ಮಾರುಕಟ್ಟೆಗೆ ಬಂದ ಹಣ್ಣಿನ ರಾಜ!

| Published : Apr 01 2024, 12:49 AM IST

ಸಾರಾಂಶ

ಮಾವಿನ ಕಾಯಿ ಕಟಾವು ಕಾರ್ಯ ಪ್ರಾರಂಭವಾಗಿದ್ದು, ಎಲ್ಲೆಂದರಲ್ಲಿ ಮಾವಿನ ಮಂಡಿಗಳು ತೆರೆದುಕೊಳ್ಳುತ್ತಿವೆ. ಮಾವಿನ ವ್ಯಾಪಾರ ವಹಿವಾಟು ಬಲುಜೋರಾಗಿದೆ.

ಸಂತೋಷ ದೈವಜ್ಞ

ಮುಂಡಗೋಡ: ಹಣ್ಣಿನ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಾವಿನ ಹಣ್ಣಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಮಾವಿನ ಕಾಯಿ ಕಟಾವು ಕಾರ್ಯ ಪ್ರಾರಂಭವಾಗಿದ್ದು, ಎಲ್ಲೆಂದರಲ್ಲಿ ಮಾವಿನ ಮಂಡಿಗಳು ತೆರೆದುಕೊಳ್ಳುತ್ತಿವೆ. ಮಾವಿನ ವ್ಯಾಪಾರ ವಹಿವಾಟು ಬಲುಜೋರಾಗಿದ್ದು, ಬೆಳೆಗಾರರು ಹಾಗೂ ದಲ್ಲಾಳಿಗಳು ಲಾಭ- ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳು ವಿಳಂಬವಾಗಿ ಹೂವು ಬಿಟ್ಟ ಪರಿಣಾಮ ಫಸಲು ಕೂಡ ವಿಳಂಬವಾಗಿ ಬರುತ್ತಿದ್ದು, ಮಾವಿನ ಫಸಲು ಕೂಡ ತೀವ್ರ ಕಡಿಮೆ ಇರುವುದರಿಂದ ಸದ್ಯ ಮಾರುಕಟ್ಟೆಯಲ್ಲಿ ಮಾವಿಗೆ ನಿರೀಕ್ಷೆಯಂತೆ ಬೆಲೆ ಸಿಗುತ್ತಿದೆ. ಸಾಕಷ್ಟು ಪ್ರಮಾಣದ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತಾಲೂಕಿನ ಪಾಳಾ ಭಾಗದ ಶಿರಸಿ- ಹುಬ್ಬಳ್ಳಿ ಹೆದ್ದಾರಿ ಅಂಚಿನ ತೋಟಗಳ ಮಾಲೀಕರು ರಸ್ತೆ ಪಕ್ಕದಲ್ಲಿಯೇ ಹಣ್ಣು ಮಾರಾಟದಲ್ಲಿ ನಿರತರಾಗಿದ್ದಾರೆ. ನಿತ್ಯ ಈ ಮಾರ್ಗವಾಗಿ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುವುದರಿಂದ ಇಲ್ಲಿ ಮಾವಿನ ಹಣ್ಣಿನ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಪ್ರಮುಖವಾಗಿ ಆಪೂಸ್, ಮಾನಕೂರ ತಳಿಯ ಕೆಜಿ ಮಾವಿನ ಹಣ್ಣಿಗೆ ₹೨೦೦ರಿಂದ ₹೨೫೦ರ ವರೆಗೆ ದರ ನಿಗದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾವಿನ ಪಸಲು ಮಾರುಕಟ್ಟೆಗೆ ಬಂದರೆ ದರ ಕುಸಿಯಲಿದೆ ಎನ್ನುತ್ತಾರೆ ರೈತರು.

ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಿತ ಭತ್ತದ ಬೆಳೆ ಅವಲಂಬಿಸಿದ್ದಾರೆ. ಕೆಲವು ರೈತರು ವಾಣಿಜ್ಯ ಬೆಳೆಯಾಗಿ ಮಾವಿನ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನ ಪಾಳಾ ಹೋಬಳಿ ಭಾಗದ ಬಹುಸಂಖ್ಯಾತ ರೈತರಿಗೆ ಮಾವು ಆದಾಯ ತರುವ ಪ್ರಮುಖ ಬೆಳೆಯಾಗಿದೆ.

ಹಲವು ನಗರಗಳಿಗೆ ಪೂರೈಕೆ: ಆಪೂಸ್, ಇಸಾಡ್, ಪೈರಿ, ಮಲಗೋಬಾ, ಮಾನಕೂರ, ಸಿಂದೂಲಾ ಸೇರಿದಂತೆ ಅನೇಕ ತಳಿಯ ಮಾವು ಇಲ್ಲಿಂದ ಹುಬ್ಬಳ್ಳಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ಪಾನೀಯ ಕಂಪನಿಗಳಿಗೆ ಪೂರೈಕೆಯಾಗುತ್ತಿದೆ. ವಿಶೇಷವಾಗಿ ಮಾವಿನ ಕಣಜ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಪಾಳಾ ಭಾಗದಲ್ಲಿ ಹತ್ತಾರು ಮಾವು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ನಿತ್ಯ ಸಂಜೆ ಸುತ್ತಮುತ್ತಲಿನ ಮಾವಿನ ಸವಾಲು(ಹರಾಜು) ಕೂಡ ನಡೆಯುತ್ತದೆ. ನೂರಾರು ಮಾವು ಬೆಳೆಗಾರ ರೈತರು, ವ್ಯಾಪಾರಸ್ಥರು, ದಲ್ಲಾಳಿಗಳು ಇದರಲ್ಲಿ ಪಾಲ್ಗೊಂಡು ಮಾವು ಖರೀದಿಸಲು ಪೈಪೋಟಿ ನಡೆಸುತ್ತಾರೆ. ಇದು ಮಾವಿನ ಸುಗ್ಗಿ ಮುಗಿಯುವವರೆಗೂ ನಿರಂತರವಾಗಿ ನಡೆಯುತ್ತದೆ.

ಮಾರುಕಟ್ಟೆ ಅವ್ಯವಸ್ಥೆ: ಅಪಾರ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದ್ದರೂ ಇಲ್ಲಿ ಮಾವಿಗೆ ಬೆಂಬಲ ಬೆಲೆ ಹಾಗೂ ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಖರೀದಿ ಕೇಂದ್ರ ಸೇರಿದಂತೆ ಯಾವುದೇ ಸೌಕರ್ಯವನ್ನು ಒದಗಿಸಲಾಗಿಲ್ಲ. ಇದರಿಂದ ಮಾವು ಬೆಳೆಗಾರರು ದೂರದ ಹುಬ್ಬಳ್ಳಿ, ಬೆಂಗಳೂರು ಮುಂತಾದ ನಗರಗಳಿಗೆ ತೆರಳಿ ವ್ಯವಹರಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ಬೆಂಬಲ ಬೆಲೆ ಕಲ್ಪಿಸುವ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆಯಾಗುವುದಿಲ್ಲ ಎಂಬುದು ಮಾವು ಬೆಳೆಗಾರರ ಆಗ್ರಹ.

ಉತ್ತಮ ಬೆಲೆ: ಮಾವಿನ ಬೆಳೆಯಲ್ಲಿ ಅತಿ ಕಡಿಮೆ ಪ್ರಮಾಣದ ಫಸಲು ಈ ಬಾರಿ ಬಂದಿರುವುದರಿಂದ ಉತ್ತಮ ಬೆಲೆ ಸಿಗುತ್ತಿದೆ. ಈ ಬಾರಿ ವಿಳಂಬವಾಗಿ ಫಸಲು ಬಿಟ್ಟಿದ್ದು, ಮಳೆ ಪ್ರಾರಂಭವಾದರೆ ಮಾವಿನ ಬೆಲೆ ಸಂಪೂರ್ಣ ಕಡಿಮೆಯಾಗಲಿದೆ ಎಂದು ಮಾವು ಬೆಳೆಗಾರ ಆಭಿದಲಿ ಮಹ್ಮದಗೌಸ ಪಾಟೀಲ ತಿಳಿಸಿದರು.