ಸಾರಾಂಶ
ಲೋಕಾಪುರ : ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಬಾಗಲಕೋಟೆ ಜಿಲ್ಲೆಯ ಲೋಕಾಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರ ಬೀಳಿಸುತ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಆಡಳಿತ ಪಕ್ಷದ ಶಾಸಕರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಒಬ್ಬ ಶಾಸಕ ಹೇಳ್ತಾರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ. ಮತ್ತೊಬ್ಬ ಶಾಸಕ ಹೇಳ್ತಾರೆ ಅನುದಾನವೇ ಸಿಗುತ್ತಿಲ್ಲ. ಏನು ದರಿದ್ರ ಸರ್ಕಾರ ಅಂತಾ ಮಾತಾಡ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹೇಳ್ತಾರೆ ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲಿ ನಂಬರ್ ಓನ್ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ಅವರ ಶಾಸಕರು ತಿರುಗಿ ಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಏ.17 ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಲೋಕಾಪುರ ಪಟ್ಟಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯಾಧ್ಯಕ್ಷರಿಗೆ ಕಾರ್ಯಕತರು ಹೂಮಾಲೆ ಹಾಕಿ ಬರಮಾಡಿಕೊಂಡು, ನಂತರ ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯಕರ್ತರಿಗೆ ಹಸ್ತಲಾಘವ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೋವಿಂದ ಕಾರಜೋಳ, ವಿಜಯೇಂದ್ರ ಪರ ಘೋಷಣೆ ಕೂಗಿದರು. ನಂತರ ಬಾಗಲಕೋಟೆಗೆ ತೆರಳಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಹಣಮಂತ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯಕ, ಅರುಣ ಕಾರಜೋಳ, ರಾಜು ಯಡಹಳ್ಳಿ, ತಾಲೂಕಾಧ್ಯಕ್ಷ ಸಂಗನಗೌಡ ಕಾತರಕಿ, ಕೆ.ಆರ್. ಮಾಚಪ್ಪನವರ, ಸದಾಶಿವ ತೇಲಿ, ಲೋಕಣ್ಣ ಕತ್ತಿ, ಪರಮಾನಂದ ಟೊಪಣ್ಣವರ, ಬಿ.ಎಲ್.ಬಬಲಾದಿ, ನಾಗಪ್ಪ ಅಂಬಿ, ಬಸವರಾಜ ಮಳಲಿ, ಗುರಪಾದ ಕುಳಲಿ, ಕರಬಸಯ್ಯ ಹಿರೇಮಠ, ವೀರೇಶ ಪಂಚಕಟ್ಟಿಮಠ, ಅರುಣ ಮುಧೋಳ, ಈಶ್ವರ ಹವಳಖೋಡ, ರಾಜು ಹುಬ್ಬಳ್ಳಿ ಅಪಾರ ಬಿಜೆಪಿ ಕಾರ್ಯಕರ್ತರು ಇದ್ದರು.