ಸಾರಾಂಶ
ಗದಗ: ನಾಲತವಾಡದ ವೀರೇಶ್ವರ ಶರಣರು ಶಿಕ್ಷಕರಾಗಿ, ಕೃಷಿಕರಾಗಿ ಜಂಗಮ ದಾಸೋಹದಲ್ಲಿ ನಿರತರಾಗಿದ್ದರು. ಗ್ರಾಮ ದೇವತೆಯ ಜಾತ್ರೆಯಲ್ಲಿ ಪ್ರಾಣಿಬಲಿ ಕೊಡುವುದನ್ನು ವಿರೋಧಿಸಿದರು.
ಅವರು ಹುಟ್ಟಿ ಬೆಳೆದದ್ದು ನಾಲತವಾಡವಾದರೂ ಸಾಧನೆ ಮಾಡಿದ ಕ್ಷೇತ್ರ ಸೋಲಾಪುರದಲ್ಲಿ ಎಂದು ಅಳವಂಡಿಯ ಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಮಹಾರಥೋತ್ಸವ ಹಾಗೂ ಚಂದ್ರಶೇಖರ ಶರಣರ 11ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೂಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವತೆ, ಸಹಕಾರ ಮೂಡಿಸಿ, ಜಾತಿ, ಭೇದಭಾವಗಳನ್ನು ತೊಲಗಿಸಿ ಪ್ರಾಣಿಬಲಿಗೆ ಕಡಿವಾಣ ಹಾಕುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದರು. ವೀರೇಶ್ವರ ಶರಣರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸಿದರು ಎಂದು ಹೇಳಿದರು.
ಶ್ರೀಮಠದ ಪೀಠಾಧಿಪತಿ ಶಿವಕುಮಾರ ಶರಣರು ಮಾತನಾಡಿ, ವೀರೇಶ್ವರ ಶರಣರು ತಮ್ಮ ಕಾಯಕದ ಮೂಲಕ ಬಂದ ಹಣದಿಂದ ದಾಸೋಹ ನಡೆಸುತ್ತಿದ್ದರು.
ನಂತರ ವೀರೇಶ್ವರ ಶರಣರ ಪ್ರೇರಣೆಯಿಂದ ಚಂದ್ರಶೇಖರ ಶರಣರು ನರಸಾಪೂರ ಗ್ರಾಮದಲ್ಲಿ 1974ರಲ್ಲಿ ವೀರೇಶ್ವರ ಶರಣರ ಮಠ ಸ್ಥಾಪಿಸಿ ನಿತ್ಯ ಪೂಜಾ ಕೈಂಕರ್ಯ ನಡೆಸುತ್ತ, ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತ ಶ್ರೀಮಠ ಮುನ್ನಡೆಸಿಕೊಂಡು ಬಂದರು. ಶ್ರೀಮಠದಲ್ಲಿ ಪ್ರತಿರ್ಷ ವೀರೇಶ್ವರ ಶರಣರ ಜಯಂತ್ಯುತ್ಸವ ಹಾಗೂ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಷಟಸ್ಥಲ ಧ್ವಜಾರೋಹಣ, ವೀರೇಶ್ವರ ಶರಣರ ಹಾಗೂ ಚಂದ್ರಶೇಖರ ಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನಂತರ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ಮಹೇಶ ಕುಂದ್ರಾಳ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕಳಕಮಲ್ಲಯ್ಯ ಹಿರೇಮಠ, ಕೆ.ಎಸ್.ಹಿರೇಮಠ, ಡಾ ನಾಗರತ್ನಮ್ಮ, ಉಮೇಶ ಶಿವಶಿಂಪರ ಸೇರಿ ಅನೇಕರು ಇದ್ದರು. ಎಸ್.ಐ.ಪಾಟೀಲ ಸ್ವಾಗತಿಸಿದರು. ಡಾ.ಸುಜಾತಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಲ್. ಹೊಸಳ್ಳಿಹಿರೇಮಠ ನಿರೂಪಿಸಿದರು. ಲಿಂಗರಾಜ್ ಕಬ್ಬೂರ ವಂದಿಸಿದರು.