಯ,ಪಾಷಾ, ಸಾವಿತ್ರಿ, ರೆಡ್ಡಪ್ಪ, ಲಿಯೋ ಹರ್ಷಿತ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.