ಸಾರಾಂಶ
ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ. ಹಲವಾರು ಮಹಿಳಾ ಸೇನಾಧಿಕಾರಿಗಳು ಪರಾಕ್ರಮ ತೋರಿಸಿದ್ದಾರೆ. ಅವರ ಪರಿಶ್ರಮ ನಿಮಗೆ ಪ್ರೇರಣಾದಾಯಕವಾಗಿದೆ. ನಿಮಗೆ ಸೈನ್ಯದಲ್ಲಿ ಉತ್ತಮ ವೇತನವಿದೆ.
ವಿಜಯಪುರ : ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ. ಹಲವಾರು ಮಹಿಳಾ ಸೇನಾಧಿಕಾರಿಗಳು ಪರಾಕ್ರಮ ತೋರಿಸಿದ್ದಾರೆ. ಅವರ ಪರಿಶ್ರಮ ನಿಮಗೆ ಪ್ರೇರಣಾದಾಯಕವಾಗಿದೆ. ನಿಮಗೆ ಸೈನ್ಯದಲ್ಲಿ ಉತ್ತಮ ವೇತನವಿದೆ. ಸೇನಾ ತರಬೇತಿ ಕೂಡಾ ನೀಡುತ್ತೇವೆ. ನೀವೆಲ್ಲಾ ಸೈನ್ಯ ಸೇರಲು ಸಿದ್ಧರಾಗಬೇಕು ಎಂದು ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ನೀಡಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ೨೨ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಮಾಣಿಕತೆ, ಕಾರ್ಯಶೀಲತೆ ಮತ್ತು ಸಾಧನೆ ಮುಂತಾದ ಮೌಲ್ಯಗಳನ್ನು ಪಾಲನೆ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇಂದಿನ ಯುವ ಜನಾಂಗ ಮಾದರಿ ಭಾರತದ ನಿರ್ಮಾತೃಗಳು. ನಿಮ್ಮ ಶಕ್ತಿ ಸಾಮರ್ಥ್ಯ ಹಾಗೂ ಪ್ರತಿಭೆಯ ಮೂಲಕ ಗುರಿ ಸಾಧಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಭಾರತೀಯರು ನಮ್ಮ ಸೈನ್ಯದ ಬಗೆಗೆ ಹೆಮ್ಮೆ ಪಡಬೇಕು. ಸೈನ್ಯದಲ್ಲಿನ ಶಿಸ್ತು, ಕಠಿಣ ಪರಿಶ್ರಮ ದೇಶ ಪ್ರೇಮದಿಂದ ಸೈನಿಕರು ತಮ್ಮ ಜೀವನದ ಹಂಗು ತೊರೆದು ದೇಶದ ಗಡಿ ಕಾಯುತ್ತಾರೆ. ಅವರ ಶ್ರಮಕ್ಕೆ ನಾವು ಹೆಮ್ಮೆ ಪಡಬೇಕು. ಹಿಂದೂ, ಮುಸ್ಲಿಂ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೇ ನಾವೆಲ್ಲರೂ ಒಂದು. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ಸಂಸ್ಕೃತಿಯ ಹೆಮ್ಮೆ ಇದೆ. ನಾವು ಯಾವ ಜಾತಿ, ಧರ್ಮ, ಪ್ರದೇಶರವರು ಎಂಬುದು ಮುಖ್ಯವಲ್ಲ, ನಾವೆಲ್ಲರೂ ದೇಶಕ್ಕಾಗಿ ಒಂದಾಗಿ ದುಡಿಯಬೇಕು ಎಂದರು.
ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ಈ ಭಾಗದ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆ ಹೊಂದಿ ಸ್ಥಾಪಿತವಾದ ಈ ವಿಶ್ವವಿದ್ಯಾನಿಲಯ, ಇಂದು ತನ್ನ ೨೨ ವರ್ಷದ ಶ್ರೇಷ್ಠ ಶೈಕ್ಷಣಿಕ ಪ್ರಯಾಣವನ್ನು ಹೆಮ್ಮೆಯಿಂದ ನೆರವೇರಿಸುತ್ತಿದೆ. ಆರಂಭದಲ್ಲಿ ಕೇವಲ ೨೬೦ ವಿದ್ಯಾರ್ಥಿನಿಯರೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ನೇರ ನಿಷ್ಠೆ, ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಇಂದು ೪,೦೦೦ ರಿಂದ ೫,೦೦೦ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಬಣ್ಣಿಸಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ವಿವಿ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಹಿಂದಿನ ಕುಲಪತಿಗಳು, ಕುಲಸಚಿವರು ಮೌಲ್ಯಮಾಪನ, ಆರ್ಥಿಕ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಲವು ಮಹನೀಯರು ಶ್ರಮಿಸಿದ್ದಾರೆ. ಇಂದು ಅವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.ಕುಲಸಚಿವ ಪ್ರೊ.ಎಚ್.ಎಮ್. ಚಂದ್ರಶೇಖರ ಮಾತನಾಡಿದರು. ಮಹಿಳಾ ವಿವಿಯ ನಿವೃತ್ತ ಬೋಧಕೇತರ ಸಿಬ್ಬಂದಿ ಶ್ರೀದೇವಿ ಬಂಡಗಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಾಧನೆಗಳನ್ನು ಮಾಡಿದ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿನಿಯರು ಅಕ್ಕಮಹಾದೇವಿ ಚಿತ್ರಕಥೆ ಹಿನ್ನೆಲೆಯುಳ್ಳ ಯೋಗ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಡೀನ್ರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪೊ.ಜ್ಯೋತಿ ಉಪಾಧ್ಯೆ ಕಾರ್ಯಕ್ರಮ ನಿರೂಪಿಸಿದರು. ಡಾ.ಕಲಾವತಿ ಕಾಂಬಳೆ ವಂದಿಸಿದರು.