ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುನಾರಾಯಣ ಗುರುಗಳು ಮೌಢ್ಯ ಕಂದಾಚಾರ ಹಾಗೂ ಅಸಮಾನತೆ ವಿರುದ್ಧ ಹೋರಾಟ ನಡೆಸಿ ಸಮಾಜವನ್ನು ಜಾಗೃತಿಗೊಳಿಸಿದರು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾಮಾಜಿಕ ಹಾಗೂ ಧಾರ್ಮಿಕ ಪರಿವರ್ತನೆಯ ಹರಿಕಾರರಾದ ಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮಾನವೀಯ ತತ್ವವನ್ನು ಸಾರಿದ ಮಹಾನ್ ತತ್ವಜ್ಞಾನಿ. ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹರಿಕಾರರಾಗಿದ್ದು ಅವರು ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಬೋಧನೆ ಇಂದು ಸಮಾನತೆಯ ಸಮಾಜಕ್ಕೆ ದಾರಿ ತೋರಿಸುತ್ತಿದೆ ಎಂದು ಹೇಳಿದರು.ಮುಖ್ಯ ಭಾಷಣಕಾರ ಡಾ. ರಾಜು ಮಾತನಾಡಿ, ಕೇರಳದಲ್ಲಿ ಶೂದ್ರರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಂದರ್ಭ ಆತ ತೀರ್ಮಾನದ ವಿರುದ್ಧ ಸಂಘರ್ಷಕ್ಕಿಳಿಯದೆ, ನಾರಾಯಣ ಗುರುಗಳು ಶೂದ್ರರ ಆರಾಧನೆಯ ದೇವಾಲಯ ನಿರ್ಮಿಸಲು ಹಾಗೂ ಶೂದ್ರರನ್ನೇ ಅರ್ಚಕರನ್ನಾಗಿ ನೇಮಿಸುವಂತೆ ನೋಡಿಕೊಂಡರು. ಈ ರೀತಿ ಕೇರಳದಲ್ಲಿ 60ಕ್ಕೂ ಅಧಿಕ ದೇವಾಲಯವನ್ನು ಕಟ್ಟಿದರು ಜೊತೆಗೆ ಕರ್ನಾಟಕದ ಮಂಗಳೂರಿನಲ್ಲೂ ದೇವಾಲಯ ನಿರ್ಮಿಸಿದರು ಅಲ್ಲಿ ಈಗಲೂ ತಳಸಮುದಾಯದವರೇ ಅರ್ಚಕರಾಗಿ ಪೂಜೆ ಸಲ್ಲಿಸುತ್ತಿದ್ದಾರೆ ಆ ಮೂಲಕ ಸರಳವಾಗಿ ಧರ್ಮ ಅರ್ಥವಾಗುವ ರೀತಿಯಲ್ಲಿ ಪ್ರತಿಪಾದಿಸಿದರು ಎಂದು ತಿಳಿಸಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸನೂರ್, ನಗರಸಭಾ ಪೌರಯುಕ್ತ ವಿಜಯ್, ದಸಂಸ ಸಂಚಾಲಕ ಶಂಕರಪುರ ಸುರೇಶ್, ಅಬ್ದುಲ್ ಖಾದರ್, ಉದ್ಯಮಿ ಎನ್.ಟಿ. ಗಿರೀಶ್, ಜಿ.ಕೆ. ಮಂಜುನಾಥ್, ಕೃಷ್ಣಕುಮಾರ್, ಸಿಂಧುವಳ್ಳಿಪುರ ರಾಜು, ಎಚ್.ಎಸ್. ದಿಲೀಪ್, ನಾರಾಯಣ, ರಘು, ರಾಘವೇಂದ್ರ ಮೊದಲಾದವರು ಇದ್ದರು.