ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಇಂದಿನ ಯುವ ಜನಾಂಗ ಕೇವಲ ಪದವಿಗಾಗಿ ಬೆನ್ನು ಹತ್ತುತ್ತಿದ್ದಾರೆ ಹೊರತು ಸ್ವಸಾಮರ್ಥ್ಯ, ಶಕ್ತಿ ಸಾಮರ್ಥ್ಯ, ಕೌಶಲ್ಯ, ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಮುಖ ಮಾಡದೆ ಇರುವುದು ಇಂದಿನ ದೊಡ್ಡ ದುರಂತವಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಸಿ.ಎಂ.ತ್ಯಾಗರಾಜ ಅವರು ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಸಾರಂಗಮಠದ ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಮಾತೋಶ್ರೀ ಗುರುಬಸಮ್ಮ ಸೋಮಾಪೂರ ಸೇವಾ ಸಂಸ್ಥೆ ಹಾಗೂ ಸಿಂದಗಿಯ ಲಯನ್ಸ್ ಕ್ಲಬ್ ಇವುಗಳ ಸಹಯೋಗದಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರ 13ನೇ ಕೃತಿ ಬಿಚ್ಚುಗತ್ತಿ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಕ ವರ್ಗ ಕೌಶಲ್ಯ ಆಧಾರಿತ ಜ್ಞಾನ ನೀಡುವುದು ಇಂದು ಅವಶ್ಯವಾಗಿದೆ. ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ, ವಿದ್ಯಾರ್ಥಿಗಳು ಪದವಿ ಪಡೆದರೆ ಸಾಲದು. ಅದರೊಂದಿಗೆ ಸ್ವಯಾರ್ಜಿತ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಂಡು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದ ಅವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆಯಲ್ಲಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಡಿಜಟಲಿಕರಣ ಕೇಂದ್ರವನ್ನು ಸ್ಥಾಪನೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಗ್ರಂಥವನ್ನು ಅವಲೋಕಿಸಿ ಮಾತನಾಡಿ, ಕವಿಯಾದವನಿಗೆ ಒಂದು ಪರಿಕಲ್ಪನೆಯನ್ನು ವಿಭಿನ್ನವಾಗಿ ಆಲೋಚಿಸುವ, ವಿವೇಚಿಸುವ ಮತ್ತು ವಿಮರ್ಷಿಸುವ ಗುಣ ಇರುವುದರಿಂದ ಸಾಹಿತ್ಯ ಚನ್ನಾಗಿ ಮೂಡಿ ಬರುತ್ತದೆ. ಕಾವ್ಯವು ಅನುಭವ, ಅಭ್ಯಾಸದ ಬಲದಿಂದ ರೂಪುಗೊಳ್ಳುತ್ತದೆ. ಆ ಹಿನ್ನಲೆಯಲ್ಲಿ ಕೆ.ಎಚ್.ಸೋಮಾಪೂರ ಅವರು ವೃತ್ತಿಯಲ್ಲಿ ದೈಹಿಕ ನಿರ್ದೇಶಕರಾಗಿದ್ದರೂ, ಸಾಹಿತ್ಯದ ಜ್ಞಾನ ಬೆಳೆಸಿಕೊಂಡಿದ್ದು ಅನುಪಮ. ಬಿಚ್ಚುಗತ್ತಿ ಕೃತಿ ಇದು ಭಾಮಿನಿ ಷಟ್ಪದಿಯಲ್ಲಿ ಮೂಡಿ ಬಂದ ಕಾವ್ಯವಾಗಿದೆ. ಈ ಭಾಗದಲ್ಲಿ ಸಾಹಿತಿ ದಿ.ಎಮ್.ವ್ಹಿ.ಗಣಾಚಾರಿ ಅವರು ಷಟ್ಪದಿ, ವ್ಯಾಕರಣದಲ್ಲಿ ಅದ್ಬುತ ಸಾಧನೆ ಮಾಡಿದವರು ಅವರ ಗರಡಿಯಲ್ಲಿ ಬೆಳೆದ ಸೋಮಾಪೂರ ಅವರು ಭಾಮಿನಿ ಷಟ್ಪದಿಯಲ್ಲಿ ಬಿಚ್ಚುಗತ್ತಿ ಗ್ರಂಥದ ಮೂಲಕ 352 ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಷಟ್ಪದಿಗಳೇ ಸಾಯುತ್ತಿವೆ. ಇದರ ಮಧ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಕೃತಿ ರಚನೆಯಾಗಿದ್ದು ಉತ್ತಮ ಬೆಳವಣಿಗೆ. ಈ ಕೃತಿಯು ಮನುಷ್ಯನಿಗೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು, ಸಾಹಸಿಯ ಸಾಮರ್ಥ್ಯ, ಶೌರ್ಯದ ಕಲ್ಪನೆ, ಹೋರಾಟ, ವಿವೇಚನೆಗಳನ್ನು ತುಂಬಿಕೊಂಡ ಸ್ವಾರಸ್ಯಕರವಾದ ಕಾವ್ಯ ಇಲ್ಲಿ ಮೂಡಿ ಬಂದಿವೆ ಎಂದು ವಿವರಿಸಿದರು.ಈ ವೇಳೆ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪಾಚಾರ್ಯ ಬಿ.ಪಿ.ಕರ್ಜಗಿ, ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಇಂದು ಕೌಶಲ್ಯಭರಿತ ಶಿಕ್ಷಣ ಕಡಿಮೆಯಾಗುತ್ತಿದೆ. ಪ್ರಾರಂಭದಿಂದಲೆ ಮಕ್ಕಳಿಗೆ ಭಾಷೆಗಳ ಬಗ್ಗೆ, ತಂತ್ರಜ್ಞಾನದ ಬಗ್ಗೆ, ವಿವಿಧ ಕಲೆ, ಕೌಶಲ್ಯದ ಬಗ್ಗೆ ವಿವರಣೆ ನೀಡುತ್ತಲೆ ಇರಬೇಕು ಎಂದು ಸಲಹೆ ನೀಡಿದರು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ತಾಳಿಕೋಟಿಯ ಎಚ್.ಎಸ್.ಪಾಟೀಲ, ದೈಹಿಕ ನಿರ್ದೇಶಕ ಡಾ.ರವಿ ಗೋಲಾ, ಪ್ರಾಚಾರ್ಯ ಬಿ.ಎಮ್.ಸಿಂಗನಳ್ಳಿ, ಎಸ್.ಎಸ್.ಪಾಟೀಲ, ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಕೃತಿ ಕರ್ತ ಕೆ.ಎಚ್.ಸೋಮಾಪೂರ ಇದ್ದರು.-----
ಕೋಟ್ಸೋಮಾಪೂರ ಅವರು ಭಾಮಿನಿ ಷಟ್ಪದಿಯಲ್ಲಿ ಬಿಚ್ಚುಗತ್ತಿ ಗ್ರಂಥದ ಮೂಲಕ 352 ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಷಟ್ಪದಿಗಳೇ ಸಾಯುತ್ತಿವೆ. ಇದರ ಮಧ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಕೃತಿ ರಚನೆಯಾಗಿದ್ದು ಉತ್ತಮ ಬೆಳವಣಿಗೆ. ಈ ಕೃತಿಯು ಮನುಷ್ಯನಿಗೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು, ಸಾಹಸಿಯ ಸಾಮರ್ಥ್ಯ, ಶೌರ್ಯದ ಕಲ್ಪನೆ, ಹೋರಾಟ, ವಿವೇಚನೆಗಳನ್ನು ತುಂಬಿಕೊಂಡ ಸ್ವಾರಸ್ಯಕರವಾದ ಕಾವ್ಯ ಇಲ್ಲಿ ಮೂಡಿ ಬಂದಿವೆ.
ಡಾ.ಸಂಗಮನಾಥ ಲೋಕಾಪೂರ, ಹಿರಿಯ ಸಾಹಿತಿ