ಸಾರಾಂಶ
ಶಿವಮೊಗ್ಗ: ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಹಾಗೂ ಅತ್ಯಾಧುನಿಕ ತಂತ್ರಾಂಶಗಳನ್ನು ಅರಿತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಮಂಗಳವಾರ ಜಿಲ್ಲೆಯ ನೌಕರರಿಗಾಗಿ ಏರ್ಪಡಿಸಿದ್ದ ಎಚ್ಆರ್ಎಂಎಸ್-2.0 ಹಾಗೂ ಕೆಎಎಸ್ಎಸ್ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಹಿಂದೆ ಬಳಸುತ್ತಿದ್ದ ಎಚ್.ಆರ್.ಎಂ.ಎಸ್.ತಂತ್ರಾಂಶ ಬಹಳ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ ಆದರೂ ಅದರ ಬಳಕೆ ಸ್ವಲ್ಪ ಕಷ್ಟಕರವೂ, ದಾಖಲೆಗಳ ನಿರ್ವಹಣೆ ಕಷ್ಟಕರವೂ ಆಗಿತ್ತು. ಅದನ್ನು ಇಲಾಖೆಗಳ ಪತ್ರಾಂಕಿತ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ಸರಳವಾಗಿ ಬಳಸಲು ಅನುಕೂಲವಾಗುವಂತೆ ಸರ್ಕಾರಿ ನೌಕರರ ಸಂಘವು ಎಚ್.ಆರ್.ಎಂ.ಎಸ್.ತಂತ್ರಾಂಶ ಮತ್ತು ಕೆ.ಎ.ಎಸ್.ಎಸ್.ಕುರಿತು ಕಾರ್ಯಾಗಾರ ಆಯೋಜಿಸಿರುವುದು ಅತ್ಯಂತ ಉಪಯುಕ್ತವಾಗಿದೆ. ಈ ತಂತ್ರಾಂಶವನ್ನು ಅರಿತು ಅಳವಡಿಸಿಕೊಂಡಲ್ಲಿ ಆಡಳಿತ ವ್ಯವಸ್ಥೆ ಸುಗಮವಾಗಲಿದೆ ಎಂದರು.
ಪ್ರಸ್ತುತ ವಿನ್ಯಾಸಗೊಳಿಸಲಾಗಿರುವ ಎಚ್.ಆರ್.ಎಂ.ಎಸ್.ತಂತ್ರಾಂಶ-2.0 ಅನ್ನು ವಿಷಯ ನಿರ್ವಾಹಕರು ಸರಳವಾಗಿ ಅರಿತು ನಿರ್ವಹಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಅದರಲ್ಲಿ ನೌಕರರ ಎಲ್ಲಾ ದಾಖಲೆಗಳನ್ನು ನಿರ್ವಹಿಸಲು ಹಾಗೂ ದಾಖಲಿಸಲು ವಿಶೇಷ ಗಮನಹರಿಸಲಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅಕ್ಟೋಬರ್ ವರೆಗೆ ನಡೆಯಲಿದೆ. ನಂತರದ ಕಾಲದಲ್ಲಿ ಎಲ್ಲರೂ ತಂತ್ರಾಂಶವನ್ನು ಸರಳವಾಗಿ ಬಳಸಿಕೊಳ್ಳಬಹುದಾಗಿದೆ. ತಂತ್ರಾಂಶದ ಬಳಕೆ ಕುರಿತು ತರಬೇತಿ ಪಡೆದವರು ತರಬೇತಿ ಪಡೆಯದ ಇತರೆ ಅಧಿಕಾರಿ-ಸಿಬ್ಬಂದಿಗಳಿಗೂ ತಿಳಿಸುವಂತಾಗಬೇಕು ಎಂದರು.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಈ ತಂತ್ರಾಂಶ ಬಳಕೆಯ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘವು ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೌಕರರಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದು, ನೌಕರರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ನೌಕರರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕು ಎಂದರು.
ಇ ತಂತ್ರಾಂಶದ ಬಳಕೆಯಿಂದ ನೌಕರರ ದಾಖಲೆಗಳನ್ನು ನಿರ್ವಹಿಸಲು ಹಾಗೂ ವ್ಯವಸ್ಥಿತವಾಗಿ ದಾಖಲಿಸುವಲ್ಲಿ ಸಮಸ್ಯೆಗಳಿಂದ ಮುಕ್ತಗೊಂಡು ಸುಧಾರಣೆ ಕಾಣಬಹುದಾಗಿದೆ. ಉಪನ್ಯಾಸ, ಚರ್ಚೆ, ಸಂವಾದ ಮತ್ತು ಪ್ರಾತ್ಯಕ್ಷಿತೆಗಳ ಮೂಲಕ ನಡೆಯುವ ತರಬೇತಿ ಕಾರ್ಯಾಗಾರವು ಅತ್ಯುಪಯುಕ್ತವಾಗಿದೆ. ಅದಕ್ಕಾಗಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳೇ ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ ಎಂದರು.ಕಾರ್ಯಾಗಾರದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿದ್ದ ಯೋಜನಾಧಿಕಾರಿ ನಿರ್ಮಲಾ, ತಾಂತ್ರಿಕ ತರಬೇತುದಾರ ಸುಮಂತ ಮತ್ತು ಯೋಜನಾಧಿಕಾರಿ ಸುಧಾರಾಣಿ, ನೌಕರರ ಸಂಘದ ಗೌರವಾಧ್ಯಕ್ಷ ಆರ್.ಪಾಪಣ್ಣ, ರಾಜ್ಯ ಪರಿಷತ್ ಸದಸ್ಯ ಎನ್.ಎಂ.ರಂಗನಾಥ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಘಟಕಗಳ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.