ಸಾರಾಂಶ
ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಗುರುವಾರ ವಿವಿಧ ಸಂಘಟನೆಗಳ ಮುಖಂಡರು ಕೆಎಂಇಆರ್ಸಿ ಅಧ್ಯಕ್ಷೆ ಉಮಾ ಮಹಾದೇವನ್, ಕೆಎಂಇಆರ್ಇ ಮೇಲ್ವಿಚಾರಣಾ ಪ್ರಾಧಿಕಾರದ ಸಲಹೆಗಾರ ಬಾಲ ಸುಬ್ರಮಣ್ಯನ್ ಅವರಿಗೆ ಅಹವಾಲು ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸಂಡೂರು
ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಗುರುವಾರ ವಿವಿಧ ಸಂಘಟನೆಗಳ ಮುಖಂಡರು ಕೆಎಂಇಆರ್ಸಿ ಅಧ್ಯಕ್ಷೆ ಉಮಾ ಮಹಾದೇವನ್, ಕೆಎಂಇಆರ್ಇ ಮೇಲ್ವಿಚಾರಣಾ ಪ್ರಾಧಿಕಾರದ ಸಲಹೆಗಾರ ಬಾಲ ಸುಬ್ರಮಣ್ಯನ್ ಅವರಿಗೆ ಅಹವಾಲು ಸಲ್ಲಿಸಿದರು.ಜನ ಸಂಗ್ರಾಮ ಪರಿಷತ್ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮನವಿ ಸಲ್ಲಿಸಿ, ಸಂಡೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಮತ್ತು ತಾಲೂಕಿನ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಮಿಕ ಸಂಘಟನೆಯ ಮುಖಂಡರಾದ ಆನಂದ್, ಸತೀಶ್, ಯರಿಸ್ವಾಮಿ ಮನವಿ ಸಲ್ಲಿಸಿ, ೨೦೧೧ರಲ್ಲಿ ಗಣಿಗಾರಿಕೆ ಬಂದ್ ಆದಮೇಲೆ ಸುಮಾರು ೨೫೦೦೦ ಗಣಿ ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರಿಗೆ ಪರಿಹಾರ ದೊರೆತಿಲ್ಲ. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಪರಿಹಾರ ನೀಡಬೇಕು, ಉದ್ಯೋಗ ಮತ್ತು ವಸತಿ ರಹಿತರಿಗೆ ಉದ್ಯೋಗ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರ ಕಾರ್ಡ್ ವಿತರಿಸಿ, ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ಸಹಕರಿಸಬೇಕು ಎಂದರು.ಲಾರಿ ಮಾಲೀಕರ ಸಂಘದ ಅಧ್ಯಕ್ಷ ಈರಣ್ಣ ಉಪ್ಪಾರ್ ಮಾತನಾಡಿ, ಸಂಡೂರು ಬೈಪಾಸ್ ರಸ್ತೆಯಲ್ಲಿನ ಟೋಲ್ ಸಂಗ್ರಹಿಸುತ್ತಿರುವ ಸಂಸ್ಥೆಯವರಿಗೆ ಹಣವನ್ನು ನೀಡಿ, ಟೋಲ್ ಪ್ಲಾಜಾವನ್ನು ತೆರವುಗೊಳಿಸುವಂತೆ ಕೋರಿದರೆ, ಕೆಲವರು ವಸತಿ ವ್ಯವಸ್ಥೆ ಕಲ್ಪಿಸಲು, ಕೆಲವರು ಮಹಿಳೆಯರ ಸಬಲೀಕರಣಕ್ಕಾಗಿ ಗಾರ್ಮೆಂಟ್ ಹಾಗೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು, ಕೆಲವರು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿದರು.
ಕೆಎಂಇಆರ್ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್, ಜಿಲ್ಲಾಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಉಪಸ್ಥಿತರಿದ್ದರು.