ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಆಗಮನಕ್ಕೆ ಸಜ್ಜಾಗಲು ಶಾಸಕ ಕರೆ । ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಲು ಭರದಿಂದ ಸಿದ್ಧತೆ ಕೈಗೊಳ್ಳಲು ಸೂಚನೆ
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಏ.೨೧ಕ್ಕೆ ಗುಂಡ್ಲುಪೇಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬರಲಿದ್ದು, ಅಂದು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಆಗಬೇಕಿದ್ದು, ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮನವಿ ಮಾಡಿದರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುಂಡ್ಲುಪೇಟೆ ಹಾಗೂ ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿ ಎಂದು ಕೇಳಿಕೊಂಡರು.₹600 ಕೋಟಿ ಯೋಜನೆಗೆ ಚಾಲನೆ:ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸುಮ್ಮನೇ ಬರುತ್ತಿಲ್ಲ. ಗುಂಡ್ಲುಪೇಟೆ ತಾಲೂಕಿನ ೧೧೦ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ೪೭೫ ಕೋಟಿ ರು. ಅನುದಾನ ನೀಡಿ, ಯೋಜನೆಗೆ ಚಾಲನೆ ನೀಡಲು ಬರುತ್ತಿದ್ದಾರೆ ಎಂದರು.೧೦೦ ಕೆರೆ, ಕಟ್ಟೆ ಯೋಜನೆಗೆ ಈ ಹಿಂದೆ ಡಿಪಿಆರ್ ಆಗಿತ್ತು. ನಾನು ಶಾಸಕನಾದ ಬಳಿಕ ಈ ಯೋಜನೆಗೆ ಅನುಷ್ಟಾನಗೊಳಿಸಲು ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಜೊತೆಗೆ ೬೦೦ ಕೋಟಿ ರು.ಗೂ ಹೆಚ್ಚು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ ಎಂದರು.ಸಿಎಂ, ಡಿಸಿಎಂ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಜಿಲ್ಲೆಯ ಶಾಸಕರು ಬರುವ ಈ ಬೃಹತ್ ಸಮಾರಂಭಕ್ಕೆ ಕನಿಷ್ಠ ೧೦ರಿಂದ ೧೫ ಸಾವಿರ ಜನರು ಸೇರಿಸಬೇಕಿದೆ. ಈ ಬಗ್ಗೆ ಗ್ರಾಪಂ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಿತಿ ಮಾಡಿಕೊಂಡು ಪ್ರತಿ ಗ್ರಾಮದಲ್ಲಿ ಕನಿಷ್ಟ ನೂರು ಜನರನ್ನು ಕರೆತರಬೇಕು ಎಂದು ಸಲಹೆ ನೀಡಿದರು.ಗೆಲ್ಲಿಸಿದ್ದೀರಿ, ಕೆಲಸ ಮಾಡಿದ್ದೇನೆ:ನನ್ನನ್ನು ೨೦೨೩ರಲ್ಲಿ ಕ್ಷೇತ್ರದ ಜನರು ಅತ್ಯಧಿಕ ಮತದಿಂದ ಆರಿಸಿ ಕಳುಹಿಸಿದ್ದೀರಿ. ಜನರ, ಪ್ರೀತಿ, ಅಭಿಮಾನದ ತೋರಿಸಿದ್ದೀರಿ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ ಎಂದು ಕಾರ್ಯಕರ್ತರಲ್ಲಿ ಹೇಳಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕಾಡ ಅಧ್ಯಕ್ಷ ಪಿ. ಮರಿಸ್ವಾಮಿ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್, ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಬಿ.ಜಿ. ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರ ನಾಯಕ, ವಕೀಲ ಹಂಗಳ ರಾಜೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಗಿರಿಜನ ಮುಖಂಡ ಡಾ.ರತ್ನಮ್ಮ ಮಾತನಾಡಿದರು.ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಆರ್.ಎಸ್. ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಜಿ. ಮಡಿವಾಳಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ. ಕುಮಾರಸ್ವಾಮಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್. ಶಿವನಾಗಪ್ಪ, ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜುಮ, ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಶಶಿಧರ್ ಪಿ.ದೀಪು, ಗ್ರಾಪಂ ಮಾಜಿ ಅಧ್ಯಕ್ಷ ಮಂಚಹಳ್ಳಿ ಲೋಕೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮೃತ್ಯುಂಜಯ, ಫ್ಯಾಕ್ಸ್ ಅಧ್ಯಕ್ಷ ಕೆ.ಎಂ. ಮಹದೇವ ಸ್ವಾಮಿ ಸೇರಿದಂತೆ ನೂರಾರು ಮಂದಿ ಇದ್ದರು.---ಬನ್ನಿ, ಅಭಿವೃದ್ಧಿ ಬಗ್ಗೆ ಚರ್ಚಿಸೋಣ: ಸವಾಲ್ಗುಂಡ್ಲುಪೇಟೆ: ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಟೀಕಿಸುವವರಿಗೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಬನ್ನಿ ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಎಂದು ಬಹಿರಂಗ ಸವಾಲು ಹಾಕಿದರು.ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಾನು ಶಾಸಕನಾದ ಬಳಿಕ ೪೭೫ ಕೋಟಿ ರು., ಹತ್ತಿ ಮಾರುಕಟ್ಟೆಗೆ ೬ ಕೋಟಿ ರು., ಬೊಮ್ಮನಹಳ್ಳಿ ಅಂಬ್ಕೇಡರ್ ವಸತಿ ಶಾಲೆಗೆ ೧೮ ಕೋಟಿ ರು., ಗರಗನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ೧೮ ಕೋಟಿ ರು.,೪ ಕೋಟಿ ದೇವಸ್ಥಾನದ ಅಭಿವೃದ್ಧಿಗೆ, ಸಿಎಂ ವಿಶೇಷ ಅನುದಾನ ೮೫ ಕೋಟಿ ರು., ಹತ್ತಾರು ಕೋಟಿಗಳಲ್ಲಿ ರಸ್ತೆ ಅಭಿವೃದ್ಧಿ, ಸಮುದಾಯ ಮುಂದುವರಿದ ಕಾಮಗಾರಿಗೆ ೫ ಕೋಟಿ ರು. ಸೇರಿದಂತೆ ಇನ್ನಿತರ ಅನುದಾನ ತಂದಿದ್ದೇನೆ ಎಂದರು.ಅನುದಾನ ತಂದಿಲ್ಲ, ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಟೀಕಿಸುವ ಮಂದಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.ಕೆಲಸಗಳೇ ಉತ್ತರ:ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್ ಮಾತನಾಡಿ ಕ್ಷೇತ್ರದಲ್ಲಿ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ರ ಬಗ್ಗೆ ಟೀಕೆಗಳಿವೆ. ವಿಪಕ್ಷದವರ ಟೀಕೆಗೆ ಕಾಂಗ್ರೆಸ್ಸಿಗರು ಉತ್ತರ ಕೊಡುವ ಅಗತ್ಯವಿಲ್ಲ. ಕೆಲಸಗಳೇ ಉತ್ತರ ಕೊಡುತ್ತಿವೆ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.--- ೧ಜಿಪಿಟಿ೧ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿದರು.