ಚೈತನ್ಯ ವಿಶೇಷಮಕ್ಕಳ ಶಿಕ್ಷಣ ಸಂಸ್ಥೆಗೆ ದಶಮಾನೋತ್ಸವ ಸಂಭ್ರಮ
Dec 02 2023, 12:45 AM ISTಜೋಗ ಜಲಪಾತ ಸಮೀಪದ ಮಲೆನಾಡಹಳ್ಳಿ ಬಚ್ಚಗಾರು ಎಂಬ ಹಳ್ಲಿಯಲ್ಲಿಯೇ ಬೆಳೆದ ಶಾಂತಲಾ ಅವರು ಸಾಗರದಲ್ಲಿ ಪದವಿ ಮುಗಿಸಿದವರು. ಬಳಿಕ ಹೆಗ್ಗೋಡು ಸಮೀಪ ಮುಂಗರವಳ್ಳಿ ಎಂಬ ಊರಿನ ಸುರೇಶ್ ಎಂಬವರೊಂದಿಗೆ ವಿವಾಹವಾಗಿ ಮತ್ತೆ ಹಳ್ಳಿಗೇ ಬಂದರು. ಜೀವನದಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತ ಒಳಗಿನಿಂದ ಬಂದಿತು. ವಿಕಲಚೇತನ ಮಕ್ಕಳ ಸೇವೆ ಮಾಡುವ ಸಂಕಲ್ಪ ಮಾಡಿದರು. ಚೈತನ್ಯ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಅದೇ ಹಳ್ಳಿಯಲ್ಲಿ ಪತಿ ಸುರೇಶ್ ಜೊತೆ ಸೇರಿ ಅನೌಪಚಾರಿಕವಾಗಿ ಬುದ್ಧಿಮಾಂದ್ಯ ಮಕ್ಕಳ ಮಕ್ಕಳ ಶಾಲೆ ಆರಂಭಿಸಿದರು. ಶಿರಸಿಯ ಅಜಿತ ಮನೋಚೇತನ ಸಂಸ್ಥೆಗೆ ಭೇಟಿ ನೀಡಿ, ಅವರ ಮಾರ್ಗದರ್ಶನ ಪಡೆದು, ಸರ್ಕಾರದಿಂದ ಮಾನ್ಯತೆ ಸಹ ಪಡೆದರು. ಆದರೆ ಅನುದಾನ ಸಿಗಲಿಲ್ಲ. ದಾನಿಗಳ ನೆರವು ಪಡೆದು ಪೂರ್ಣ ಪ್ರಮಾಣದ ಬುದ್ಧಿಮಾಂದ್ಯ ಮಕ್ಕಳ ಗ್ರಾಮೀಣ ಶಾಲೆ ಆರಂಭಿಸಿದರು.