ಸಾರಾಂಶ
ಮಂಗಳೂರು : ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮತ್ಸ್ಯೋದ್ಯಮಿಗಳಿಗೆ ಸುಗ್ಗಿಯ ಕಾಲ. ಆದರೆ ಈ ವರ್ಷ ವಿಪರೀತ ತಾಪಮಾನದಿಂದ ಮೀನುಗಾರರ ಲೆಕ್ಕಾಚಾರ ತಲೆಕೆಳಗಾಗಿದೆ. ಬಿಸಿಲ ಝಳಕ್ಕೆ ಮೀನುಗಳೇ ಸಿಗದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಹೊರ ರಾಜ್ಯಗಳಿಂದ ಮೀನು ತರಿಸಲಾಗುತ್ತಿದೆ.
ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆವರೆಗೂ ವ್ಯಾಪಾರ ನಡೆದು ಜನಜಂಗುಳಿ ಹೆಚ್ಚಿರುತ್ತದೆ. ಆದರೆ, ಕೆಲ ದಿನಗಳಿಂದ ಬೆಳಗ್ಗೆ 9 ಗಂಟೆಯ ಬಳಿಕ ದಕ್ಕೆ ಬಿಕೋ ಎನ್ನುತ್ತಿದ್ದು, ಬಹುತೇಕ ಬೋಟ್ಗಳು ಕಡಲಿಗೇ ಇಳಿಯದೆ ಲಂಗರು ಹಾಕಿವೆ.
ತಾಪದಿಂದ ಆಳಕ್ಕೆ ತೆರಳುವ ಮೀನು:
ತಾಪ ಹೆಚ್ಚಿದಂತೆ ಮೀನುಗಳು ಸಮುದ್ರದ ಆಳಕ್ಕೆ ತೆರಳುತ್ತಿದ್ದು, ಬಲೆಗೆ ಸಿಗುತ್ತಿಲ್ಲ. ಸಮುದ್ರದ ನಡುವೆ ದಡಕ್ಕಿಂತಲೂ ಅಧಿಕ ತಾಪಮಾನ ಇರುತ್ತದೆ. ಹೀಗಾಗಿ ಬಿಸಿ ತಾಳಲಾರದೆ ಮೀನುಗಳು ಸಮುದ್ರದೊಳಗಿನ ಬಂಡೆಗಳ ಮರೆಗೆ ಸರಿಯುತ್ತವೆ. ಹೀಗಾಗಿ ಬಲೆ ಹಾಕಿದರೂ ಮೀನು ಅದಕ್ಕೆ ಬೀಳುವುದೇ ಇಲ್ಲ ಎಂದು ಮೀನುಗಾರರು ಹೇಳುತ್ತಾರೆ.
ಕರಾವಳಿಯಲ್ಲಿ ಮೀನು ಅಭಾವ ಇದ್ದರೂ ಹೊರರಾಜ್ಯಗಳಿಂದ ಪೂರೈಕೆಯಾಗುತ್ತಿದೆ. ಹಾಗಾಗಿ ಪ್ರಸ್ತುತ ಮೀನು ಪ್ರಿಯರಿಗೆ ಮೀನಿನ ಕೊರತೆ ಆಗಿಲ್ಲ. ಆದರೆ ಬೆಲೆ ಮಾತ್ರ ಹೆಚ್ಚಳವಾಗಿದೆ. ಒಡಿಶಾ, ಮುಂಬೈ, ಗೋವಾ, ರತ್ನಗಿರಿ, ವಿಶಾಖಪಟ್ಟಣ, ಕೇರಳ, ಗಂಗೊಳ್ಳಿ, ಕಾರವಾರ, ಅಂಕೋಲದಿಂದ ಮೀನು ತರಿಸಲಾಗುತ್ತಿದೆ.
27ರಿಂದ 32 ಡಿಗ್ರಿ ಸೆ. ಉಷ್ಣತೆ ಮೀನುಗಳಿಗೆ ಅನುಕೂಲಕರ. ಆದರೆ ಕೆಲವು ದಿನಗಳಿಂದ 35 ಡಿ. ಸೆ.ಗಿಂತಲೂ ಅಧಿಕ ಉಷ್ಣತೆ ಇರುವುದು ಮೀನುಗಳಿಗೂ ಕಷ್ಟಕರವಾಗಿದೆ.