ಉಡುಪಿ: ಬುದ್ಧನಜಡ್ಡು, ಅವಲಕ್ಕಿಪಾರೆಗಳಲ್ಲಿನ ಗೀರುಚಿತ್ರಗಳ ಅಧ್ಯಯನ

| Published : Mar 25 2024, 12:51 AM IST

ಸಾರಾಂಶ

ಸುಮಾರು ಕ್ರಿಸ್ತ ಪೂರ್ವ ೬೦೦೦ ವರ್ಷಗಳಿಂದ ೩೫೦೦ ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಎಂಜಿನಿಯರ್ ಮುರುಳೀಧರ ಹೆಗ್ಡೆ ಅವರು ವಿವರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಾವಂಜೆಯ ಭಾವನಾ ಪ್ರತಿಷ್ಠಾನ ಹಾಗೂ ಭಾಸ ಗ್ಯಾಲರಿ - ಸ್ಟುಡಿಯೊ ಆಯೋಜಿಸಿದ್ದ ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮವು (ಏನ್ಸಸ್ಟ್ರಲ್ ಅಫೇರ್ಸ್) ಉಡುಪಿ ಜಿಲ್ಲೆಯ ಐತಿಹಾಸಿಕ ನೆಲೆಗಳಾದ ಬುದ್ಧನಜಡ್ಡು ಹಾಗೂ ಅವಲಕ್ಕಿಪಾರೆಗಳಲ್ಲಿ ಇತ್ತೀಚೆಗೆ ನಡೆಯಿತು.

ನಮ್ಮ ನಡುವಿನ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮದಲ್ಲಿ ಈ ಪುರಾತನ ಇತಿಹಾಸ ಕಾಲದ ನೆಲೆಗಳಲ್ಲಿನ ಗೀರು ರೇಖಾಚಿತ್ರಗಳು, ಸಂಬಂಧಿಸಿದ ಐತಿಹ್ಯಗಳ ಜೊತೆಗೆ ಐತಿಹಾಸಿಕ ಸ್ಥಳ ಹಾಗೂ ವಸ್ತುಗಳ ಅಧ್ಯಯನ ಮತ್ತು ದಾಖಲಾತಿಗಳನ್ನು ಒಳಗೊಂಡಿತ್ತು.

ಸುಮಾರು ಕ್ರಿಸ್ತ ಪೂರ್ವ ೬೦೦೦ ವರ್ಷಗಳಿಂದ ೩೫೦೦ ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಎಂಜಿನಿಯರ್ ಮುರುಳೀಧರ ಹೆಗ್ಡೆ ಅವರು ವಿವರಿಸಿದರು. ನಮ್ಮ ಕರಾವಳಿಯ ಭಾಗದ ಬಹು ಅಪರೂಪದ್ದೆನಿಸುವ ಈ ಚಿತ್ರಗಳ ಬಗೆಗೆ ಈ ಹಿಂದೆ ಶಿರ್ವ ಕಾಲೇಜಿನ ಪುರಾತತ್ವ ತಂಡವು ಅಧ್ಯಯನ ನಡೆಸಿತ್ತಲ್ಲದೇ ಜಾಗೃತಿ ಕಾರ್ಯಕ್ರಮ ಹಾಗೂ ಸೆಮಿನಾರ್ ನಡೆಸಿದ್ದ ಬಗೆಗೆ ಮಾಹಿತಿಯಿತ್ತರು.

ಸಾಮಾನ್ಯವಾಗಿ ಈ ಚಿತ್ರಗಳಲ್ಲಿ ಕಾಣುವ ಅಭಿವ್ಯಕ್ತಿಗಳು ಭಾರತದ ಕೊಂಕಣ ಕರಾವಳಿಯ ಇತರೆಡೆಯಲ್ಲಿಯ ಚಿತ್ರಗಳಂತೆಯೇ ಇರುವುದಲ್ಲದೇ ಬೇಟೆಯ ಸನ್ನಿವೇಶಗಳು, ಮಾನವರ ಚಿತ್ರಗಳು, ಪ್ರಾಣಿ ಪಕ್ಷಿಗಳೇ ಮೊದಲಾಗಿ ಮರಗಿಡಗಳ ಸ್ಥೂಲ ರೂಪದ ಕಲ್ಪನೆಗಳ ಬಗೆಗೆ ಕಾರ್ಯಕ್ರಮದ ಸಂಯೋಜಕರಾದ ಕಲಾವಿದ ಡಾ. ಜನಾರ್ದನ ಹಾವಂಜೆ ಅವರು ಮಾಹಿತಿ ನೀಡಿದರು. ಈ ಚಿತ್ರಗಳ ಸಂರಕ್ಷಣೆ ಮತ್ತು ಇದರ ಸಮೀಪದ ಸ್ಥಳಗಳಲ್ಲಿಯ ಇನ್ನಷ್ಟು ಶೋಧ ಮತ್ತು ಪುರಾತನ ವಸ್ತುಗಳು ಕರಾವಳಿಯ ಪ್ರಾಗಿತಿಹಾಸದ ಅಧ್ಯಯನವನ್ನು ಮತ್ತಷ್ಟು ವಿಸ್ತರಿಸಬಹುದೆಂದರು.

ಪ್ರಸ್ತುತ ಈ ಕಾರ್ಯಾಗಾರದಲ್ಲಿ ಕಲಾವಿದರು, ಛಾಯಾಗ್ರಾಹಕರು, ವಾಸ್ತುಶಿಲ್ಪ ಮತ್ತು ಇತಿಹಾಸದ ಅಧ್ಯಯನಾಸಕ್ತರು ಭಾಗವಹಿಸಿದ್ದರಲ್ಲದೇ ಇನ್ನು ಮುಂದೆಯೂ ಇನ್ನಷ್ಟು ಕರಾವಳಿ ಭಾಗದ ಪುರಾತನ ಕಟ್ಟಡಗಳು, ಇತಿಹಾಸ, ಕಲೆ ಮೊದಲಾದವುಗಳ ಬಗೆಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದಾಗಿ ಸಂಯೋಜಕರು ತಿಳಿಸಿದರು.