ಚಿತ್ರಕಲೆಯೋ, ದೃಶ್ಯ ಕಲೆಯೋ, ಯಾವ ಕಲೆ? ! - ಲಲಿತಕಲಾ ಅಕಾಡೆಮಿ ಹೆಸರು ಬದಲಾವಣೆ ಚರ್ಚೆ

| N/A | Published : May 26 2025, 11:15 AM IST

kandidud

ಸಾರಾಂಶ

 

- ಲಲಿತಕಲಾ ಅಕಾಡೆಮಿ ಹೆಸರು ಬದಲಾವಣೆ ಚರ್ಚೆ । ಹಲವು ಹೆಸರು ಪ್ರಸ್ತಾಪ । ನೀವೇ ನಿರ್ಧರಿಸಿ ಎಂದು ಜಾರಿಕೊಂಡ ತಂಗಡಗಿ

ಲಲಿತಕಲಾ ಅಕಾಡೆಮಿ ಹೆಸರು ಬದಲಿಸುವ ಬಗ್ಗೆ ಬಹಿರಂಗವಾಗಿ ಅಭಿಪ್ರಾಯಗಳು ವ್ಯಕ್ತಪಡಿಸಲಾಯಿತು. ಕಲಾವಿದರು, ಸಾಹಿತಿಗಳು ತೋಚಿದ ಹೆಸರುಗಳು ಹೇಳುತ್ತಿದ್ದ ಹಿನ್ನೆಲೆಯಲ್ಲಿ ಬ್ರೇಕ್‌ ಹಾಕಿದ ಸಚಿವ ಶಿವರಾಜ್‌ ತಂಗಡಗಿ, ‘ಅಕಾಡೆಮಿಯ ಹೆಸರು ಬದಲಾವಣೆಗೆ ನನ್ನ ಅಭ್ಯಂತರವಿಲ್ಲ. ಆದರೆ ಚಿತ್ರಕಲೆಯೋ, ದೃಶ್ಯಕಲೆಯೋ, ಯಾವ ಕಲೆ ಎಂಬುದನ್ನು ನಿರ್ಧರಿಸಿ. ಇಲ್ಲದಿದ್ದರೆ ಮುಂದೆ ಇನ್ನಿಲ್ಲದ ವಿವಾದಕ್ಕೆ ಕಾರಣವಾಗುತ್ತದೆ’ ಎಂದು ವೇದಿಕೆಯಲ್ಲೇ ನಗುತ್ತಾ ಹೇಳಿ ವಿವಾದಕ್ಕೆ ಸಿಲುಕದೆ ಜಾರಿಕೊಂಡರು.

ಚಿತ್ರಕಲೆಯೋ, ದೃಶ್ಯ ಕಲೆಯೋ, ಯಾವ ಕಲೆ?!

ಹತ್ತಾರು ವರ್ಷಗಳಿಂದ ಇದ್ದ ಹೆಸರು ಬದಲಾಯಿಸುವುದು ಸಾಮಾನ್ಯದ ಮಾತಲ್ಲ. ಜಿಲ್ಲೆ ಇರಬಹುದು ಅಥವಾ ಹೊಸ ನಾಮಕರಣ ಮಾಡುವುದಾಗಿರಬಹುದು, ಟೀಕೆ-ಟಿಪ್ಪಣಿ, ಪರ-ವಿರೋಧ ಅಭಿಪ್ರಾಯಗಳು ಸರ್ವೆ ಸಾಮಾನ್ಯ. ಇತ್ತೀಚೆಗೆ ಲಲಿತಕಲಾ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಕಾರ್ಯಕ್ರಮದಲ್ಲೂ ಇದೇ ಆಗಿದ್ದು.

ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿ ಹೆಸರು ಬದಲಿಸುವ ಬಗ್ಗೆ ಬಹಿರಂಗವಾಗಿ ಅಭಿಪ್ರಾಯಗಳು ವ್ಯಕ್ತಪಡಿಸಲಾಯಿತು. ಕಲಾವಿದರು, ಸಾಹಿತಿಗಳು ತೋಚಿದ ಹೆಸರುಗಳು ಹೇಳುತ್ತಿದ್ದ ಹಿನ್ನೆಲೆಯಲ್ಲಿ ಬ್ರೇಕ್‌ ಹಾಕಿದ ಸಚಿವ ಶಿವರಾಜ್‌ ತಂಗಡಗಿ, ‘ಅಕಾಡೆಮಿಯ ಹೆಸರು ಬದಲಾವಣೆಗೆ ನನ್ನ ಅಭ್ಯಂತರವಿಲ್ಲ. ಆದರೆ ಚಿತ್ರಕಲೆಯೋ, ದೃಶ್ಯಕಲೆಯೋ, ಯಾವ ಕಲೆ ಎಂಬುದನ್ನು ನಿರ್ಧರಿಸಿ. ಇಲ್ಲದಿದ್ದರೆ ಮುಂದೆ ಇನ್ನಿಲ್ಲದ ವಿವಾದಕ್ಕೆ ಕಾರಣವಾಗುತ್ತದೆ’ ಎಂದು ವೇದಿಕೆಯಲ್ಲೇ ನಗುತ್ತಾ ಹೇಳಿ ವಿವಾದಕ್ಕೆ ಸಿಲುಕದೆ ಜಾರಿಕೊಂಡರು.

ಆಗಿದ್ದೇನೆಂದರೆ ಮೊದಲಿಗೆ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು, ವಿವಿದ ಕಲಾ ಪ್ರಕಾರಗಳಿಗೆ ಪ್ರತ್ಯೇಕ ಅಕಾಡೆಮಿಗಳು ಇವೆ. ಹೀಗಾಗಿ ಲಲಿತಕಲಾ ಅಕಾಡೆಮಿ ಹೆಸರು ಚಿತ್ರಕಲಾ ಅಕಾಡೆಮಿ ಎಂದು ಬದಲಿಸಬೇಕೆಂದರು.

ತಕ್ಷಣ ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತ ಹಿರಿಯ ಕಲಾವಿದರೊಬ್ಬರು, ‘ಚಿತ್ರಕಲಾ ಅಕಾಡೆಮಿಯಲ್ಲ ದೃಶ್ಯಕಲಾ ಅಕಾಡೆಮಿ ಎಂದಾಗಬೇಕು’ ಎಂದು ಕೂಗಿದರು. ಬೇರೊಬ್ಬರು ಮತ್ತೊಂದು ಹೆಸರು ಹೇಳಲು ಮುಂದಾದರು. ಅದಕ್ಕೆ ಬ್ರೇಕ್‌ ಹಾಕಿದ ಬರಗೂರು, ‘ದೃಶ್ಯಕಲೆ ಎಂದರೆ ಸಿನಿಮಾವೂ ಬರುತ್ತದೆ. ಎಲ್ಲರೂ ಚರ್ಚಿಸಿ ನಿರ್ಧರಿಸಿ ಸರ್ಕಾರಕ್ಕೆ ತಿಳಿಸಿ’ ಎಂದರು.

ವೇದಿಕೆಯಲ್ಲಿದ್ದ ಸಚಿವ ಶಿವರಾಜ ತಂಗಡಗಿ ಅವರು ತಮ್ಮ ಸರದಿ ಬಂದಾಗ, ಹೆಸರು ಬದಲಾವಣೆಗೆ ನನ್ನ ಅಭ್ಯಂತವಿಲ್ಲ. ಆದರೆ ಯಾವ ಹೆಸರು ಎಂದು ಪ್ರಸ್ತಾವನೆ ಸಲ್ಲಿಸಿದರೆ ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಚರ್ಚೆಗೆ ತೆರೆ ಎಳೆದರು.

ಒಂದು ‘ಬೈಟ್‌’ ಕೊಡಿ ಸಾರ್‌....

ಸಾಮಾಜಿಕ ಮಾಧ್ಯಮಗಳಲ್ಲಿ ನ್ಯೂಸ್ ಚಾನಲ್‌ಗಳು ಎಷ್ಟಿವೆಯೋ ಗೊತ್ತಿಲ್ಲ. ಕೆಲ ಚಾನಲ್‌ಗಳು ವಿಧಾನಸಭಾ ಕ್ಷೇತ್ರವಾರು, ವಿಷಯವಾರು ಕೆಲಸ ಮಾಡುತ್ತಿವೆ. ಇನ್ನೂ ಕೆಲ ಚಾನಲ್‌ಗಳು ಮಾತ್ರ ರಾಜಕಾರಣಿಗಳು, ವಿಧಾನಸೌಧ, ಆಯಕಟ್ಟಿನ ಕಚೇರಿಗಳ ಸುತ್ತ ಓಡಾಡುತ್ತಾ ಸುದ್ದಿ ಮಾಡುತ್ತಿವೆ. ವಿಐಪಿಗಳ ಕಾರ್ಯಕ್ರಮ, ರಾಜಕಾರಣಿಗಳು, ಮಂತ್ರಿಗಳ ಬೈಟ್‌ ಸಿಕ್ಕರೆ ಸಾಕು. ಅವತ್ತಿನ ಕೆಲಸ ಮುಗಿಯಿತು. ಇವರ ಹಾವಳಿ ಕೆಲ ಸಾರಿ ಕಿರಿ ಕಿರಿ ಮಾಡುವುದಂತೂ ನಿಜ. ಇಂತಹ ಕಿರಿಕಿರಿಗೆ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಇತ್ತೀಚೆಗೆ ಒಳಗಾಗಬೇಕಾಯಿತು.

ಇತ್ತೀಚೆಗೆ ವಿಧಾನಸೌಧದಲ್ಲಿ ಒಳಮೀಸಲಾತಿ ಕುರಿತು ನಡೆಯುತ್ತಿರುವ ಸಮೀಕ್ಷೆಯ ಪ್ರಗತಿ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಸುದೀರ್ಘವಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ನಂತರ ಹೊರಡಲು ಸಿದ್ಧರಾಗುತ್ತಿದ್ದಂತೆ ರಾಜ್ಯ ಹಾಗೂ ರಾಷ್ಟ್ರೀಯ ಚಾನಲ್‌ಗಳು ಪ್ರತ್ಯೇಕವಾಗಿ ‘ಬೈಟ್‌’ ತೆಗೆದುಕೊಳ್ಳಲು ಆರಂಭಿಸಿದರು.

ಎರಡ್ಮೂರು ಚಾನಲ್‌ಗಳ ಜೊತೆ ಮಾತನಾಡಿ ಹೊರಡುತ್ತಿದ್ದಂತೆ ಯುವಕನೊಬ್ಬ ಬಂದು ‘ನನಗೂ ಒಂದು ಬೈಟ್‌ ಕೊಡಿ ಸಾರ್‌... ಎಂದು ಕೈಯಲ್ಲಿ ‘ಮೊಬೈಲ್‌ ಪೋನ್‌’ ಹಿಡಿದುಕೊಂಡು ಶೂಟ್‌ ಮಾಡಿಕೊಳ್ಳಲು ಮುಂದಾದ. ಅಷ್ಟರಲ್ಲಿ ಸಾಕಷ್ಟು ದಣಿದಿದ್ದ ನ್ಯಾಯಮೂರ್ತಿಗಳು, ಆಯ್ಯೋ ಬೇಕಾದಷ್ಟು ಮಾತನಾಡಿದ್ದೇನೆ. ಎಷ್ಟು ಸಾರಿ ಹೇಳಬೇಕು. ಮತ್ತೇನು ಹೊಸದಾಗಿ ಹೇಳುವಂತದ್ದು ಏನೂ ಇಲ್ಲ ಎಂದು ಒಂದೆರಡು ಹೆಜ್ಜೆ ಮುಂದೆ ಬಂದರು. ಆದರೂ ಆ ಯುವಕ ಗೋಗೆರೆಯುತ್ತಾ, ಸಾರ್‌..ಚಿಕ್ಕಬೈಟ್‌ ಸಾರ್‌. ಪ್ಲೀಸ್‌ ಸಾರ್‌ ಎನ್ನತೊಡಗಿದರು.

ಅಷ್ಟರಲ್ಲೇ ರಾಷ್ಟ್ರೀಯಮಟ್ಟದ ಇಂಗ್ಲಿಷ್‌ ಚಾನಲ್‌ ವರದಿಗಾರ ಬೈಟ್ ಕೇಳಿದಾಗ. ನ್ಯಾಯಮೂರ್ತಿಗಳು ವಿಧಿಯಿಲ್ಲದೆ ‘ಬೈಟ್‌’ ಕೊಡಲು ಆರಂಭಿಸಿದರು.

ಇಂಗ್ಲಿಷ್‌ ಚಾನಲ್‌ ‘ಬೈಟ್‌’ ಮುಗಿದ ನಂತರ ಮತ್ತೆ ನ್ಯಾಯಮೂರ್ತಿಗಳ ಬಳಿ ಬಂದ ಆ ಯುವಕನ ‘ಬೈಟ್‌’ ಕೋರತೊಡಗಿದೆ. ಆದರೆ ನ್ಯಾಯಮೂರ್ತಿಗಳು ಸಾಕು, ಸಾಕು ಎಂದು ನಡೆದೇ ಬಿಟ್ಟರು.

ಸರಳತೆಯ ಪ್ರತೀಕ ಬೌದ್ಧ ಭಿಕ್ಕುಗಳಿಂದ ಹಾರ ತಿರಸ್ಕಾರ!

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವಾಗ ಅವರ ಹಿನ್ನೆಲೆ, ಆಚಾರ-ವಿಚಾರಗಳ ಕುರಿತು ಸಂಪೂರ್ಣವಾಗಿ ಅಲ್ಲದಿದ್ದರೂ ಕಾರ್ಯಕ್ರಮಕ್ಕೆ ಅಗತ್ಯವಿರುವಷ್ಟಾದರೂ ಆಯೋಜಕರು ತಿಳಿದುಕೊಳ್ಳುತ್ತಾರೆ. ಇಂತಹದ್ದರ ಬಗ್ಗೆ ತಿಳಿದುಕೊಳ್ಳದೆ ಹೋದಾಗ ವೇದಿಕೆ ಮೇಲೆ ಎಲ್ಲರೆದುರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮುಜುಗರದ ಪ್ರಸಂಗವೊಂದು ನಡೆಯಿತು.

ಅಲ್ಲಿ ಆಗಿದ್ದಿಷ್ಟು. ಕಾರ್ಯಕ್ರಮದಲ್ಲಿ ಗಣ್ಯರ ಜೊತೆಗೆ ಇಬ್ಬರು ಬೌದ್ಧ ಭಿಕ್ಕುಗಳಿಗೆ ವೇದಿಕೆ ಮೇಲೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಆರಂಭಕ್ಕೆ ಮೊದಲು ಅವರಿಂದಲೇ ಪ್ರಾರ್ಥನೆ ವಾಚನ ಮಾಡಿಸಲಾಯಿತು. ಮತ್ತೊಂದು ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಕಾರಣ ಮುಖ್ಯ ಅತಿಥಿಯಾಗಿದ್ದ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೇಗ ಭಾಷಣ ಮುಗಿಸಿದರು. ಕೂಡಲೇ ಮುನಿಯಪ್ಪ ಅವರಿಗೆ ಸನ್ಮಾನಿಸಿದ ಕಾರ್ಯಕ್ರಮ ಆಯೋಜಕರು, ಅದೇ ವೇಗದಲ್ಲಿ ಬೌದ್ಧ ಭಿಕ್ಕುಗಳಿಗೂ ಸನ್ಮಾನಿಸಲು ಮುಂದಾದರು.

ಮೊದಲು ಕಿರಿಯ ವಯಸ್ಸಿನ ಭಿಕ್ಕುಗೆ ಹಾರ ತೊಡಿಸಿ ಶಾಲು ಹಾಕಲು ಮುಂದಾದರು. ಆದರೆ, ಅದನ್ನು ಅವರು ನಯವಾಗಿ ತಿರಸ್ಕರಿಸಿದರು. ಆದರೆ, ಪಕ್ಕದಲ್ಲೇ ಇದ್ದ ಮತ್ತೊಬ್ಬ ಭಿಕ್ಕುವಿಗೆ ಹಾರ ಹಾಕಲು ಹೋದಾಗ, ಅವರು ಕೂಡ ತಿರಸ್ಕರಿಸಿದರು.

ಸರಳತೆಯ ಜೀವನ ನಡೆಸುವ ಬೌದ್ಧ ಭಿಕ್ಕುಗಳು ಸಾಮಾನ್ಯವಾಗಿ ಹಾರ-ತುರಾಯಿ, ಶಾಲುಗಳನ್ನು ಹಾಕಿಕೊಳ್ಳುವುದಿಲ್ಲ. ಈ ವಿಚಾರವನ್ನು ಆಯೋಜಕರು ಅರಿಯಬೇಕಿತ್ತು ಎಂದು ಸಭಿಕರು ಮಾತನಾಡಿಕೊಂಡಿದ್ದು ಮಾತ್ರ ನಿಜ.

-ಸಂಪತ್‌ ತರೀಕೆರೆ

-ಚಂದ್ರಮೌಳಿ ಎಂ.ಆರ್‌.

-ಮಂಜುನಾಥ್‌ ನಾಗಲೀಕರ್‌

Read more Articles on