ಕಳೆದ ವರ್ಷದಂತೆ ಈ ಬಾರಿಯೂ ಉಡುಪಿ ಪರ್ಯಾಯೋತ್ಸವಕ್ಕೆ ಜಿಲ್ಲೆಯ ಮುಸ್ಲಿಮರು ಹೊರೆಕಾಣಿಕೆ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಅಧ್ಯಕ್ಷ ಕೆ.ಅಬೂಬಕ್ಕರ್ ಪರ್ಕಳ ತಿಳಿಸಿದ್ದಾರೆ.
ಉಡುಪಿ : ಕಳೆದ ವರ್ಷದಂತೆ ಈ ಬಾರಿಯೂ ಉಡುಪಿ ಪರ್ಯಾಯೋತ್ಸವಕ್ಕೆ ಜಿಲ್ಲೆಯ ಮುಸ್ಲಿಮರು ಹೊರೆಕಾಣಿಕೆ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಅಧ್ಯಕ್ಷ ಕೆ.ಅಬೂಬಕ್ಕರ್ ಪರ್ಕಳ ತಿಳಿಸಿದ್ದಾರೆ. ಆದರೆ, ಹೊರೆಕಾಣಿಕೆಗೆ ಸಮಿತಿ ಅನುಮತಿ ನೀಡಿಲ್ಲ ಎಂದು ಪರ್ಯಾಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶ್ರೀಕೃಷ್ಣಮಠ ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಸೌಹಾರ್ದತೆ
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಬೂಬಕ್ಕರ್, ಪುರಾತನ ಕಾಲದಿಂದಲೂ ಶ್ರೀಕೃಷ್ಣಮಠ ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಇದ್ದ ಸೌಹಾರ್ದತೆಯನ್ನು ಮುಂದುವರಿಸುವುದಕ್ಕಾಗಿ ಹೊರೆಕಾಣಿಕೆ ಸಮರ್ಪಿಸುತ್ತಿದೆ. ಜ.9ರಂದು ನಡೆಯುವ ಮೆರವಣಿಗೆ ವೇಳೆ ಭಕ್ತರಿಗೆ ಸೌಹಾರ್ದ ಸಮಿತಿ ವತಿಯಿಂದ ತಂಪು ಪಾನೀಯ ವಿತರಿಸಲಾಗುತ್ತದೆ. ಜ.13ರ ಶಿರೂರು ಮಠಕ್ಕೆ ಹಸಿರು ಹೊರೆಕಾಣಿಕೆ ನೀಡಲಾಗುತ್ತದೆ. ಜ.18ರ ಮೆರವಣಿಗೆಯಲ್ಲೂ 10 ಸಾವಿರ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅನುಮತಿ ನೀಡಿಲ್ಲ-ಶಾಸಕ:
ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವುದಕ್ಕೆ ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಮುಸ್ಲಿಮರು ಈವರೆಗೂ ಸ್ವಾಗತ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ. ಮಠದ ವತಿಯಿಂದಲೂ ಮುಸ್ಲಿಮರಿಗೆ ಹೊರೆಕಾಣಿಕೆ ನೀಡುವಂತೆ ಮನವಿಯನ್ನೂ ಮಾಡಿರುವುದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದೆ ಮುಸ್ಲಿಂ ಸೌಹಾರ್ದ ಸಮಿತಿ ಗೊಂದಲ ಸೃಷ್ಟಿಸಲು ಮುಂದಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಮೂಲಕ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಹೊರೆಕಾಣಿಕೆ ವಿಚಾರದಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿರಲಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಸ್ಪಷ್ಟನೆ ನೀಡಿದ್ದಾರೆ.
