ನವದೆಹಲಿ: ನೀಟ್ ವೈಫಲ್ಯ ಖಂಡಿಸಿ ಜಿರಳೆ ಪಾರ್ಟಿ ಹೋರಾಟಕ್ಕೆ ಸಾಥ್‌ ನೀಡುತ್ತಾ 26 ದಿನಗಳಿಂದ ಉಪವಾಸ ಮಾಡುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ಗುರುವಾರ ತಡರಾತ್ರಿ ನಿರಶನ ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿ, ‘ಸಂಭಾವ್ಯ ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದಲೂ ಈ ನಿರ್ಧಾರ ಕೈಗೊಂಡೆ’ ಎಂದಿದ್ದಾರೆ. ಜಿರಳೆ ಪಾರ್ಟಿ ಹೋರಾಟ ಹಿಂಸೆಗೆ ತಿರುಗಿದ ಕಾರಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕೇಂದ್ರ ಸಚಿವರ ಮನವೊಲಿಕೆ ಬಳಿಕ ಸೋನಂ ಅವರು ನಿರಶನ ಹೋರಾಟವನ್ನು ವಾಂಗ್ಚುಕ್‌ ಮುಕ್ತಾಯಗೊಳಿಸಿದ್ದರು. ಈ ಕುರಿತು ಶುಕ್ರವಾರ ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ನನ್ನ ಹಲವು ಬೇಡಿಕೆ ಈಡೇರಿಕೆಯ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಉಪವಾಸ ನಿಲ್ಲಿಸಿದೆ. ದೇಶದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದ್ದ ಕಾರಣದಿಂದಲೂ ನಿರಶನ ಕೈಬಿಟ್ಟೆ’ ಎಂದು ಬರೆದಿದ್ದಾರೆ. ಜತೆಗೆ ಎಲ್ಲೂ ಹಿಂಸಾಚಾರಕ್ಕೆ ಅನುವು ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದು ಹಸಿವಿನ ಅಂತ್ಯ. ಹೊಣೆಗಾರಿಕೆಯ ಆರಂಭ

‘ಇದು ಹಸಿವಿನ ಅಂತ್ಯ. ಹೊಣೆಗಾರಿಕೆಯ ಆರಂಭ. ಪರೀಕ್ಷಾ ವ್ಯವಸ್ಥೆಯ ಹೊಣೆಗಾರಿಕೆ ಕುರಿತು ಸರ್ಕಾರ ಹಾಗೂ ಎಲ್ಲಾ ಪಕ್ಷಗಳ ಸಂಸದರಿಂದ ಭರವಸೆ ದೊರೆತ ನಂತರವಷ್ಟೇ ಉಪವಾಸವನ್ನು ಕೊನೆಗೊಳಿಸಿದ್ದೇನೆ. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸದಿರುವ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ. ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಈಗಾಗಲೇ ಭರವಸೆ ನೀಡಿದೆ’ ಎಂದು ತಿಳಿಸಿದ್ದಾರೆ.


‘ಆರೋಗ್ಯ ಚೇತರಿಕೆ ಆದ ಬಳಿಕ ಮತ್ತೆ ಹೋರಾಟಗಾರರನ್ನು ಭೇಟಿ ಮಾಡಲಿದ್ದೇನೆ. ನಂತರ ನಾನು ತವರೂರು ಲಡಾಖ್‌ಗೆ ಮರಳುವೆ’ ಎಂದೂ ತಿಳಿಸಿದ್ದಾರೆ.

ವಾಂಗ್ಚುಕ್‌ 26 ದಿನಗಳ ಕಾಲ ಉಪವಾಸ ಮಾಡುತ್ತಾ 10 ಕೇಜಿ ತೂಕ ಕಳೆದುಕೊಂಡಿದ್ದಾರೆ.

ನಮ್ಮಲ್ಲಿ ಮಾತ್ರ!

ಸೋನಂ ವಾಂಗ್ಚುಕ್‌ ಅವರು 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಗುರುವಾರ ತಡರಾತ್ರಿ ಅಂತ್ಯಗೊಳಿಸಿರುವ ಸುದ್ದಿಯನ್ನು ‘ಕನ್ನಡಪ್ರಭ’ ಮಾತ್ರ ನಿನ್ನೆ ಪ್ರಮುಖವಾಗಿ ಪ್ರಕಟಿಸಿತ್ತು.