ಸಾರಾಂಶ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಬಗ್ಗೆ ಕೆಲವರು ನೀಡುತ್ತಿರುವ ಬೇಜವಾಬ್ದಾರಿ ಹಾಗೂ ಶಾಂತಿ ಕದಡುವ ಹೇಳಿಕೆ ಖಂಡನೀಯ.
ಬೆಂಗಳೂರು : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಬಗ್ಗೆ ಕೆಲವರು ನೀಡುತ್ತಿರುವ ಬೇಜವಾಬ್ದಾರಿ ಹಾಗೂ ಶಾಂತಿ ಕದಡುವ ಹೇಳಿಕೆ ಖಂಡನೀಯ. ವರದಿ ವೈಜ್ಞಾನಿಕ, ವಸ್ತುನಿಷ್ಠ ಹಾಗೂ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದ್ದು, ವರದಿಯನ್ನು ಅನುಷ್ಠಾನ ಮಾಡಲೇಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಆಗ್ರಹಿಸಿದ್ದಾರೆ.
ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವರಾದ ಎಂ.ಆರ್.ಸೀತಾರಾಂ, ಉಮಾಶ್ರೀ ಸೇರಿ ವಿವಿಧ ಓಬಿಸಿ ಸಮುದಾಯಗಳ ಕಾಂಗ್ರೆಸ್ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ಸಂಪೂರ್ಣ ವರದಿ ಮಂಡಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
1931ರ ಬಳಿಕ ಇದೇ ಮೊದಲ ಬಾರಿಗೆ ಮನೆ-ಮನೆಗೆ ತೆರಳಿ ಸಮೀಕ್ಷಾ ವರದಿ ಮಾಡಿದ್ದು, ಇದರಲ್ಲಿ ಜಾತಿಯೂ ಒಂದು ಅಂಶ. ಈ ವರದಿ ಅಂತಿಮ ತೀರ್ಪು ಅಲ್ಲ. ವರದಿಯಲ್ಲಿ ಲೋಪದೋಷ ಇದ್ದರೆ ಆಯೋಗಕ್ಕೆ ಮನವಿ ನೀಡಿದರೆ ಸರಿಪಡಿಸಲು ಅವಕಾಶವಿದೆ. ಆದರೆ ವರದಿಯೇ ಸರಿ ಇಲ್ಲ ಎಂದು ಬೇಜವಾಬ್ದಾರಿಯಿಂದ ಮಾತನಾಡುವುದು ಖಂಡನೀಯ. 1.60 ಲಕ್ಷ ಸಿಬ್ಬಂದಿ 5.98 ಕೋಟಿ ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಇದು ಸ್ಯಾಂಪಲ್ ಸಮೀಕ್ಷೆಯಲ್ಲ. ಹೀಗಾಗಿ ವರದಿ ವಿರೋಧಿಸದೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಬೇಜವಾಬ್ದಾರಿ ಹೇಳಿಕೆ ಬೇಡ: ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಈಗ ವಿರೋಧ ಮಾಡುತ್ತಿರುವ ವರ್ಗದವರು ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗದ ವರದಿಯನ್ನೂ ವಿರೋಧಿಸಿದ್ದರು. ಯಾವುದೇ ಕಾರಣಕ್ಕೂ ಈ ವರದಿಯನ್ನು ಕೈಬಿಡುವ ಅಥವಾ ಮರು ಸಮೀಕ್ಷೆ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವರದಿ ಏಕಾಏಕಿ ಅನುಷ್ಠಾನ ಆಗುವುದಿಲ್ಲ. ಸಂಪುಟದಲ್ಲಿ ವಿಸ್ತೃತ ಚರ್ಚೆ ಆದ ಬಳಿಕ ಸಚಿವ ಸಂಪುಟ ಉಪಸಮಿತಿ ರಚನೆಯಾಗಬಹುದು. ಪ್ರತ್ಯೇಕ ಅಧಿವೇಶನ ಕರೆದು ವಿಸ್ತೃತ ಚರ್ಚೆಗೂ ಅವಕಾಶ ನೀಡಬಹುದು. ವರದಿಯು ವೈಜ್ಞಾನಿಕವಾಗಿದ್ದು, ವರದಿ ಜಾರಿಯಾಗಲೇಬೇಕು. ವರದಿ ಬಗ್ಗೆ ಅಪಹಾಸ್ಯ, ಬೇಜವಾಬ್ದಾರಿ ಹೇಳಿಕೆ ಬೇಡ ಎಂದು ಹೇಳಿದರು.
4 ಲಾರಿ ಲೋಡ್ ದಾಖಲೆಗಳಿವೆ: ಮಾಜಿ ಸಚಿವ ಎಂ.ಆರ್. ಸೀತಾರಾಮ್ ಮಾತನಾಡಿ, ವರದಿಯನ್ನು ಆಧಾರರಹಿತವಾಗಿ ಅವೈಜ್ಞಾನಿಕ ಎನ್ನುತ್ತಿದ್ದಾರೆ. ಇಂತಹ ಟೀಕೆಗಳೇ ಅಪ್ರಸ್ತುತ ಹಾಗೂ ಸಮಾಜಘಾತುಕ. ನಾನು ನನ್ನ ಸಮುದಾಯ 1 ಕೋಟಿ ಇದೆ ಎಂದರೆ ಆಗುತ್ತದೆಯೇ? ಮನೆ-ಮನೆಗೂ ಹೋಗಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ನಾಲ್ಕು ಲಾರಿ ಲೋಡ್ನಷ್ಟು ದತ್ತಾಂಶದ ದಾಖಲೆಗಳು ಖಜಾನೆಯಲ್ಲಿವೆ. ಹೀಗಾಗಿ ಸುಳ್ಳು ಆರೋಪ ಮಾಡಬಾರದು ಎಂದು ಹೇಳಿದರು.
ಮಾಜಿ ಸಚಿವರಾದ ಉಮಾಶ್ರೀ, ಬಿಬಿಎಂಪಿ ಮಾಜಿ ಮೇಯರ್ಗಳಾದ ಪಿ.ಆರ್.ರಮೇಶ್, ರಾಮಚಂದ್ರಪ್ಪ, ಡಿ.ವೆಂಕಟೇಶ ಮೂರ್ತಿ, ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಈಡಿಗ ಸಂಘದ ಕಾರ್ಯಾರ್ಧಯಕ್ಷ ಶಾಂತನಗೌಡ ಗುತ್ತೇದಾರ್ ಮತ್ತಿತರರು ಹಾಜರಿದ್ದರು.
ನಾನು ವರದಿ ವಿರೋಧಿಸಿಲ್ಲ: ನಾಗರಾಜ್ ಯಾದವ್
ಯಾದವರಿಗೆ ಅನ್ಯಾಯವಾಗಿದ್ದರೆ ಸರಿಪಡಿಸಬೇಕು ಎಂದು ಹೇಳಿದ್ದೇನೆಯೇ ಹೊರತು ಸಮೀಕ್ಷೆ ವರದಿಯನ್ನೇ ವಿರೋಧ ಮಾಡಿಲ್ಲ. ಜಾತಿವಾರು ಸಮೀಕ್ಷೆಗೆ ಆಗ್ರಹಿಸಿದವರಲ್ಲಿ ನಾವೂ ಇದ್ದೇವೆ. ಹೀಗಾಗಿ ವರದಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಹೇಳಿದರು.