ಸಾರಾಂಶ
ಶಿವಮೊಗ್ಗ: ಪ್ರತಿಷ್ಠಿತ ಸರ್ಜಿ ಆಸ್ಪತ್ರೆಗಳ ಸಮೂಹವು ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಪೇಪರ್ ಲೆಸ್ (ಕಾಗದ ಮುಕ್ತ) ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಚೇರ್ಮನ್ ಡಾ.ಧನಂಜಯ ಸರ್ಜಿ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಸರ್ಜಿ ಆಸ್ಪತ್ರೆಯಲ್ಲಿ ಕಾಗದ ಮುಕ್ತ ವಾತಾವರಣವನ್ನು ಕಲ್ಪಿಸಲಾಗಿದೆ. ಎಲ್ಲಾ ಆಡಳಿತ ವ್ಯವಸ್ಥೆಗಳು ಡಿಜಿಟಲ್ ಮೂಲಕ ನಡೆಯಲಿದ್ದು, ಆನ್ಲೈನ್ ಮೂಲಕವೇ ನಡೆಯುತ್ತದೆ ಎಂದು ಹೇಳಿದರುಭಾರತದಲ್ಲಿ ಒಂದು ವರ್ಷಕ್ಕೆ 40.5 ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ, ಅಂದಾಜಿನ ಪ್ರಕಾರ ಪ್ರತಿ 2 ಸೆಕೆಂಡ್ ಗೆ 1 ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ 24 ಮರಗಳನ್ನು ಕಡಿಯಬೇಕಾಗುತ್ತದೆ. ಒಂದು ಟನ್ನಲ್ಲಿ 2 ಲಕ್ಷ ಎ-4 ಶೀಟ್ಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ಆಸ್ಪತ್ರೆಗೆ 6.50 ಲಕ್ಷ ಎ-4 ಶೀಟ್ ಬಳಸಲಾಗುತ್ತಿತ್ತು. ಇದರ ಪ್ರಕಾರ ನಾವು ವರ್ಷಕ್ಕೆ ಈ ಒಂದು ಆಸ್ಪತ್ರೆಯಿಂದ 76 ಮರಗಳನ್ನು ಉಳಿಸಿದಂತಾಗುತ್ತದೆ ಎಂದರು.ಆಸ್ಪತ್ರೆಯನ್ನು ಪೇಪರ್ ಲೆಸ್ ಮಾಡುವ ಮೂಲಕ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದರಿಂದಲೇ ವರ್ಷಕ್ಕೆ 76 ಮರಗಳನ್ನು ಉಳಿಸಿದಂತಾದರೆ, ಸರ್ಜಿ ಆಸ್ಪತ್ರೆಗಳ ಸಮೂಹದಿಂದ ವರ್ಷಕ್ಕೆ 250 ಮರಗಳನ್ನು ಉಳಿಸಿದಂತಾಗುತ್ತದೆ. 1 ಮರ 1 ವರ್ಷಕ್ಕೆ 10 ಜನರಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಅಂದರೆ ವರ್ಷಕ್ಕೆ 2500 ಜನರಿಗೆ ಆಮ್ಲಜನಕವನ್ನು ಕೊಡುವ ಮರಗಳನ್ನು ಉಳಿಸಿದಂತಾಗುತ್ತಿದೆ, ಅಲ್ಲದೇ ನೀರು ಕೂಡ ಉಳಿಯತಾವಾಗುತ್ತದೆ ಎಂದು ತಿಳಿಸಿದರು.ಇದರಿಂದ ತುಂಬಾ ಅನುಕೂಲವಾಗಲಿದ್ದು, ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂಆರ್ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗುತ್ತದೆ ಎಂದರು.ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ವೈದ್ಯಕೀಯ ನಿರ್ದೇ ಶಕ ಡಾ.ಪ್ರಶಾಂತ್ ಎಸ್.ವೀರಯ್ಯ, ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಮಾಯೇರ, ಅನ್ ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಅಕ್ಷಯ್ ನಾಯಕ್, ಬಿ.ಎಸ್.ಕಾರ್ತಿಕ್ ಉಪಸ್ಥಿತರಿದ್ದರು.