ಸಾರಾಂಶ
ಚೆನ್ನೈ: ತಮಿಳುನಾಡಿನ ಮೀನಗಾರಿಕೆ ಖಾತೆ ಸಚಿವ ಸುನಿತಾ ರಾಧಾಕೃಷ್ಣನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ದಿ.ಹೀರಾಬೆನ್ ಬಗ್ಗೆ ಕೀಳು ಮಾತುಗಳನ್ನು ಆಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವ ವೇಳೆ ಡಿಎಂಕೆ ನಾಯಕಿ ಕೆ. ಕನಿಮೋಳಿ ಉಪಸ್ಥಿತಿಯಲ್ಲೇ ಸುನಿತಾ, ಈ ಕೀಳು ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ‘ಡಿಎಂಕೆ ನಾಯಕರು ತಮ್ಮ ವರ್ತನೆಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದಾರೆ. ಸಾರ್ವಜನಿಕವಾಗಿಯೇ ಅವರು ಪ್ರಧಾನಿ ಮೋದಿ ಮತ್ತು ಅವರ ತಾಯಿ ಬಗ್ಗೆ ಕೀಳು ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವೆ’ ತಿಳಿಸಿದ್ದಾರೆ.
ಇದೇ ವೇಳೆ, ‘ಮೋದಿ ಅವರನ್ನು ತುಚ್ಛವಾಗಿ ಬೈಯುವುದು ಇಂಡಿಯಾ ಕೂಟದ ನಾಯಕರ ಚಾಳಿ. ಈ ರೀತಿ ಮೋದಿಯನ್ನು ನಿಂದಿಸುತ್ತಿರುವ 120ನೇ ವ್ಯಕ್ತಿ ಇವರು’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಇಸ್ರೋದ ಕಾರ್ಯಕ್ರಮವೊಂದರ ವೇಳೆ ಇಸ್ರೋ ಹೊಗಳುವ ಜಾಹೀರಾತು ನೀಡಿದ್ದ ಸಚಿವ ಸುನಿತಾ ರಾಧಾಕೃಷ್ಣನ್, ಅದಕ್ಕೆ ಚೀನಿ ರಾಕೆಟ್ ಬಳಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದರು.