ಸಾರಾಂಶ
ತಾಲೂಕಿನ ದೇಶಿಪುರ ಕಾಲೋನಿ ಬಳಿ ಮೇಕೆ ಮೇಯಿಸುತ್ತಿದ್ದ ಗಿರಿಜನ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.
ಗುಂಡ್ಲುಪೇಟೆ : ತಾಲೂಕಿನ ದೇಶಿಪುರ ಕಾಲೋನಿ ಬಳಿ ಮೇಕೆ ಮೇಯಿಸುತ್ತಿದ್ದ ಗಿರಿಜನ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.
ದೇಶಿಪುರ ಕಾಲೋನಿ ಜೇನು ಕುರುಬ ಜನಾಂಗದ ಪುಟ್ಟಮ್ಮ (೩೫) ಹುಲಿ ದಾಳಿಗೆ ತುತ್ತಾಗಿದ್ದಾಳೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ದೇಶಿಪುರ ಕಾಲೋನಿ ಬಳಿ ಪುಟ್ಟಮ್ಮ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿ ಕತ್ತು ಹಾಗು ಎದೆಯ ಭಾಗ ಕಚ್ಚಿ ಸಾಯಿಸಿದೆ. ಹುಲಿ ದಾಳಿಗೆ ಬಲಿಯಾದ ಗಿರಿಜನ ಮಹಿಳೆ ಸಾವಾಗಿರುವ ವಿಷಯ ತಿಳಿದ ಎಸಿಎಫ್ ಸುರೇಶ್, ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರ ಆಕ್ರೋಶ:ಹುಲಿ ದಾಳಿಗೆ ಗಿರಿಜನ ಮಹಿಳೆ ಬಲಿಯಾಗಿದ್ದಕ್ಕೆ ಸಹಜವಾಗಿಯೇ ರೈತರು ಹಾಗೂ ಗಿರಿಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಜಿಲ್ಲಾ ಗಿರಿಜನ ಕಲ್ಯಾಣ ಅಧಿಕಾರಿ ಎಚ್.ಎಸ್.ಬಿಂದ್ಯಾ ಹಾಗೂ ಬೇಗೂರು ಪೊಲೀಸರು ಭೇಟಿ ನೀಡಿದ್ದರು.
ಶವ ಎತ್ತಲು ಬಿಡಲ್ಲ!:ಗಿರಿಜನ ಮಹಿಳೆ ಸಾವಾಗಿದೆ ನಿಜ, ಅರಣ್ಯ ಇಲಾಖೆ ಸ್ಥಳದಲ್ಲೇ ೧೫ ಲಕ್ಷ ಪರಿಹಾರ ನೀಡಬೇಕು, ಮೃತರ ಪುತ್ರನಿಗೆ ಕೆಲಸ ನೀಡಬೇಕು, ರೈಲ್ವೆ ಬ್ಯಾರಿಕೇಡ್ ಹಾಕಬೇಕು, ಪ್ರತಿ ದಿನ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ತಿರುಗಬೇಕು ಎಂಬ ಭರವಸೆ ಕೊಟ್ಟರೆ ಮಾತ್ರ ಶವ ಎತ್ತಲು ಅವಕಾಶ ಮಾಡಿ ಕೊಡುತ್ತೇವೆ ಎಂದು ಗಿರಿಜನ ಮುಖಂಡ ಮುದ್ದಯ್ಯ ಪಟ್ಟು ಹಿಡಿದು ಕುಳಿತಿದರು.
10ಲಕ್ಷ ಪರಿಹಾರ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಮಾತನಾಡಿ, ಇಲಾಖೆಯ ನಿಯಮದ ಪ್ರಕಾರ ೧೦ ಲಕ್ಷ ಪರಿಹಾರ ನೀಡುತ್ತೇವೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಇಲಾಖಾ ನಿಯಮದಂತೆ ಪರಿಹಾರ ನೀಡುತ್ತೇವೆ. ಮೃತರ ಪುತ್ರನಿಗೆ ಹೊರ ಗುತ್ತಿಗೆಯಲ್ಲಿ ಕೆಲಸ ನೀಡುತ್ತೇವೆ. ಇಲಾಖೆ ಸಿಬ್ಬಂದಿಗೆ ರಾತ್ರಿ ಗಸ್ತು ಮಾಡಲು ಸೂಚನೆ ನೀಡುತ್ತೇನೆ. ಅಲ್ಲದೆ ರೈಲ್ವೆ ಬ್ಯಾರಿಕೇಡ್ ಹಾಕಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಅಧಿಕಾರಿಗಳ ಭರವಸೆ ಮೇರೆಗೆ ಶವ ಪರೀಕ್ಷೆಗೆ ಗಿರಿಜನರು ಅವಕಾಶ ಮಾಡಿ ಕೊಟ್ಟರು.