ಸಾರಾಂಶ
ಕಥೆ, ಕವನ, ಪ್ರವಾಸ ಕಥನ, ನಾಟಕ, ಕಾದಂಬರಿ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ನಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಬರೆಯಲು ಕನ್ನಡದಲ್ಲಿ ಸಾಗರದಷ್ಟು ವಿಶಾಲ ಸಾಹಿತ್ಯ ಭಂಡಾರವೇ ತುಂಬಿದೆ.
ಹೊನ್ನಾವರ: ನಮ್ಮ ಓದು ಮತ್ತು ಅನುಭವದ ಹಿನ್ನೆಲೆಯಲ್ಲಿ ಬರೆಯುತ್ತ ಸಾಗಿದರೆ ಜ್ಞಾನ ವರ್ಧನೆಯ ಜತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ನಮ್ಮದೇ ಆದ ಕಿರುಕಾಣಿಕೆ ಸಲ್ಲಿಸಿದ ಧನ್ಯತೆ ದೊರೆಯುತ್ತದೆ ಎಂದು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ವಿಶ್ವವಿದ್ಯಾಲಯ ವಿಭಾಗ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈನ ಕುಲಸಚಿವ ಡಾ. ಮಂಜುನಾಥ ಎನ್. ಅಂಬಿಗ ಅಭಿಪ್ರಾಯಪಟ್ಟರು. ನಾಟ್ಯಶ್ರೀ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಕವಲಕ್ಕಿ ಇವರು ಶ್ರೀ ಸಿದ್ದಿ ವಿನಾಯಕ ಪ್ರೌಢಶಾಲೆ ಕೊಳಗದ್ದೆಯಲ್ಲಿ ಏರ್ಪಡಿಸಿದ್ದ ಕವನವಾಚನ, ಗಾಯನ, ಚಿತ್ರಕಥನ ಎಂಬ ವಿನೂತನ ಸಂಯೋಜನೆಯ ಕಾವ್ಯ ಸಂಧ್ಯಾ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಥೆ, ಕವನ, ಪ್ರವಾಸ ಕಥನ, ನಾಟಕ, ಕಾದಂಬರಿ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ನಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಬರೆಯಲು ಕನ್ನಡದಲ್ಲಿ ಸಾಗರದಷ್ಟು ವಿಶಾಲ ಸಾಹಿತ್ಯ ಭಂಡಾರವೇ ತುಂಬಿದೆ ಎಂದರು.ಕಾರ್ಯಕ್ರಮದಲ್ಲಿ ಕವಿಗಳಾದ ಡಾ. ಮಂಜುನಾಥ ಎನ್. ಅಂಬಿಗ, ಕೃಷ್ಣ ಎಂ. ನಾಯ್ಕ ಜಲವಳ್ಳಿ, ಗಣಪತಿ ಕೊಂಡಾಕುಳಿ, ಕಮಲಾ ಕೊಂಡಾತುಚಿ, ಕೆ.ವಿ. ಹೆಗಡೆ ಕವಲಕ್ಕಿ, ಷಣ್ಮುಖ ಭಟ್ ಬೆಕ್ಕುತ್ತೆ, ಜಿ.ಆರ್. ಭಟ್ ಗುಂಡಿಬೈಲು ತಾವು ರಚಿಸಿದ ಕವನಗಳನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ಎಲ್ಲ ಕವಿಗಳನ್ನು ಸನ್ಮಾನಿಸಲಾಯಿತು. ಖ್ಯಾತ ಗಾಯಕರಾದ ವಿದೂಷಿ ರೇಷ್ಮಾ ಭಟ್ ಬೆಂಗಳೂರು, ಶಿವರಾಮ ಭಾಗವತ್ ಯಲ್ಲಾಪುರ, ಲಕ್ಷ್ಮೀ ಹೆಗಡೆ ಕುಮಟಾ ಅವರು ರಾಗ ಸಂಯೋಜನೆಯೊಂದಿಗೆ ಕವನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಎಸ್.ಜಿ. ಭಟ್. ಕಬ್ಬಿನಗದ್ದೆ, ಪಿ.ಜಿ. ಹೆಗಡೆ ಖರ್ವಾ, ವಿ.ಐ. ನಾಯ್ಕ ಜಲವಳ್ಳಿ, ಮೋಹನ ನಾಯ್ಕ ಕೊಳಗದ್ದೆ, ಎನ್.ಜಿ. ಹೆಗಡೆ ಕಪ್ಪೆಕೆರೆ ಉಪಸ್ಥಿತರಿದ್ದರು. ಸರೋಜಾ ಭಟ್ ಖರ್ವಾ ಪ್ರಾರ್ಥಿಸಿದರು. ನಂತರ ನಾಟ್ಯಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಭಟ್ ಕಬ್ಬಿನಗದ್ದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ಗಣಪತಿ ಹೆಗಡೆ, ಹಡಿನಬಾಳ ನಿರೂಪಿಸಿ, ವಂದಿಸಿದರು.