ಸಾರಾಂಶ
ಸಾಮಾನ್ಯವಾಗಿ ಪ್ರೇಮಿಗಳಿಗೆ ‘ಜೋಡಿಜೀವ’ ಎನ್ನುವುದು ವಾಡಿಕೆ. ಆದರೆ ಗೆಳೆಯರಾಗಿ ನಮ್ಮದು ‘ಜೋಡಿಜೀವ’ವೆಂದು ಹೇಳಿಕೊಳ್ಳಲು ನನಗೆ ಕಿಂಚಿತ್ತೂ ಸಂಕೋಚವಿಲ್ಲ
- ಬಿ ಆರ್ ಲಕ್ಷ್ಮಣರಾವ್
ಸಾಮಾನ್ಯವಾಗಿ ಪ್ರೇಮಿಗಳಿಗೆ ‘ಜೋಡಿಜೀವ’ ಎನ್ನುವುದು ವಾಡಿಕೆ. ಆದರೆ ಗೆಳೆಯರಾಗಿ ನಮ್ಮದು ‘ಜೋಡಿಜೀವ’ವೆಂದು ಹೇಳಿಕೊಳ್ಳಲು ನನಗೆ ಕಿಂಚಿತ್ತೂ ಸಂಕೋಚವಿಲ್ಲ. ಒಟ್ಟಾಗಿಯೇ ನಾವು ಅದೆಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ; ನಮ್ಮ ಪುಸ್ತಕಗಳನ್ನು ಹಾಗೂ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದೇವೆ; ಪ್ರವಾಸಗಳಿಗೆ ( ಅಮೆರಿಕಕ್ಕೂ ಸಹ ) ಹೋಗಿಬಂದಿದ್ದೇವೆ; ಸುಖ ದುಃಖಗಳನ್ನು ಹಂಚಿಕೊಂಡಿದ್ದೇವೆ. ನೆನಪಿಸಿಕೊಂಡರೆ ಅಂಥ ಸಂಗತಿಗಳು ಹಲವಾರು. ಕೆಲವನ್ನಷ್ಟೇ ಇಲ್ಲಿ ಉದಾಹರಿಸುತ್ತೇನೆ:
ನಮ್ಮಿಬ್ಬರಿಗೂ ಅಪಾರ ಜನಪ್ರೀತಿಯನ್ನು ಗಳಿಸಿಕೊಟ್ಟ ‘ಸುಗಮ ಸಂಗೀತ’ ಕ್ಷೇತ್ರಕ್ಕೆ ನಾವು ಅಡಿಯಿಟ್ಟದ್ದು ಒಟ್ಟಿಗೆ. ೧೯೮೪ರಲ್ಲಿ ಮೂರ್ತಿಯ ‘ಮರೆತ ಸಾಲುಗಳು’ ಹಾಗೂ ನನ್ನ ‘ಪ್ರೇಮ ಸುಳಿವ ಜಾಡು’ ಎಂಬ ನಮ್ಮ ಚೊಚ್ಚಲ ಭಾವಗೀತೆಗಳ ಸಂಗ್ರಹಗಳು ಚಿಂತಾಮಣಿಯಲ್ಲಿ ಪುತಿನ ಮತ್ತು ರಾಮಚಂದ್ರಶರ್ಮರ ಸಮ್ಮುಖದಲ್ಲಿ ಬಿಡುಗಡೆಯಾದವು. 1985 ರಲ್ಲಿ ಸಿ.ಅಶ್ವತ್ಠ್ ಸ್ವರಸಂಯೋಜನೆಯಲ್ಲಿ ಹೊರಬಂದ ‘ಕೆಂಗುಲಾಬಿ’ ಎಂಬ ಭಾವಗೀತೆಗಳ ಧ್ವನಿಸುರುಳಿಯಲ್ಲಿ ನಮ್ಮಿಬ್ಬರ ರಚನೆಗಳು ಮೊದಲಬಾರಿಗೆ ಒಟ್ಟಾಗಿ ರಸಿಕರ ಮನಮುಟ್ಟಿದವು. ‘ಲಹರಿ’ ಸಂಸ್ಥೆ ನಮ್ಮಿಬ್ಬರ ತಲಾ ನೂರು ಭಾವಗೀತೆಗಳನ್ನು ಒಳಗೊಂಡ ನಾಲ್ಕು ಸಿ.ಡಿ.ಗಳ ‘ಸ್ನೇಹ’ ಎಂಬ ಆಲ್ಬಂ ಹೊರತಂದು, ನಮ್ಮ ಸುದೀರ್ಘ ಮೈತ್ರಿಗೊಂದು ಸಾರ್ಥಕ ಪ್ರತೀಕವನ್ನೊದಗಿಸಿದೆ.
ನಮ್ಮಿಬ್ಬರ ಮೊಟ್ಟಮೊದಲ ವಿಮಾನಯಾನವಾದದ್ದೂ ಸಹ ಒಟ್ಟಿಗೇನೇ. 1982 ರಲ್ಲಿ ಅಂತ ನೆನಪು. ಆಗ ನಾವು ಒಂದು ಸಾಹಿತ್ಯಕ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋಗಿದ್ದೆವು. ವಿಮಾನದ ಕಿಟಕಿಬದಿಯ ಸೀಟು ಹಿಡಿದು, ಬಾನೆತ್ತರದಿಂದ ಭೂಮಿಯ ಸೊಬಗನ್ನು ನಾವು ಸವಿಯತೊಡಗಿ ಇನ್ನೂ ಇಪ್ಪತ್ತು ನಿಮಿಷಗಳಾಗಿರಬಹುದು, ಅಷ್ಟರಲ್ಲೇ ಬೆಂಗಳೂರು ಬಂದೇಬಿಟ್ಟಿತೆಂದು ತಿಳಿದು ನಮಗೆ ನಿಜಕ್ಕೂ ನಿರಾಸೆಯಾಯಿತು. ವಿಮಾನ ನಿಲ್ದಾಣದಲ್ಲಿಳಿದು ಹೊರಬಂದ ಕೂಡಲೇ ಮೂರ್ತಿ ತನ್ನ ಬಲಗೈಯಿಂದ ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು, ‘ಸದ್ಯ, ಸುರಕ್ಷಿತವಾಗಿ ಮತ್ತೆ ಭೂಮಿಗೆ ಬಂದೆವಲ್ಲಪ್ಪ!’ ಎಂದದ್ದು ಇನ್ನೂ ನೆನಪಿದೆ.
ಎಚ್.ಎಸ್.ವೆಂಕಟೇಶಮೂರ್ತಿ ನನ್ನ ಪರಮಾಪ್ತ ಮಿತ್ರ. ಕಾವ್ಯವಷ್ಟೇ ಅಲ್ಲದೆ, ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ಅಂಕಣ, ಚಲನಚಿತ್ರ, ಭಾವಗೀತೆ, ಶಿಶುಗೀತೆ- ಹೀಗೆ ಸಾಹಿತ್ಯದ ಹಲವು ಪ್ರಕಾರಗಳಿಗೆ ಮೌಲಿಕ ಕೊಡುಗೆಗಳನ್ನು ನೀಡಿದ ಬಹುಮುಖ ಪ್ರತಿಭೆಯ ಲೇಖಕ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನನಾಗಿ, ಖ್ಯಾತಿ ಹಾಗೂ ಜನಪ್ರೀತಿಯನ್ನು ಏಕಕಾಲಕ್ಕೆ ವಿಪುಲವಾಗಿ ಗಳಿಸಿರುವ ಅಪರೂಪದ ಭಾಗ್ಯಶಾಲಿ ಸಾಧಕ. ಈ ಸಾಧನೆಗೆ ಆಧಾರ ಮೂರ್ತಿಯ ಅನನ್ಯ ಪ್ರತಿಭೆಯೇ ಆದರೂ ಅದು ಸಾಕಾರಗೊಂಡದ್ದಕ್ಕೆ ಕಾರಣ, ಗೋಪಾಲಕೃಷ್ಣ ಅಡಿಗರ ಮಾತಿನಲ್ಲಿ ಹೇಳುವುದಾದರೆ, ಅವನ ‘ಸಂಕಲ್ಪ ಬಲದ ಜಾಗರಣೆ’. ಇದಕ್ಕೆ ಅವನು ಸಾಗಿ ಬಂದಿರುವ ದುರ್ಗಮ ಹಾದಿಯೇ ಪ್ರತ್ಯಕ್ಷ ಸಾಕ್ಷಿಯ
೧೯೯೨ರಲ್ಲಿ ನಾಗಾಭರಣ ‘ಚಿನ್ನಾರಿ ಮುತ್ತ’ ಎಂಬ ಮಕ್ಕಳ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದರು. ಅದರ ಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದದ್ದು ವೆಂಕಟೇಶಮೂರ್ತಿ. ಹಳ್ಳಿಯಿಂದ ನಗರಕ್ಕೆ ಓಡಿಬಂದು, ಕಳ್ಳರ ತಂಡದಲ್ಲಿ ಸಿಕ್ಕಿಬಿದ್ದರೂ ಸುದೈವದಿಂದ ಮುಂದೆ ಒಬ್ಬ ಓಟಗಾರನಾಗಿ ಚಿನ್ನದ ಪದಕ ಗೆದ್ದು, ನಾಡಿಗೆ ಖ್ಯಾತಿ ತರುವ ಒಬ್ಬ ಪೋರನ ಕಥೆ ಅದಾಗಿತು. ಚಿತ್ರ ಜನಪ್ರಿಯತೆಯ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿತು. ಸಿ.ಅಶ್ವತ್ಥ್ ಸಂಗೀತ ನಿರ್ದೇಶನದ ಆ ಚಿತ್ರದ ಸುಮಧುರ ಗೀತೆಗಳಲ್ಲಿ ಒಂದರ ಪಲ್ಲವಿ ಹೀಗಿದೆ:
ಮಣ್ಣಲ್ಲಿ ಬಿದ್ದೋನು, ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದೋನು, ಬಂಗಾರ ಗೆದ್ದನು
ಹೇಗಿದ್ದ, ಹೇಗಾದ ಗೊತ್ತಾ
ನಮ್ಮ ಚಿನ್ನಾರಿ ಮುತ್ತ?
ಈ ಗೀತೆಯನ್ನು ಸ್ವತಃ ವೆಂಕಟೇಶಮೂರ್ತಿಗೂ ಅನ್ವಯಿಸಬಹುದು.
ಮೂರ್ತಿಯೊಂದಿಗೆ ನನ್ನ ಗಾಢ ಸ್ನೇಹ ಮತ್ತು ನಿರಂತರ ಒಡನಾಟ 35 ವರ್ಷಗಳಷ್ಟು ನಿಡುಗಾಲದ್ದು. ಆಗ್ಗೆ ನನ್ನ ತಂಗಿ ನಾಗರತ್ನ ಮತ್ತು ಭಾವ ಸೀತಾರಾಮ್ ಬೆಂಗಳೂರಿನ ತ್ಯಾಗರಾಜನಗರದ ಗಣೇಶ ಮಂದಿರ ರಸ್ತೆಯಲ್ಲಿದ್ದ ಮನೆಯೊಂದರಲ್ಲಿ ವಾಸವಾಗಿದ್ದರು. ಚಿಂತಾಮಣಿಯಿಂದ ಬೆಂಗಳೂರಿಗೆ ಬಂದಿದ್ದ ನಾನು ಶನಿವಾರ ರಾತ್ರಿ ಅವರ ಮನೆಯಲ್ಲೇ ಉಳಿದುಕೊಂಡಿದ್ದೆ. ಅವರ ಎದುರುಮನೆಯಲ್ಲೇ ವೆಂಕಟೇಶಮೂರ್ತಿ ವಾಸವಾಗಿರುವ ಸಂಗತಿ ಅವರಿಂದ ತಿಳಿದು, ಮರುದಿನ ಭಾನುವಾರ ಬೆಳಿಗ್ಗೆಯೇ ಮೂರ್ತಿಯನ್ನು ಮೊಖ್ತಾ ಭೇಟಿಯಾಗಲು ಅವನ ನಿಕಟ ಪರಿಚಯವಿದ್ದ ನನ್ನ ಭಾವನವರೊಂದಿಗೆ ಹೋದೆ.
ಅದೊಂದು ಪುಟ್ಟ ಬಾಡಿಗೆಮನೆ. ಒಂದು ಚಿಕ್ಕ ಹಜಾರ. ಅಷ್ಟೇ ಚಿಕ್ಕ ಮಲಗುವ ಕೋಣೆ. ಅದನ್ನು ಒಂದು ಮಂಚ ಮುಕ್ಕಾಲು ಪಾಲು ಆಕ್ರಮಿಸಿಕೊಂಡಿತ್ತು. ಇನ್ನು ಅಡಿಗೆಮನೆ, ಬಚ್ಚಲುಮನೆಗಳ ವಿಸ್ತಾರದ ಬಗ್ಗೆ ಹೇಳುವ ಅಗತ್ಯವಿಲ್ಲ. ಇಂಥ ಕಿಷ್ಕಿಂದದಲ್ಲಿ ಮೂರ್ತಿ, ತನ್ನ ಹೆಂಡತಿ, ನಾಲ್ಕು ಮಕ್ಕಳು ಮತ್ತು ಇಬ್ಬರು ಅಜ್ಜಿಯರೊಂದಿಗೆ ವಾಸವಾಗಿದ್ದ. ತನ್ನ ಶಯ್ಯಾಗೃಹದ ಮಂಚದ ಮೇಲೆ ಚಕ್ಕಳಬಕ್ಕಳ ಕೂತೇ ತನ್ನೆಲ್ಲ ಓದು, ಬರಹ ಮಾಡುತ್ತಿದ್ದ.
ಮೂರ್ತಿಗೆ ನನ್ನನ್ನು ನನ್ನ ಭಾವ ಪರಿಚಯಿಸಿದರು. ನನ್ನ ಹೆಸರನ್ನು ಕೇಳಿದೊಡನೆಯೇ ಹಿಗ್ಗಿನಿಂದ ಮೂರ್ತಿಯ ಮುಖ ಅರಳಿತು. ‘ನನ್ನ ಮೆಚ್ಚಿನ ಕವಿಗಳಲ್ಲಿ ನೀವೂ ಒಬ್ಬರು’ ಎಂದು ತುಂಬ ಆದರದಿಂದ ನನ್ನನ್ನು ಬರಮಾಡಿಕೊಂಡ. ‘ಇತ್ತೀಚೆಗಷ್ಟೇ ನನ್ನ ಮೂರನೇ ಕವನ ಸಂಕಲನ ‘ಸಿಂದಾಬಾದನ ಆತ್ಮಕಥೆ’ ಪ್ರಕಟವಾಗಿದೆ. ನೀವು ಓದಿ, ನಿಮ್ಮ ಅಭಿಪ್ರಾಯವನ್ನು ಬರೆದು ತಿಳಿಸಬೇಕು’ ಎಂದು ಆ ಪುಸ್ತಕವನ್ನು ಮೂರ್ತಿ ತನ್ನ ಸಹಿ ಹಾಕಿ ನನಗೆ ಕೊಟ್ಟ. ಆ ಮೊದಲ ಭೇಟಿಯಲ್ಲೇ ಒಂದು ಆತ್ಮೀಯ ಭಾವನೆ ನಮ್ಮ ನಡುವೆ ವಿನಿಮಯವಾಗಿ, ಸ್ನೇಹದ ಬೀಜಾಂಕುರವಾಯಿತು. ನಮ್ಮ ಎರಡನೆಯ ಭೇಟಿಯ ವೇಳೆಗಾಗಲೇ ನಾವು ಏಕವಚನದ ಆಪ್ತಮಿತ್ರರಾಗಿ ಮಾರ್ಪಟ್ಟಿದ್ದೆವು. ಅನಂತರ ಸ್ಥಿರ ಮತ್ತು ಚರ ದೂರವಾಣಿಗಳೆಂಬ ಕರ್ಣಪಿಶಾಚಿಗಳು ನಮ್ಮನ್ನು ಅಮರಿಕೊಳ್ಳುವ ತನಕ ಅಕ್ಷರಶಃ ನೂರಾರು ಪತ್ರಗಳು ನಮ್ಮ ನಡುವೆ ವಿನಿಮಯಗೊಂಡಿವೆ.
ಮೂರ್ತಿ ಮತ್ತು ನಾನು ಈ ಪಾಟಿ ಒಬ್ಬರನ್ನೊಬ್ಬರು ಹಚ್ಚಿಕೊಂಡಿರುವುದು ಅನೇಕರಿಗೆ, ಅಷ್ಟೇಕೆ ಸ್ವತಃ ನಮಗೇ, ವಿಸ್ಮಯದ ಸಂಗತಿ. ಏಕೆಂದರೆ ನಮ್ಮಿಬ್ಬರದ್ದು ತದ್ವಿರುದ್ಧ ಸ್ವಭಾವ: ಅವನು ಬಹುಮಟ್ಟಿಗೆ ಅಂತರ್ಮುಖಿ, ನಾನು ಬಹಿರ್ಮುಖಿ. ಅವನದ್ದು ಸಂಕೋಚದ ಸ್ವಭಾವ. ತಾನಾಗಿ ಯಾರನ್ನೂ ಮಾತಾಡದ, ಸುಲಭವಾಗಿ ಹತ್ತಿರಕ್ಕೆ ಬಿಟ್ಟುಕೊಳ್ಳದ, ಮೂಗಿನ ತುದಿಗೇ ಉರಿಕೋಪದ ದೂರ್ವಾಸ ಮುನಿ. ನನಗೋ ಎಲ್ಲರೂ ಬೇಕು. ಅವನು ಹಳ್ಳಿಯ ಹಿನ್ನೆಲೆಯವನಾದರೆ ನಾನು ನಗರದ ಹಿನ್ನೆಲೆಯವನು. ಅವನು ಕನ್ನಡ ಸಾಹಿತ್ಯದ ವಿದ್ಯಾರ್ಥಿ; ನನ್ನದು ಇಂಗ್ಲಿಷ್ ಸಾಹಿತ್ಯ. ಅವನು ಸಂಪ್ರದಾಯಸ್ಥ, ನಾನು ಮೂರ್ತಿಭಂಜಕ. ಜೀವನ ಮತ್ತು ಕಾವ್ಯ- ಎರಡರಲ್ಲೂ ಅವನದ್ದು ಶ್ರದ್ಧೆಯ, ಗಾಂಭೀರ್ಯದ ಶೈಲಿ; ನನ್ನದು ಸಂದೇಹ ಮತ್ತು ತುಂಟಾಟ. ಅವನು ‘ನಾಲ್ಪೇ ಸುಖಮಸ್ತಿ’, ನಾನೋ ‘ಇದ್ದದ್ರಲ್ ಹಾಯಾಗಿ’- ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಷ್ಟಾಗಿ ನಾವು ಪರಮಾಪ್ತ ಮಿತ್ರರಾಗಿರಲು ಕಾರಣ ‘ವಿರುದ್ಧ ಧ್ರುವಗಳ ಆಕರ್ಷಣೆ’ ಎಂಬ ಭೌತಿಕ ಹಾಗೂ ಬೌದ್ಧಿಕ ನಿಯಮವೇ ಇದ್ದೀತು.
೨೦೦೬ರ ಜೂನ್ ತಿಂಗಳೂಂತ ನೆನಪು. ನಾನು ಬೆಂಗಳೂರಿನ ನನ್ನ ತಮ್ಮ ಶಂಕರನ ಮನೆಗೆ ಬಂದಿದ್ದೆ. ಸಂಜೆ ಮೂರ್ತಿ ಸಿಕ್ಕಿದ. ಯಾಕೋ ತುಂಬ ಸುಸ್ತಾದವನಂತೆ ನಿಸ್ತೇಜನಾಗಿ ಕಂಡ. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯ ಬೆಂಚಿನ ಮೇಲೆ ಕೂತು, ಅರ್ಧರ್ಧ ಟೀ ಕುಡಿದೆವು. ನಾನು ಸಿಗರೇಟು ಹಚ್ಚಿದೆ. ಮೂರ್ತಿ, ‘ನನಗೂ ಒಂದು ಕೊಡು’ ಎಂದ. ಸಿಗರೇಟಿನ ಚಟವಿಲ್ಲದ ಅವನ ಮಾತಿಗೆ ಚಕಿತನಾಗಿ ಸಿಗರೇಟು ಕೊಟ್ಟೆ. ಹಚ್ಚಿಕೊಂಡು ಹೊಗೆಯುಗುಳುತ್ತ ಹೇಳಿದ, ‘ಇತ್ತೀಚೆಗೆ ನನ್ನ ಹೆಂಡತಿಗೆ ಲಿವರ್ ಪ್ರಾಬ್ಲಮ್ ಶುರುವಾದದ್ದು ನಿನಗೆ ಗೊತ್ತಿದೆ. ಇವತ್ತು ನನ್ನ ಹಳೆಯ ಶಿಷ್ಯ, ಲಿವರ್ ಕಾಯಿಲೆಗಳ ತಜ್ಞ, ಅದೇ ನಿನಗೂ ಗೊತ್ತಲ್ಲ ಎಚ್.ಎಸ್ ರಾಘವೇಂದ್ರರಾವ್ ಅವರ ತಮ್ಮ, ಅವನೂ ಡಾಕ್ಟರ್ ಎಚ್.ಎಸ್.ವೆಂಕಟೇಶಮೂರ್ತಿಯೇ, ಅವನಿಂದ ಟೆಸ್ಟ್ ಮಾಡಿಸಿದೆ. ಲಿವರ್ ತುಂಬಾ ಡ್ಯಾಮೇಜ್ ಆಗಿದೆಯಂತೆ. ಇನ್ನು ಹೆಚ್ಚೆಂದರೆ ಆರು ತಿಂಗಳು ಆಕೆ ಬದುಕಬಹುದು, ಅಷ್ಟೇ. ಈ ವಿಷಯ ಯಾರಿಗೂ. ಮುಖ್ಯವಾಗಿ ರಾಜಲಕ್ಷ್ಮಿ ಅವರಿಗೂ ತಿಳಿಸಬೇಡಿ ಅಂತ ಹೇಳಿದ. ಮನಸ್ಸು ತಡೆಯಲಿಲ್ಲ. ನಿನಗೆ ಹೇಳಿಬಿಟ್ಟೆ’
ನನಗೆ ಹಠಾತ್ತನೆ ಅಗಾಧವಾದ ಒಂದು ಮಂಕು ಕವಿದುಬಿಟ್ಟಿತು. ಇದಕ್ಕೆ ಕೇವಲ ಒಂದೆರಡು ತಿಂಗಳ ಹಿಂದಷ್ಟೇ ಮೂರ್ತಿ, ರಾಜಲಕ್ಷ್ಮಿ, ನರಹಳ್ಳಿ ಮತ್ತು ರಜನಿ ಚಿಂತಾಮಣಿಗೆ ಬಂದಿದ್ದರು. ಇಡೀ ದಿನ ನಮ್ಮೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿಬಂದೆವು. ರಾಜಲಕ್ಷ್ಮಿ ಅತ್ಯಂತ ಉತ್ಸಾಹ, ಲವಲವಿಕೆ ಮತ್ತು ಖುಷಿಯಲ್ಲಿದ್ದರು. ಯಾವುದೇ ಗಂಭೀರ ಖಾಯಿಲೆಯ ಯಾವುದೇ ಸಣ್ಣ ಸುಳಿವು ಸೂಚನೆಗಳೂ ಅವರಲ್ಲಿ ನಮಗೆ ಕಂಡಿರಲಿಲ್ಲ. ತನ್ನ ಸ್ವಂತ ಮನೆಯಲ್ಲಿ ಗಂಡ, ಮಕ್ಕಳು, ಸೊಸೆಯರು, ಮೊಮ್ಮಕ್ಕಳೊಂದಿಗೆ ಅವರ ನೆಮ್ಮದಿಯ ಜೀವನ ಇನ್ನೇನು ಆರಂಭವಾಯಿತು ಅನ್ನುವಷ್ಟರಲ್ಲಿ ಇಂಥ ಬರಸಿಡಿಲೆ? ಇಂಥ ದಾರುಣ ಅಕಾಲ ಅಂತ್ಯವೆ? ಇನ್ನು ಮೂರ್ತಿಯ ಗತಿಯೇನು? ಗೆಳೆಯನಿಗೆ ಏನೂ ಹೇಳಲು ತೋಚದೆ, ಮೌನವಾಗಿ ಅವನ ಬೆನ್ನು ಸವರಿದೆ.
ಅಲ್ಲಿಂದಾಚೆಗೆ ಮೂರ್ತಿ ಸದಾ ಕಾಲ ತನ್ನ ಪತ್ನಿಯೊಂದಿಗಿದ್ದು, ಪ್ರೀತಿಯಿಂದ ಆಕೆಯ ಆರೈಕೆ, ಶುಶ್ರೂಷೆ ಮಾಡಿದ. ಮನೆಮಂದಿಯೆಲ್ಲ ಏನೂ ಆಗಿಲ್ಲವೆಂಬಂತೆ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಗಿರಿಜ ಮತ್ತು ನಾನೂ ಸಹ ಒಂದೆರಡು ಬಾರಿ ಆಕೆಯನ್ನು ಕಂಡು ಧೈರ್ಯ ಹೇಳಿ ಬಂದೆವು. ಏನು ಮಾಡಿದರೇನು? ಕ್ರಮೇಣ ಖಾಯಿಲೆ ಉಲ್ಬಣಿಸುತ್ತ ಹೋಯಿತು. ಆಕೆ ಒಂದು ರೀತಿಯ ಭ್ರಮಾಧೀನ ಸ್ಥಿತಿ ತಲುಪಿದರು. ಕೊನೆಗೆ ೨೦೦೭ರ ಜನವರಿ ೬ರಂದು ರಾಜಲಕ್ಷ್ಮಿ ನಮ್ಮನ್ನಗಲಿ ಹೋಗಿಬಿಟ್ಟರು.
ಈ ಆಘಾತದಿಂದ ಚೇತರಿಸಿಕೊಳ್ಳಲು ಮೂರ್ತಿಗೆ ವರ್ಷಗಳೇ ಬೇಕಾಯಿತು. ಆ ಮೂಕ ಸಂಕಟದಿಂದ, ದುಸ್ಸಹವಾದ ಒಬ್ಬಂಟಿತನದಿಂದ ಅವನನ್ನು ಪಾರು ಮಾಡಿದ್ದು ಅವನ ಕಾವ್ಯವೆಂದೇ ಹೇಳಬೇಕು. ತನ್ನ ‘ಉತ್ತರಾಯಣ’ ಎಂಬ ಕವನಗುಚ್ಛದಲ್ಲಿ ತನ್ನ ಅಂತರಾಳದ ನೋವು, ಯಾತನೆಗಳನ್ನು ಮೂರ್ತಿ ಮನ ಬಿಚ್ಚಿ ತೋಡಿಕೊಂಡಿದ್ದಾನೆ. ಓದುಗರ ಎದೆ ಹಿಂಡುವಂತಿರುವ ‘ಉತ್ತರಾಯಣ’ದ ವೈಶಿಷ್ಟ್ಯ- ಅಲ್ಲಿ ಶೋಕವು ನಿಜವಾದ ಅರ್ಥದಲ್ಲಿ ಶ್ಲೋಕವಾಗಿದೆ, ಅಪೂರ್ವ ಕಲಾಕೃತಿಯಾಗಿ ರೂಪಾಂತರಗೊಂಡಿದೆ.
ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನೆನಪಾಗುತ್ತಿದೆ: ರಾಜಲಕ್ಷ್ಮಿ ಅವರು ತೀರಿಕೊಂಡು ಕೆಲವು ತಿಂಗಳುಗಳಾಗಿದ್ದವು. ಆಗ ಸಿ.ಅಶ್ವತ್ಥ್ ಅವರು ಮೂರ್ತಿ ಮತ್ತು ನನ್ನ ತಲಾ ಐದು ಭಾವಗೀತೆಗಳಿಗೆ ಸ್ವರಸಂಯೋಜಿಸಿ, ‘ಜೀವಸಖಿ’ ಎಂಬ ಧ್ವನಿಸಾಂದ್ರಿಕೆ ಹೊರತರುವ ಸಿದ್ಧತೆಯಲ್ಲಿದ್ದರು. ಅದರಲ್ಲಿನ ಹತ್ತೂ ಹಾಡುಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಲು ಅಶ್ವತ್ಥ್ ನಿರ್ಧರಿಸಿದ್ದರು. ಅದಕ್ಕಾಗಿ ಅಶ್ವತ್ಥ್ ಅವರೊಂದಿಗೆ ಮೂರ್ತಿ ಮತ್ತು ನಾನು ಚೆನ್ನೈಗೆ ಹೋಗಿದ್ದೆವು. ಆ ಗೀತಗುಚ್ಛದಲ್ಲಿ ಮೂರ್ತಿಯ, ‘ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ / ಮರಳುಹಾಸನು ತೊರೆದ ನದಿಯ ಹಾಗೆ?’ ಎಂಬ ಗೀತೆಯೊಂದಿದೆ. ಅದು ಗತಿಸಿದ ತನ್ನ ಪತ್ನಿಯ ಗಾಢ ಸವಿ ನೆನಪುಗಳನ್ನು ಕುರಿತು ಮೂರ್ತಿ ಬರೆದ ಗೀತೆ. ಆ ಹಾಡನ್ನು ಎಸ್.ಪಿ.ಬಿ.ಅವರು ಸ್ಟುಡಿಯೋಲಿ ಹಾಡಿ ಧ್ವನಿಮುದ್ರಿಸಿದ ನಂತರ, ಒಮ್ಮೆ ತಾವೂ ಕೇಳಲು ನಮ್ಮೊಂದಿಗೆ ಕೂತರು. ಕೇಳುತ್ತ ಹೋದ ಹಾಗೆ ಅವರ ಕಣ್ಣುಗಳಿಂದ ಅವರಿಗೇ ಅರಿವಿಲ್ಲದೆ, ಧಾರೆ ಧಾರೆಯಾಗಿ ಕಣ್ಣೀರು ಹರಿಯಿತು. ಹಾಡು ಮುಗಿದ ನಂತರ ಎಸ್.ಪಿ.ಬಿ., ‘ಏನು, ಕವಿಗಳೇ, ನನ್ನನ್ನು ಹೀಗೆ ಅಳಿಸಿಬಿಟ್ರಲ್ಲ?’ ಎಂದು ಮೂರ್ತಿಯನ್ನು ತಬ್ಬಿಕೊಂಡಿದ್ದರು. ಎಲ್ಲರ ಕಣ್ಣುಗಳೂ ತೇವಗೊಂಡಿದ್ದವು.
‘ಈ ಇಡೀ ಜಗತ್ತು ಸೃಷ್ಟಿಯಾಗಿರುವುದು ಕೇವಲ ನನಗಾಗಿ ಮಾತ್ರ’- ಎಂಬ ಮನುಷ್ಯನ ಮೌಢ್ಯ ಮತ್ತು ಅಹಂಕಾರವೇ ನಮ್ಮ ಇಂದಿನ ಈ ದುಃಸ್ಥಿತಿಗೆ ಕಾರಣ. ತಾನು ವಿಶ್ವವೆಂಬ ಈ ಅದ್ಭುತ ವ್ಯವಸ್ಥೆಯ ಒಂದು ಅಂಶ ಮಾತ್ರ ಎಂಬುದನ್ನರಿತು, ಇನ್ನು ಮುಂದೆ ಮನುಷ್ಯ ಹಾಗೂ ಈವರೆಗೆ ವಿಶೇಷವಾಗಿ ಮನುಷ್ಯ ಕೇಂದ್ರಿತವಾಗಿದ್ದ ಸಾಹಿತ್ಯವು ಸಮಸ್ತ ಸೃಷ್ಟಿಯನ್ನೂ ತಮ್ಮ ಪ್ರೀತಿಯ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ. ಪರಿಸರ ಹಾಗೂ ಜೀವ ಜಗತ್ತು ಸಾಹಿತ್ಯದ ಕೇಂದ್ರಕ್ಕೆ ಬರಬೇಕಾಗಿದೆ- ಎಂಬ ನಿಲುವು ಹೊಂದಿದ್ದ ಗೆಳೆಯ ವೆಂಕಟೇಶ ಮೂರ್ತಿ ಹಲವು ತಿಂಗಳುಗಳು ಅನಾರೋಗ್ಯದಿಂದ ಒದ್ದಾಡಿದ. ಅವನ ಸ್ಥಿತಿ ನೋಡಲಾಗದೇ ನಾನೂ ಮರುಗಿದ್ದೆ. ಈಗ ಅಂತಿಮವಾಗಿ ಆತ ಕವಿತೆಯಿಂದಲೂ ಬದುಕಿನಿಂದಲೂ ಮುಕ್ತನಾಗಿದ್ದಾನೆ.