ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬಸರಾಳು ಹೋಬಳಿಗೆ 30 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಬಸರಾಳು ಹೋಬಳಿಯಲ್ಲಿ 2 ಕೋಟಿ ರು. ವೆಚ್ಚದಲ್ಲಿ ಕೃಷಿ ಭವನ, 7 ಕೋಟಿ ರು. ವೆಚ್ಚದಲ್ಲಿ ಹೇಮಾವತಿ ನಾಲೆ ಆಧುನೀಕರಣ, ಸಾರ್ವಜನಿಕ ಸ್ಮಶಾನಕ್ಕೆ 20 ಲಕ್ಷ ರು., ಬಸರಾಳು ಗ್ರಾಮದಿಂದ ಮುತ್ತೇಗೆರೆ ಗ್ರಾಮಕ್ಕೆ 10 ಕೋಟಿ ರು. ವೆಚ್ಚದಲ್ಲಿ ರಸ್ತೆ ಆಧುನೀಕರಣ, ನಾಡಕಚೇರಿ ಮತ್ತು 50 ಬೆಡ್ ಆಸ್ಪತ್ರೆ ಯೋಜನೆಗೆ ಸಿದ್ಧತೆ, 25 ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಎಸ್.ಸಿ.ಕಾಲೋನಿ ಅಭಿವೃದ್ಧಿಗೆ 25 ಲಕ್ಷ ರು., ಬಸರಾಳು ಹೋಬಳಿ ಕೇಂದ್ರದ ರಸ್ತೆಗೆ 1 ಕೋಟಿ ರು. ಸೇರಿದಂತೆ ಬಸರಾಳು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒಟ್ಟು 30 ಕೋಟಿ ರು. ಅನುದಾನ ನೀಡಿ ಕಾಯಕಲ್ಪ ನೀಡಲಾಗಿದೆ ಎಂದು ಹೇಳಿದರು.
ಚಿಕ್ಕಮಂಡ್ಯ ಗ್ರಾಮದಿಂದ ಬಿಳಿದೆಗಲು ಗ್ರಾಮದವರೆಗೆ ಗುಂಡಿ ಬಿದ್ದಿರುವ ರಸ್ತೆಗೆ 10 ಕೋಟಿ ರು. ಮೀಸಲಿಡಲಾಗಿದೆ. ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ. ವಿರೋಧ ಪಕ್ಷದವರು ಬರೀ ಪೂಜೆ ಮಾಡಿ ಹೋಗುತ್ತಿದ್ದರು. ನಾವು ಉದ್ಘಾಟನೆ ಮಾಡುತ್ತಿದ್ದೇವೆ ಎಂದು ನುಡಿದರು.70 ವರ್ಷದ ಸ್ವತಂತ್ರ ಭಾರತದಲ್ಲಿ ಈ ಪ್ರಮಾಣದ ಅಭಿವೃದ್ಧಿ, ಅನುದಾನ ನೀವು ನೋಡಿರುವುದಿಲ್ಲ. ಆದರೆ, ಎಂಪಿ ಚುನಾವಣೆಯಲ್ಲಿ ನೀವು ನಡೆದುಕೊಂಡಿದ್ದು ನನಗೆ ಇಷ್ಟ ಆಗಲಿಲ್ಲ. ಕೆಲಸ ಮಾಡುವವರಿಗೆ ಮತ ನೀಡಬೇಕು, ಕೈಗೆ ಸಿಗದವರಿಗೆ ಮತ ನೀಡಿದ್ದೀರಿ. ನಾನು ಗೌಡ, ನೀವೂ ಗೌಡ್ರೇ, ಎಲ್ಲರೂ ಗೌಡ್ರೇ, ಬರೀ ಕಥೆ ಹೇಳಿದರೆ ಆಗಲ್ಲ. ಕೆಲಸ ಮಾಡಬೇಕು. ಪ್ರತಿ ಶನಿವಾರ ಬಸರಾಳು ಹೋಬಳಿ ಕೇಂದ್ರದಲ್ಲಿ ನಿಮ್ಮ ಹವಾಲುಗಳನ್ನು ಸ್ವೀಕರಿಸುತ್ತೇನೆ, ಅದಕ್ಕೆ ಇಂದಿನಿಂದಲೇ ಚಾಲನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.