ತ್ರಿವಿಧ ದಾಸೋಹ ಬೆಳಗಿದ ಸಿದ್ಧಗಂಗಾಶ್ರೀ - ಬೆಳೆದ ಕೈಗಳಿಂದ ಹಸಿದ ಹೊಟ್ಟೆಗೆ ಉಣಬಡಿಸುವ ಸೇತುವೆ

| N/A | Published : Apr 01 2025, 11:02 AM IST

Siddaganga Mutt

ಸಾರಾಂಶ

ಪೂಜ್ಯರು ಮಠದ ಆರ್ಥಿಕತೆಗಿಂತ ಅಡುಗೆ ಉಗ್ರಾಣದಲ್ಲಿರುವ ಅಕ್ಕಿಬೇಳೆಗಳ ಕಡೆಗೆ ಸದಾ ಗಮನ. ಏಕೆಂದರೆ, ಹಸಿದ ಹೊಟ್ಟೆಗೆ ಶಿವ ಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ನಾವು ಅವರ ದಾಸೋಹ ಪ್ರಜ್ಞೆಯನ್ನು ಅನುಸರಿಸಬೇಕು. ನಮ್ಮ ಜೀವನದಲ್ಲಿ ಹಸಿದ ಹೊಟ್ಟೆಗಳಿಗೆ ಉಣಬಡಿಸಿ ಪುಣ್ಯದ ಪಾಲು ಪಡೆಯಬೇಕು.

ಡಾ। ಎಸ್.ಪರಮೇಶ್‌,

ಜಿಲ್ಲಾಧ್ಯಕ್ಷರು, ಅಖಿಲ ಭಾರತ ವೀರಶೈವ,ಲಿಂಗಾಯತ ಮಹಾಸಭಾ

ನಿರ್ದೇಶಕರು, ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ತುಮಕೂರು

ಪೂಜ್ಯರು ಮಠದ ಆರ್ಥಿಕತೆಗಿಂತ ಅಡುಗೆ ಉಗ್ರಾಣದಲ್ಲಿರುವ ಅಕ್ಕಿಬೇಳೆಗಳ ಕಡೆಗೆ ಸದಾ ಗಮನ. ಏಕೆಂದರೆ, ಹಸಿದ ಹೊಟ್ಟೆಗೆ ಶಿವ ಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ನಾವು ಅವರ ದಾಸೋಹ ಪ್ರಜ್ಞೆಯನ್ನು ಅನುಸರಿಸಬೇಕು. ನಮ್ಮ ಜೀವನದಲ್ಲಿ ಹಸಿದ ಹೊಟ್ಟೆಗಳಿಗೆ ಉಣಬಡಿಸಿ ಪುಣ್ಯದ ಪಾಲು ಪಡೆಯಬೇಕು. 

ಭಾರತದ ಸನಾತನದ ಧರ್ಮದ ಇತಿಹಾಸದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಪ್ರತಿ ಸಂಕ್ರಮಣಗಳಲ್ಲಿಯೂ, ಪ್ರತಿ ಪ್ರಗತಿಯಲ್ಲಿಯೂ, ಪ್ರತಿ ಆದಿ ಅಂತ್ಯದಲ್ಲೂ ಗುರುವಿನ ಮಹತ್ವ ಬಹಳ ದೊಡ್ಡದು. ಅದಕ್ಕಾಗಿಯೇ ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ

ಚಕ್ಷುರುರ್ನೀಲಿತಂ ಏನತಸ್ಮೈ ಶ್ರೀಗುರವೇ ನಮಃl ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು ಎನ್ನುವ ಅರ್ಥಬರುವ ಆ ಶ್ಲೋಕವೇ ಸಾಕು ಗುರುವಿನ ಬಗ್ಗೆ ಇರುವ ನಮ್ಮ ಅರಿವನ್ನು ವಿಸ್ತಾರಗೊಳಿಸಿಕೊಳ್ಳಲು. ಜ್ಞಾನ, ಪರಂಪರೆ, ಸಂಸ್ಕೃತಿ ಹಾಗೂ ವಿದ್ವತ್‌ಅನ್ನು ಶತಮಾನಗಳಿಂದ ಶತಮಾನಗಳಿಗೆ ಶಿಷ್ಯನ ಮೂಲಕ ದಾಟಿಸುವ ಪವಿತ್ರ ಕರ್ತವ್ಯ ಗುರುವಿನದ್ದಾಗಿರುತ್ತದೆ.

ಇಂತಹ ಗುರುವಿನ ರೂಪದಲ್ಲಿ ನಮ್ಮೊಡನಿದ್ದವರು ಮನುಕುಲವನ್ನು ತ್ರಿವಿಧ ದಾಸೋಹದ ಮೂಲಕ ಬೆಳಗಿದ ಕಲ್ಪತರು ನಾಡಿನ ಕಾಮಧೇನು, ಜ್ಞಾನದೀಪವಾಗಿ ಕರ್ನಾಟಕ ರತ್ನವಾಗಿ ಬೆಳಗಿದ ಮಹಾ ಶಕ್ತಿ, ಪದ್ಮಭೂಷಣ, ಹೆಜ್ಜೆಯಿಟ್ಟ ಪ್ರತಿ ಜಾಗವನ್ನೂ ಪಾವನ ಮಾಡಿದ ಪುಣ್ಯಮೂರ್ತಿ, ನಡೆದಾಡಿದ ದೇವರು ಡಾ। ಶ್ರೀ.ಶ್ರೀ.ಶಿವಕುಮಾರ ಮಹಾಶಿವಯೋಗಿಗಳು. ಅವರ ಜನ್ಮೋತ್ಸವಕ್ಕೆ 118 ವರ್ಷಗಳು ಸಂದ ಕಾರಣಕ್ಕಾಗಿ ನಾವು ಅವರ ದಾರಿಗಳನ್ನು ಮೆಲುಕುಹಾಕಿ ಗುರುವಿನ ತೇಜಸ್ಸನ್ನು ನಮ್ಮ ಬದುಕಿಗೆ ಮತ್ತಷ್ಟು ಅರ್ಪಿಸಿಕೊಳ್ಳಬೇಕಿದೆ.

ಪೂಜ್ಯರ ಜೀವನ ಸಂದೇಶಗಳನ್ನು ನಾವು ಅನುಸರಿಸಿ ಸದ್ಗತಿಯಡೆಗೆ ಸತ್ಯಜೀವನಕ್ಕೆ ಅಡಿಯಿಡಬೇಕಿದೆ. ಅವರ ಜೀವನ ತತ್ವಗಳಲ್ಲಿ ನಾನು ಕಂಡಷ್ಟು ಹೇಳುವ ಪ್ರಯತ್ನ ಮಾಡುತ್ತೇನೆ. ಪೂಜ್ಯರ ಜೀವನ ಸಂದೇಶಗಳಲ್ಲಿ ಪ್ರಮುಖವಾದದ್ದು ದಾಸೋಹ, ಅವರು ಜೀವನವಿಡೀ ದಾಸೋಹ ಪ್ರಜ್ಞೆಯ ಪ್ರತೀಕವಾಗಿದ್ದರು. ರೈತ ಬೆಳೆದ ಅಕ್ಕಿಕಾಳನ್ನು ಭಿಕ್ಷೆಯ ಮೂಲಕ ಸ್ವೀಕರಿಸಿ, ಅದಕ್ಕೆ ಶಿವಭಕ್ತಿಯನ್ನು ಬೆರೆಸಿ ಪ್ರಸಾದವನ್ನಾಗಿಸಿ ಹಸಿದ ಹೊಟ್ಟೆಗಳಿಗೆ ಪ್ರೀತಿಯಿಂದ ಉಣಬಡಿಸುವುದು ಅವರ ತತ್ವವಾಗಿತ್ತು.

ಬೆಳೆದ ಕೈಗಳಿಂದ ಹಸಿದ ಹೊಟ್ಟೆಗೆ ಉಣಬಡಿಸುವ ಸೇತುವೆಯಾಗಿ ಸದಾ ದಾಸೋಹ ಶಕ್ತಿಯಿಂದ ಪ್ರಜ್ವಲಿಸಿದರು. ಅತಿವೃಷ್ಟಿ ಅಥವಾ ಅನಾವೃಷ್ಟಿಗಳೇನೇ ಇರಲಿ ಸಿದ್ಧಗಂಗಾ ಮಠದ ದಾಸೋಹದ ಅಗ್ನಿ ಯಾವತ್ತೂ ಆರಲಿಲ್ಲ: ಆರುವುದೂ ಇಲ್ಲ. ಪೂಜ್ಯರು ಮಠದ ಆರ್ಥಿಕತೆಗಿಂತ ಅಡುಗೆ ಉಗ್ರಾಣದಲ್ಲಿರುವ ಅಕ್ಕಿಬೇಳೆಗಳ ಕಡೆಗೆ ಸದಾ ಗಮನ. ಏಕೆಂದರೆ, ಹಸಿದ ಹೊಟ್ಟೆಗೆ ಶಿವ ಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ನಾವು ಅವರ ದಾಸೋಹ ಪ್ರಜ್ಞೆಯನ್ನು ಅನುಸರಿಸಬೇಕು. ನಮ್ಮ ಜೀವನದಲ್ಲಿ ಹಸಿದ ಹೊಟ್ಟೆಗಳಿಗೆ ಉಣಬಡಿಸಿ ಪುಣ್ಯದ ಪಾಲು ಪಡೆಯಬೇಕು.

ಶ್ರದ್ಧೆ ಹಾಗೂ ಭಕ್ತಿ:ಜೀವನದ ಯಾವುದೇ ಹಂತದಲ್ಲಿಯೂ ಪೂಜ್ಯರು ತಮ್ಮ ಶ್ರದ್ಧೆಯನ್ನು ಬಿಟ್ಟವರಲ್ಲ. ಯಾವುದೇ ಕೆಲಸವಿರಲಿ ಅದು ಮಠದ ಮುಂದಿನ ಕಸವಾಗಿರಲಿ, ದೇವರ ಮುಡಿಗೇರುವ ಹೂವಾಗಿರಲಿ ಎಂತಹ ಕೆಲಸಗಳನ್ನು ಅತೀವ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಸ್ವಚ್ಛ ದೇಹ ಶುದ್ಧ ಮನಸಿನ ರೂಪಕವಾಗಿರುತ್ತದೆ ಎಂದು ನಂಬಿದವರು. ಪೂಜಾನುಷ್ಠಾನಗಳಲ್ಲಿ, ಪ್ರಯಾಣ, ಆಹಾರ, ಆಶೀರ್ವಾದಗಳಲ್ಲಿ ಪೂಜ್ಯರ ಶ್ರದ್ಧೆಯೊಂದೇ ನಮಗೆ ಸದಾ ನೆನಪಾಗುತ್ತದೆ. ಒಂದು ಸಣ್ಣ ಕೆಲಸವನ್ನೂ ಕೂಡ ಬಿಡದಂತೆ ಪರಿಪೂರ್ಣಗೊಳಿಸುವ ಅವರ ಶ್ರದ್ಧೆಯ ಕಾರಣಕ್ಕಾಗಿಯೇ ಸಿದ್ಧಗಂಗಾ ಮಠ ಸಹಸ್ತ್ರ ಸಹಸ್ತ್ರ ಭಕ್ತರ ಬೀಡಾಗಿದ್ದು, ಅನಾಥ ಮಕ್ಕಳಿಗೆ ಅಕ್ಷರ ದಾಸೋಹದ ಗೂಡಾಗಿದ್ದು.

ಭಕ್ತಿಯೇ ಶ್ರದ್ಧೆಯ ಮೂಲ ಎಂಬುದು ಚಿಂತನೆ. ತಾವು ಎಲ್ಲೇ ಇರಲಿ ಯಾವುದೇ ಸನ್ನಿವೇಶದಲ್ಲಿರಲಿ ಅವರ ಪೂಜಾನುಷ್ಠಾನ ಕ್ಷಣವೂ ವ್ಯತ್ಯಾಸವಾಗುತ್ತಿರಲಿಲ್ಲ. ಶಿವಪೂಜೆಯ ಹೊರತು ಪಡಿಸಿ ಅವರಿಗೆ ಇನ್ಯಾವುದೇ ಜೀವನದ್ರವ್ಯವಿರಲಿಲ್ಲ. ಶಿವನ ಮುಂದೆ ತ್ರಿಕಾಲದಲ್ಲಿಯೂ ಸ್ಥಾಪಿತವಾಗುವ ನಂದಿಯಷ್ಟೇ ನಿಷ್ಠೆ ಪೂಜ್ಯರ ಪೂಜಾಚರಣೆಯಾಗಿತ್ತು. ಅವರು ಲಿಂಗೈಕ್ಯರಾಗುವ ಕೊನೆಯ ದಿನಗಳಲ್ಲಿ ಐಸಿಯುವಿನಲ್ಲೂ ಚಿಕಿತ್ಸೆ ಪಡೆಯುತ್ತಿದ್ದರೂ ಅವರು ಶಿವಪೂಜೆಯಲ್ಲಿ ತೊಡಗಿದ್ದರು. 

ಶಿಸ್ತು 

ಯಾವುದೇ ಕೆಲಸವಾಗಿದ್ದರೂ ಅದರಲ್ಲಿ ಪೂಜ್ಯರದು ಒಂದು ಶಿಸ್ತು ಇತ್ತು. ಬೆಳಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ನಿದ್ರೆಗೆ ಜಾರುವ ಸಮಯದ ವರೆಗೂ ಅವರ ಶಿಸ್ತು ಗಡಿಯಾರದಷ್ಟೇ ನಿಖರವಾಗಿತ್ತು. ಈ ಸಮಯಕ್ಕೆ ಹೊರಡಬೇಕು ಎಂದರೆ ಅದೇ ಸಮಯಕ್ಕೆ ಎಲ್ಲವೂ ಸಿದ್ಧವಿರಬೇಕಿತ್ತು. ಇಷ್ಟೇ ಸಮಯಕ್ಕೆ ಬರಬೇಕು ಎಂದರೆ ಬಂದಿರಬೇಕಿತ್ತು. ಅವರ ಶಿಸ್ತಿನ ಒಂದು ಪಾಲು ಕಲಿತರೂ ನಾವು ಸಾವಿರ ವರ್ಷಗಳಿಗೂ ಮಿಗುವ ಯಶಸ್ಸನ್ನು ಈ ಜನ್ಮದಲ್ಲೇ ಪಡೆಯುತ್ತೇವೆ ಎಂದರೆ ಅತಿಶಯೋಕ್ತಿಯಲ್ಲ. 

ಕಾಯಕದಿಂದಲೇ ಕಾಯಕ್ಕೆ ಅರ್ಥ:

ಕಾಯಕದ ಹೊರತು ಬೇರೆ ಯಾವ ಫಲವನ್ನೂ ಬಯಸಬಾರದು ಎಂದು ಪೂಜ್ಯರ ತತ್ವಗಳಲ್ಲಿ ಪ್ರಮುಖವಾದದ್ದು, ಒಂದಗಳು ಅನ್ನವನ್ನು ತಿನ್ನುವಾಗಲು ಅದಕ್ಕೆ ನಮ್ಮ ನ್ಯಾಯಯುತ ಕಾಯದ ಬೆವರು ಹರಿಸಲೇಬೇಕು ಎನ್ನುವುದು ಪೂಜ್ಯರ ಸಂದೇಶವಾಗಿತ್ತು. ಕಾಯಕವೇ ಕಾಯವನ್ನು ಕರ್ತನಾದ ಶಿವನ ಪಾದಕ್ಕೆ ಅರ್ಪಿಸುವ ದಾರಿ. ಅದಕ್ಕಾಗಿ ನಾವು ಜೀವನದಲ್ಲಿ ಏನನ್ನೇ ಬಯಸಿದರೂ ಕೂಡ ಅದು ನಮ್ಮ ಕಾಯಕದ ಪ್ರತಿಫಲವಾಗಿರಬೇಕೇ ವಿನಃ ಅಗ್ಗದಲ್ಲಿ ದೊರೆಯುವಂತಾಗಬಾರದು ಎನ್ನುವುದು ಪೂಜ್ಯರ ಜೀವನವಿದಾನ. ಪ್ರತಿನಿತ್ಯ ಬೆಳಗ್ಗೆ ಪೂಜಾನುಷ್ಠಾನ ಮುಗಿದ ನಂತರ ಮಠದ ಅವರ ಕೊಠಡಿಗೆ ಬಂದು ಲೆಕ್ಕಪತ್ರಗಳನ್ನು ನೋಡುತ್ತಿದ್ದರು, ಗೋಶಾಲೆ, ಉಗ್ರಾಣದಲ್ಲಿ, ಅಡುಗೆಮನೆಯಲ್ಲಿ ತೋಟಗಳಲ್ಲಿ ಶ್ರೀಗಳು ಟೊಂಕಕಟ್ಟಿ ದುಡಿದೇ ಅವರು ಕಾಯಕ ಸಂದೇಶ ನೀಡಿದರು. ಮಕ್ಕಳಿಗೆ ವಿದ್ಯಾಭ್ಯಾಸ ಅವರ ನಡೆವ ದಾರಿಯಾಗಿದ್ದರೆ, ಗೋವುಗಳ ಪಾಲನೆ ಅವರ ನಿತ್ಯಕಾರ್ಯಗಳಲ್ಲಿ ಒಂದಾಗಿತ್ತು, ಭಕ್ತರಿಗೆ ನೀಡುವ ಮಾರ್ಗದರ್ಶನ ಅವರ ದಿನಚರಿಯಾಗಿದ್ದರೆ, ಶಿವಪೂಜೆ ಅವರ ಜೀವಶಕ್ತಿಯ ಕೇಂದ್ರವಾಗಿತ್ತು. ಅವರ ಕಾಲದಲ್ಲಿ ಜೀವಿಸಿದ್ದು, ಅವರ ಪಾದಸೇವೆ ಮಾಡಿದ್ದು, ಅವರ ಅಪ್ಯಾಯಮಾನವಾದ ಶಿಷ್ಯಪ್ರೇಮವನ್ನು ಅನುಭವಿಸಿದ್ದು ನಮ್ಮ ಪೂರ್ವಜನ್ಮದ ಪುಣ್ಯ, ನಡೆದಾಡಿದ ದೇವರು ಲಿಂಗೈಕ್ಯರಾಗಿ ನಮ್ಮೊಳಗೆ ಉದಯಿಸಿ ದಾಸೋಹ, ಶ್ರದ್ಧೆ, ಭಕ್ತಿ, ಶಿಸ್ತನ್ನು ನಮ್ಮೊಳಗೂ ಮೂಡಿಸಿ ಸದಾ ಜೀವಜ್ಯೋತಿಯಾಗಿದ್ದಾರೆ. ಅವರ ಜನ್ಮದಿನವಾದ ಇಂದು ಅವರ ತತ್ವಗಳ ದಾರಿಯಲ್ಲಿ ನಡೆದು ಬದುಕಿನಲ್ಲಿ ಯಶಸ್ಸನ್ನು ಪಡೆದುಕೊಳ್ಳೋಣ.