ಅಡಕೆ ಸಿಂಗಾರ ಒಣಗಿ ನೆಲ ಕಚ್ಚಿದೆ ಭವಿಷ್ಯದ ಫಸಲು

| Published : Jun 20 2024, 01:03 AM IST

ಸಾರಾಂಶ

ಮಲೆನಾಡಿನ ಅಡಕೆ ಬೆಳೆಗಾರರು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ. ಮಳೆಗಾಳದ ಆರಂಭದ ಹೊತ್ತಿನಲ್ಲೆ ಸರಾಸರಿ ಫಸಲಿನಲ್ಲಿ ಶೇಕಡ 30 ರಷ್ಟು ಹಾನಿಯಾಗಿತ್ತು. ಇದ್ದಷ್ಟು ಅಡಕೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಇದೀಗ ರೈತರು ಕಂಗಾಲಾಗಿದ್ದರು.

* ಪ್ರದೀಪ್ ಮಾವಿನಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಹವಾಮಾನ ವೈಪರೀತ್ಯದಿಂದಾಗಿ ಬ್ಯಾಕೋಡು ಭಾಗದ ರೈತರ ತೋಟದಲ್ಲಿ ಅಡಕೆ ಮಣಿ ಮತ್ತು ಕಾಯಿ ಉದುರುವುದು, ಇದ್ದಕ್ಕಿದ್ದಂತೆ ಸಿಂಗಾರ ಒಣಗಿ ಹೋಗುತ್ತಿದ್ದು, ಇದೇ ರೀತಿ ಬಿಸಿಲು ಮತ್ತು ಮಳೆಯ ವಾತಾವರಣ ಮುಂದುವರೆದರೆ ಕಾಯಿ ಅಡಕೆ ಕೊಳೆ ರೋಗಕ್ಕೂ ತುತ್ತಾಗುವ ಭೀತಿ ಎದುರಾಗಿದೆ.

ಮಲೆನಾಡಿನ ಅಡಕೆ ಬೆಳೆಗಾರರು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ. ಎಲೆ ಚುಕ್ಕಿ ರೋಗ, ಬೇರುಹುಳ, ಮಣಿ ಉದರುವುದು, ನಿರು ಕೊಳೆ, ಬೂದಿ ಕೊಳೆ. ಸಿಂಗಾರ ಸಾಯುವುದು, ಆದರಲ್ಲೂ ಕಳೆದ ವರ್ಷ ವಾಡಿಕೆ ಮಳೆ ಕೊರತೆಯಿಂದ ನೀರಿನ ಕೊರತೆ ಉಂಟಾಗಿದ್ದು, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಳದ ಆರಂಭದ ಹೊತ್ತಿನಲ್ಲಿ ಸರಾಸರಿ ಫಸಲಿನಲ್ಲಿ ಶೇಕಡ 30 ರಷ್ಟು ಹಾನಿಯಾಗಿತ್ತು. ಇದ್ದಷ್ಟು ಅಡಕೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದರು.

ಆದರೆ ಈಗಾಗಲೇ ಒಟ್ಟು ಫಸಲಿನಲ್ಲಿ ಶೇ.20 ರಷ್ಟು ಅಡಕೆ ಮಣಿ ಮತ್ತು ಕಾಯಡಿಕೆ ಉದುರಿ ಹೋಗಿದ್ದು, ಅದನ್ನು ನಿಯಂತ್ರಣ ಮಾಡಲು ಬಾಯೊಫೈಟ್, ಮೈಲು ತುತ್ತು ವಿವಿಧ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಇಲ್ಲಿಗೆ ರೋಗ ನಿಯಂತ್ರಣವಾದರೇ ಉತ್ತಮ. ಇಲ್ಲವಾದರೆ ಮಳೆ ಹೆಚ್ಚಾದ ಸಂದರ್ಭದಲ್ಲಿ ಔಷಧಿ ಸಿಪಡಿಸು ವುದು ಕಷ್ಟಕರ ಮತ್ತು ಕೊಳೆಯೂ ನಿಯಂತ್ರಣವಾಗುವುದಿಲ್ಲ ಎಂಬುದು ಬ್ಯಾಕೋಡು, ತುಮರಿ ಭಾಗದ ರೈತರ ಮಾತಾಗಿದೆ.

ಹೀಗಿರುವಾಗ ರೋಗ ಒಂದು ಬಾರಿ ಔಷಧಿ ಸಿಂಪಡಿಸಿದಾಗ ನಿಯಂತ್ರಣವಾಗದಿದ್ದಲ್ಲಿ ಔಷಧಿ ಮತ್ತು ಸಿಂಪಡಿಸುವ ವೆಚ್ಚ ದುಬಾರಿ ಆಗಲಿದೆ.

ಅಡಕೆ ಕೊಯ್ಯುವ ಹೊತ್ತಿನಲ್ಲಿ ಮಂಗಗಳು ಎಲ್ಲಿಲ್ಲದ ಕಾಟ ಕೊಡುತ್ತವೆ. ತೋಟದಲ್ಲಿ ಅಡಕೆ ಅಲ್ಲಲ್ಲಿ ಹಣ್ಣಾಗಿರುವ ಸಂದರ್ಭದಲ್ಲಿ ಮಂಗಗಳು ಮತ್ತು ಅಳಿಲುಗಳು ರೈತರಿಗೆ ಹೆಚ್ಚು ನಷ್ಟವನ್ನು ಉಂಟು ಮಾಡುತ್ತವೆ. ಒಟ್ಟಾರೆಯಾಗಿ ರೈತರೂ ತಮ್ಮ ತಮ್ಮ ಅಡಕೆ ಫಸಲನ್ನು ಕಾಯ್ದುಕೊಳ್ಳಲು ಸಿಂಗಾರ ಬಿಟ್ಟಾಗಿನಿಂದ ಅಡಕೆ ಕೊಯ್ದು ಮಾರುಕಟ್ಟೆಗೆ ತಲುಪವರೆಗೂ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡು ಪ್ರದೇಶಗಳಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡಿತ್ತು. ಜನವರಿಯಿಂದ ಜೂನ್ ಆರಂಭದವರೆಗೂ ಸಮರ್ಪಕ ಮಳೆ ಇರಲಿಲ್ಲ. ಹೀಗಾಗಿ ಕೊಳವೆ ಬಾವಿ, ಕೆರೆ ನೀರಿನ ಬಳಕೆ ಹೆಚ್ಚಾಗಿತ್ತು. ಹಲವು ಕೊಳವೆ ಬಾವಿಗಳ ನೀರಿನಮಟ್ಟ ಇಳಿಕೆಯಾಗಿತ್ತು. ವಾತಾವರಣದ ಉಷ್ಣತೆ ವಿಪರೀತ ಏರಿಕೆಯಾಗಿತ್ತು. ಪರಿಣಾಮವಾಗಿ ಹಲವು ತೋಟಗಳು ಒಣಗಿದವು.

ಜೂನ್‌ನಲ್ಲಿ ಮಳೆ ಸುರಿದ ಪರಿಣಾಮ ಬಹುತೇಕ ಅಡಿಕೆ ಮರಗಳು ಹಿಂಗಾರ ಕೊಳೆಯುತ್ತಿದೆ. ತೇವ ಹೆಚ್ಚಾಗಿ ನಾಶವಾಗುವ ಹಂತದಲ್ಲಿವೆ. ಇದರ ಜೊತೆಗೆ ಕೀಟ ಬಾಧೆಯೂ ಜೊತೆ ಸೇರಿದ ಪರಿಣಾಮ ಶೇ. 40ರಷ್ಟು ಅಡಕೆ ತೋಟಗಳಲ್ಲಿ ಭವಿಷ್ಯದ ಫಸಲು ನೆಲಕಚ್ಚುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಲೆನಾಡಿನ ಅಡಕೆ ತೋಟಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಉದುರುತ್ತಿರುವ ಎಳತು ಅಡಕೆ ಕಾಯಿಗಳ ಪರಿಶೀಲನೆ ನಡೆಸಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು ಎಂಬುದು ಈ ಭಾಗದ ರೈತರು ಅಹವಾಲಾಗಿದೆ.

ಪ್ರತಿ ವರ್ಷದಂತೆ ಜೂನ್ ತಿಂಗಳಲ್ಲಿ ಮೈಲು ತುತ್ತ, ಸುಣ್ಣ ದ್ರಾವಣ ಮಿಶ್ರಣ ಮಾಡಿ ಸಿಂಪಡಣೆ ಬಳಿಕ ಎಳೆ ಅಡಕೆ ಉದುರು ಕಡಿಮೆಯಾಗುತ್ತಿತ್ತು. ಆದರೆ ಈ ಭಾರಿ ರೋಗ ಹತೋಟಿಗೆ ಬರುತ್ತಿಲ್ಲ. ಹೀಗಾದರೆ ಬೆಳೆದ ಫಸಲು ಕೈಗೆ ಸಿಗುವುದು ಕಷ್ಟವಾಗಲಿದೆ. ಅತ್ತ ಕೃಷಿ ಇಲಾಖೆಯೂ ಮಳೆ ಹಾಗೂ ಕೃಷಿ ಮಳೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಹೆರಬೇಟ್ಟು ಅಡಕೆ ಬೆಳೆಗಾರ ವಿಜಯ್ ಕುಮಾರ್‌.

ಇನ್ನು, ಸಹಾಯಕ ತೋಟಗಾರಿಕೆ ಅಧಿಕಾರಿ ಭೀಮ್ ಷಿ. ಮಾತನಾಡಿ, ಅಡಕೆ ಮಣಿ ಉದುರುವುದು ಸಾಮಾನ್ಯವಾಗಿ ಆಯಾ ಪ್ರದೇಶದ ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಮೂರ್ನಾಲ್ಕು ಕಾರಣಗಳಿಂದ ಉದುರುತ್ತವೆ. ಬೇಸಿಗೆ ಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ತಕ್ಷಣ ಮಳೆ ಶುರುವಾದಲ್ಲಿ ಈ ರೀತಿ ಉದುರುವ ಸಾಧ್ಯತೆ ಹೆಚ್ಚಿರುತ್ತದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಾರೆ, ಆದರಿಂದ ಅಡಿಕೆ ಮರಗಳಿಗೆ ಮೈಕ್ರೋ ನ್ಯೂಟ್ರಿಶನ್ ಹಾಕುವುದಿಲ್ಲ ಆದರಿಂದ ಇದರ ಪ್ರಮಾಣ ಕಡಿಮೆ ಆಗಿ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಮಣ್ಣಿನ ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಗೊಬ್ಬರ ಇನ್ನಿತರರ ಔಷಧಿಗಳನ್ನು ಸಿಂಪಡಿಸುವುದು ಉತ್ತಮ ಎಂದು ಹೇಳಿದರು.