ಬಿಜೆಪಿ ಜಿಲ್ಲಾ ಘಟಕದಲ್ಲಿ ಯಾವುದೇ ಬಣ, ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲರ ವಿಶ್ವಾಸ ಗಳಿಸಿ ಪಕ್ಷ ಕಟ್ಟುತ್ತೇನೆ. ಯಾರು ಕೂಡ ಬಣ, ಗುಂಪುಗಾರಿಕೆ ಮಾಡಬಾರದು. ನಮ್ಮದು ಒಂದೇ ಪಾರ್ಟಿ ಅದು ಬಿಜೆಪಿ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರವಲ್ಲ. ಪಕ್ಷದ ಜವಾಬ್ದಾರಿ. ಪಕ್ಷವನ್ನು ಜಿಲ್ಲೆಯಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ಯುಲು ಶ್ರಮ, ದೇಶ ಮೊದಲು, ಪಕ್ಷ ಆ ಮೇಲೆ, ವ್ಯಕ್ತಿ ನಂತರ ಎಂಬುದೇ ಬಿಜೆಪಿಯ ಸಿದ್ಧಾಂತವಾಗಿದೆ. ವ್ಯಕ್ತಿಗೆ ಯಾವುದೇ ಪ್ರಾಧಾನ್ಯತೆ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ವರಿಷ್ಠರು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ, ಸಲಹೆ ಪಡೆದು ಜಿಲ್ಲೆಯ ಯಾವುದೇ ಕಾರ್ಯಕರ್ತನಿಗೆ ಧಕ್ಕೆ ಬಾರದ ರೀತಿಯಲ್ಲಿ ಪಕ್ಷವನ್ನು ಬಲಿಷ್ಟವಾಗಿ ಕಟ್ಟಲು ಶ್ರಮಿಸುವುದಾಗಿ ನೂತನ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.

ಸುಭಾಷ್ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಅವರಿಂದ ಪಕ್ಷದ ಬಾವುಟ ಪಡೆದು ಅಧಿಕಾರ ಸ್ವೀಕರಿಸಿ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರವಲ್ಲ. ಪಕ್ಷದ ಜವಾಬ್ದಾರಿ. ಪಕ್ಷವನ್ನು ಜಿಲ್ಲೆಯಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ಯುಲು ಶ್ರಮಿಸುವುದಾಗಿ ತಿಳಿಸಿದರು.

ದೇಶ ಮೊದಲು, ಪಕ್ಷ ಆ ಮೇಲೆ, ವ್ಯಕ್ತಿ ನಂತರ ಎಂಬುದೇ ಬಿಜೆಪಿಯ ಸಿದ್ಧಾಂತವಾಗಿದೆ. ವ್ಯಕ್ತಿಗೆ ಯಾವುದೇ ಪ್ರಾಧಾನ್ಯತೆ ಇಲ್ಲ. ಪಕ್ಷದ ಜವಾಬ್ದಾರಿಯನ್ನು ಯಾರಿಗಾದರೂ ಕೊಡಲಿ. ನಾವು-ನೀವು ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಸದೃಢಗೊಳಿಸೋಣ. ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರ, ಪ್ರೀತಿ ಅಗತ್ಯ ಎಂದರು.

ಲೋಕಸಭೆ ಚುನಾವಣೆ ಬರುತ್ತಿದೆ. ಇದರಲ್ಲಿ ನಾವು ಶೇ.100 ರಷ್ಟು ಗೆಲ್ಲಬೇಕು. ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಯಾರೊಬ್ಬರೂ ಸದಸ್ಯರಾಗಿ ಆಯ್ಕೆಯಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ವ್ಯಕ್ತಿಗೆ ಅವಕಾಶ ನೀಡಿ ಎಲ್ಲರೂ ಒಗ್ಗೂಡಿ ಗೆಲ್ಲಿಸೋಣ ಎಂದು ಕರೆ ನೀಡಿದರು.

ಬಣ, ಗುಂಪುಗಾರಿಕೆಗೆ ಅವಕಾಶವಿಲ್ಲ:

ಬಿಜೆಪಿ ಜಿಲ್ಲಾ ಘಟಕದಲ್ಲಿ ಯಾವುದೇ ಬಣ, ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲರ ವಿಶ್ವಾಸ ಗಳಿಸಿ ಪಕ್ಷ ಕಟ್ಟುತ್ತೇನೆ. ಯಾರು ಕೂಡ ಬಣ, ಗುಂಪುಗಾರಿಕೆ ಮಾಡಬಾರದು. ನಮ್ಮದು ಒಂದೇ ಪಾರ್ಟಿ ಅದು ಬಿಜೆಪಿ ಎಂದರು.

ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಗುರುತಿಸಿದ್ದಾರೆ ಎಂದರೆ ಅದಕ್ಕೆ ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಅವರೇ ಕಾರಣ. ಸಿ.ಪಿ.ಉಮೇಶ್ ಅವರನ್ನು ರಾಜ್ಯ ನಾಯಕರು ಗುರುತಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ಅವರು ಸರ್ಕಾರದ ಅಧಿಕಾರವನ್ನು ಉಪಯೋಗಿಸದೆ ಉತ್ತಮ ಆಡಳಿತ ನೀಡಿದರು ಎಂದರು.

ಸಿ.ಪಿ.ಉಮೇಶ್ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ನಂತರ ಸಹಕಾರ ಭಾರತಿ ಸಂಘ ಹಾಗೂ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮೂರು ಹುದ್ದೆ ಪಡೆದು ಹ್ಯಾಟ್ರಿಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು ಎಂದರು.

ಇತಿಹಾಸದಲ್ಲೇ ಹೆಚ್ಚು ಸದಸ್ಯತ್ವವನ್ನು ಮಾಡಿಸಿದ ಹೆಗ್ಗಳಿಗೆ ಉಮೇಶ್ ಅವರಿಗೆ ಸಲ್ಲುತ್ತದೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 28 ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಿ.ಪಿ.ಉಮೇಶ್ ಅವರ ಕಾರ್ಯಕ್ಷಮತೆ ಕಾರಣ ಎಂದು ಕೊಂಡಾಡಿದರು.

ಇಷ್ಟು ಕೆಲಸ ಮಾಡಿದರೂ ಉಮೇಶ್ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದ್ದಾರೆ. ಅವರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನವನ್ನು ವರಿಷ್ಠರು ನೀಡಲಿದ್ದಾರೆ. ಅತಿ ಶೀಘ್ರದಲ್ಲೇ ಸಿಹಿ ಸುದ್ದಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್‍ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಕಾರ್‍ಯದರ್ಶಿ ಲಕ್ಷ್ಮಿ ಅಶ್ವಿನ್‌ಗೌಡ, ಮುಖಂಡರಾದ ಎಸ್.ಪಿ.ಸ್ವಾಮಿ, ಕೆ.ಎಸ್. ನಂಜುಂಡೇಗೌಡ, ಅಶೋಕ್ ಜಯರಾಂ, ಬೂಕಳ್ಳಿ ಮಂಜು, ವಿದ್ಯಾ ನಾಗೇಂದ್ರ, ಇ.ಸಿ. ನಿಂಗರಾಜ್‌ಗೌಡ ಇತರರು ಇದ್ದರು.