ಭಾರತೀಯ ತಂತ್ರಜ್ಞಾನ ಸಂಸ್ಥೆ ರೀತಿ ಲಾ ಸ್ಕೂಲ್‌ ಅಗತ್ಯವಿದೆ : ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

| N/A | Published : Mar 14 2025, 01:34 AM IST / Updated: Mar 14 2025, 07:31 AM IST

ಭಾರತೀಯ ತಂತ್ರಜ್ಞಾನ ಸಂಸ್ಥೆ ರೀತಿ ಲಾ ಸ್ಕೂಲ್‌ ಅಗತ್ಯವಿದೆ : ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಮಾದರಿಯಲ್ಲೇ ರಾಜ್ಯದಲ್ಲೂ ನ್ಯಾಷನಲ್‌ ಲಾ ಸ್ಕೂಲ್‌ ಸ್ಥಾಪನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಒತ್ತಾಯಿಸಿದರು.

 ಬೆಂಗಳೂರು : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಮಾದರಿಯಲ್ಲೇ ರಾಜ್ಯದಲ್ಲೂ ನ್ಯಾಷನಲ್‌ ಲಾ ಸ್ಕೂಲ್‌ ಸ್ಥಾಪನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಒತ್ತಾಯಿಸಿದರು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಹಕಾರ ಭೀಷ್ಮ ಕೆ.ಎಚ್‌.ಪಾಟೀಲ ಅಭಿಮಾನಿ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ಭೀಷ್ಮ ಕೆ.ಎಚ್‌.ಪಾಟೀಲ ಮೆಮೋರಿಯಲ್‌ ಟ್ರಸ್ಟ್‌ ಆಯೋಜಿಸಿದ್ದ ಕೆ.ಎಚ್‌.ಪಾಟೀಲ ಜನ್ಮಶತಮಾನೋತ್ಸವ ಆಚರಣೆ ಮತ್ತು ಕೆ.ಎಚ್‌.ಪಾಟೀಲ ಸ್ಕೂಲ್ ಆಫ್‌ ಲಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮೊದಲ ನ್ಯಾಷನಲ್‌ ಕಾನೂನು ಕಾಲೇಜು ಆರಂಭಿಸಲು 50 ಎಕರೆ ಜಮೀನು ಮತ್ತು ₹2 ಕೋಟಿ ಕೊಟ್ಟಿದ್ದೆ. ವಿಧಾನಸಭೆಯಲ್ಲಿ ಅದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇಂದು ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸೀಟ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಕೇವಲ 3,725 ಮಂದಿಗೆ ಮಾತ್ರ ಸೀಟು ಲಭ್ಯವಾಗುತ್ತಿದೆ. ಗುಣಮಟ್ಟದ ವಕೀಲರನ್ನು ತಯಾರು ಮಾಡಲು ಇದರಿಂದ ಸಾಧ್ಯವಾಗುತ್ತಿದೆ ಎಂದರು.

ದೇಶದ ಕೆಲವು ರಾಜ್ಯಗಳಲ್ಲಿ ಎರಡೆರಡು ನ್ಯಾಷನಲ್‌ ಲಾ ಸ್ಕೂಲ್‌ಗಳು ಇವೆ. ನಮ್ಮ ರಾಜ್ಯದಲ್ಲಿ ಒಂದೇ ಒಂದು ನ್ಯಾಷನಲ್‌ ಲಾ ಸ್ಕೂಲ್‌ ಇದ್ದು, ಮಂಗಳೂರಿನಲ್ಲೂ ನ್ಯಾಷನಲ್‌ ಲಾ ಸ್ಕೂಲ್‌ ಪ್ರಾರಂಭಿಸಬೇಕೆಂದು ಈಗಾಗಲೇ ಸಿಎಂ ಮತ್ತು ವಿಧಾನಸಭೆ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.

ಲಿಂಗ ಸಮಾನತೆ ನಮ್ಮಲ್ಲಿ ಇಲ್ಲ. ಮಹಿಳಾ ನ್ಯಾಯಾಧೀಶರ ಸಂಖ್ಯೆ ಕೇವಲ ಶೇ.14ರಷ್ಟು ಮಾತ್ರ ಇದೆ. ಹೈಕೋರ್ಟ್‌ಗೆ 6 ಜನರ ಆಯ್ಕೆ ಪಟ್ಟಿ ಕಳುಹಿಸಿದರೆ ಒಬ್ಬರು ಮಾತ್ರ ಆಯ್ಕೆಯಾದರು. ನ್ಯಾಯಧೀಶರ ನೇಮಕಾತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಕೊಡಬೇಕು. ಆಗ ಲಿಂಗ ಸಮಾನತೆ ಸಿಗಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿ ಆಗಬೇಕು ಆಗ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಎಚ್‌.ಪಾಟೀಲ ಸ್ಕೂಲ್‌ ಆಫ್‌ ಲಾ ಮತ್ತು ಕಾಲೇಜಿನ ಲಾಂಛನವನ್ನು ಸುಪ್ರೀಂ ಕೋರ್ಟ್‌ ವಿಶ್ರಾಂತ ಮುಖ್ಯ ನ್ಯಾ.ಎಂ.ಎನ್‌.ವೆಂಕಟಾಚಲಯ್ಯ ಉದ್ಘಾಟಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಕೆ.ಜೆ.ಜಾರ್ಜ್‌, ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ, ಎನ್‌.ಎಸ್‌.ಬೋಸರಾಜ್‌, ಕೃಷ್ಣಬೈರೇಗೌಡ, ಎಚ್‌.ಕೆ.ಪಾಟೀಲ, ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಇದ್ದರು.