ಬೆಂಗಳೂರು : ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ ಕೋಟ್ಯಂತರ ರು. ಪಡೆದು ವಂಚಿಸಿದ್ದ ಪ್ರಕರಣದ ಸಂಬಂಧ ಒಟ್ಟು 6 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಜೈಸನ್ ಡಿಸೋಜಾ ಮತ್ತು ಈತನ ಪತ್ನಿ ಲವೀನಾ ಜೆನೆಟ್ ಮೋಂತೆರೊ ಹಾಗೂ ವೆಂಕಟರೆಡ್ಡಿ, ತಿಪ್ಪೇಸ್ವಾಮಿ, ಸಿದ್ದಲಿಂಗಯ್ಯ ಹಿರೇಮಠ ಮತ್ತು ವಿಜಯ ಸಿದ್ದಲಿಂಗಯ್ಯ ಹಿರೇಮಠ ಬಂಧಿತರು. ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ನಿರುದ್ಯೋಗಿಗಳು, ಖಾಸಗಿ ಕಂಪನಿಗಳ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿಕೊಂಡು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೊಸೆಸ್, ಸರ್ವರ್, ಪೀವನ್, ಎಸ್ಡಿಎ, ಎಫ್ಡಿಎ ಕೆಲಸ ಸೇರಿ ಇತರೆ ಹುದ್ದೆಗಳನ್ನು ಕೊಡಿಸುತ್ತೇವೆ ಎಂದು ನಂಬಿಸಿ ಸುಮಾರು 450ಕ್ಕೂ ಹೆಚ್ಚು ಮಂದಿಯಿಂದ ಅಂದಾಜು 25 ಕೋಟಿಗೂ ಹೆಚ್ಚು ವಂಚಿಸಿದ್ದರು. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಸಿಬಿಯ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ವಂಚನೆ ಬಯಲಾಗಿದ್ದು ಹೇಗೆ?
ಜೈಸನ್ ಮತ್ತು ಲೆವೀನ್ ದಂಪತಿ, ನ್ಯಾಯಾಂಗ ಇಲಾಖೆಯಲ್ಲಿ ತಮಗೆ ಉನ್ನತ ಮಟ್ಟದ ಸಂಪರ್ಕವಿದೆ ಎಂದು ಹೇಳಿಕೊಂಡು ಉದ್ಯೋಗಾಕಾಂಕ್ಷಿಗಳನ್ನು ನಂಬಿಸುತ್ತಿದ್ದರು. ಖಾಲಿ ಇರುವ ಹುದ್ದೆಗಳ ಬಗ್ಗೆ ನಿಖರವಾದ ಮಾಹಿತಿ ನೀಡಿ, ನೇಮಕಾತಿ ಪತ್ರ ನೀಡುವುದಾಗಿಯೂ ಭರವಸೆ ನೀಡುತ್ತಿದ್ದರು. ಇದನ್ನು ನಂಬಿದ 450 ಹೆಚ್ಚು ಮಂದಿ ಲಕ್ಷಾಂತರ ಹಣವನ್ನು ಈ ದಂಪತಿಗೆ ನೀಡಿದ್ದರು. 2022ರಲ್ಲಿ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಮೊದಲ ವಂಚನೆ ಪ್ರಕರಣ ದಾಖಲಾಗಿತ್ತು.
ದಂಪತಿ ಮೇಲೆ 15 ಪ್ರಕರಣ ದಾಖಲು:
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರೋಬ್ಬರಿ 11 ಪ್ರಕರಣಗಳು ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು15 ಪ್ರಕರಣಗಳು ಈ ದಂಪತಿಯ ವಿರುದ್ಧ ದಾಖಲಾಗಿವೆ. ಯಲಹಂಕ, ಯಲಹಂಕ ನ್ಯೂಟೌನ್, ಬೊಮ್ಮನಹಳ್ಳಿ, ಆರ್.ಟಿ. ನಗರ, ಮಂಡ್ಯ ಮತ್ತು ಗದಗ ಜಿಲ್ಲೆಗಳಲ್ಲೂ ಇವರ ವಂಚನೆ ಪ್ರಕರಣ ದಾಖಲಾಗಿದೆ.
ತನಿಖೆಯಲ್ಲಿ ಬಯಲಾದ ಸತ್ಯಾಂಶಗಳು:
ಸಿಸಿಬಿಯ ವಿಶೇಷ ತಂಡವು ನಡೆಸಿದ ತನಿಖೆಯಲ್ಲಿ ದಂಪತಿಯ ವಂಚನೆಯ ಸಂಪೂರ್ಣ ಚಿತ್ರಣ ಬಯಲಾಗಿದೆ. ಉದ್ಯೋಗಾಕಾಂಕ್ಷಿಗಳಿಂದ ಪಡೆದ ಹಣದಲ್ಲಿ ಜೈಸನ್ ಮತ್ತು ಲವೀನಾ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಂಗಳೂರು ಮತ್ತು ಇತರೆಡೆಗಳಲ್ಲಿ ದುಬಾರಿ ಜಮೀನು ಮತ್ತು ಸೈಟ್ಗಳನ್ನು ಖರೀದಿಸಿದ್ದರು. ಸಿಸಿಬಿ ಅಧಿಕಾರಿಗಳು ಬಂಧಿತರಿಂದ ಪ್ರಾಥಮಿಕವಾಗಿ 38 ಲಕ್ಷ ರು. ನಗದನ್ನು ವಶಕ್ಕೆ ಪಡೆದಿದ್ದಾರೆ. ವಂಚನೆಯ ಹಣದಿಂದ ಖರೀದಿಸಿದ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ವಂಚಕರ ಬಗ್ಗೆ ಎಚ್ಚರದಿಂದಿರಲು ಮನವಿ
ಈ ದಂಪತಿ 2022, 2025 ಮತ್ತು 2026ನೇ ಸಾಲುಗಳಲ್ಲಿ ನಿರಂತರವಾಗಿ ವಂಚನೆ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಂಪತಿಯಿಂದ ಇನ್ನೂ ಹೆಚ್ಚಿನ ಜನರು ಮೋಸ ಹೋಗಿರುವ ಸಾಧ್ಯತೆಯಿದೆ. ಈ ಜಾಲದಲ್ಲಿ ಯಾರಾದರೂ ಸರ್ಕಾರಿ ನೌಕರರು ಅಥವಾ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸರ್ಕಾರಿ ಉದ್ಯೋಗದ ಆಸೆಯಲ್ಲಿರುವ ಯುವಜನರು ಇಂತಹ ವಂಚಕರ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಯಾವುದೇ ಹುದ್ದೆಗೆ ಹಣ ನೀಡಿ ಹಿಂಬಾಗಿಲಿನಿಂದ ಪ್ರವೇಶಿಸಲು ಪ್ರಯತ್ನಿಸಬಾರದು ಎಂದು ಸಿಸಿಬಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
