ಏಕಕಾಲಕ್ಕೆ 120 ಕಲಾವಿದರ ಶತಕಂಠ ಸಮೂಹ ಗಾಯನ

| Published : Apr 27 2025, 01:33 AM IST

ಸಾರಾಂಶ

ದೊಡ್ಡಬಳ್ಳಾಪುರ: ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ದೊಡ್ಡಬಳ್ಳಾಪುರ ತನ್ನದೇ ಆದ ಮಹತ್ವ ಹೊಂದಿದೆ. ಇಲ್ಲಿನ ಕಲಾವಿದರ ಅನನ್ಯ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ದೊಡ್ಡಬಳ್ಳಾಪುರ: ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ದೊಡ್ಡಬಳ್ಳಾಪುರ ತನ್ನದೇ ಆದ ಮಹತ್ವ ಹೊಂದಿದೆ. ಇಲ್ಲಿನ ಕಲಾವಿದರ ಅನನ್ಯ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್‌ ಕಲಾ ಮಂದಿರದಲ್ಲಿ ಬೆಂಗಳೂರಿನ ರಂಗ ಸಂಸ್ಥಾನ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಲಾ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್‌ ಮಾತನಾಡಿ, ಕಲಾ ಚಟುವಟಿಕೆಗಳು ನಮ್ಮ ಪರಂಪರೆಯ ಪ್ರತೀಕ. ಎಲ್ಲರಲ್ಲೂ ಒಂದಲ್ಲಾ ಒಂದು ಕಲೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ರಂಗ ಸಂಸ್ಥಾನ ಅನೇಕ ಸಾಧನೆಗಳನ್ನು ಮಾಡಿದೆ. ಬಂಡ್ಲಹಳ್ಳಿ ವಿಜಯಕುಮಾರ್‌ ನೇತೃತ್ವದಲ್ಲಿ ಈ ಹಿಂದೆ ಆಯೋಜನೆಗೊಂಡಿದ್ದ ಸಹಸ್ರ ಕಂಠ ಗಾಯನದ 3 ಕಾರ್ಯಕ್ರಮಗಳು ಸತತವಾಗಿ ಲಿಮ್ಕಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿವೆ. ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ತಿಳಿಸಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್‌ ಕೆ.ಆರ್ ಮಾತನಾಡಿ, ಬದುಕಿನಲ್ಲಿ ಸೋಲುಗಳನ್ನು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಸಾಂಸ್ಕೃತಿಕ ಕಲೆಗಳು ನಮಗೆ ನೀಡುತ್ತವೆ. ಸಡಿಲಗೊಳ್ಳುತ್ತಿರುವ ಸಂಬಂಧಗಳ ಸಬಲೀಕರಣಕ್ಕೆ ಸಾಂಸ್ಕೃತಿಕ ಮಾದರಿಯೊಂದೇ ಮಾರ್ಗ. ಧನಾತ್ಮಕ ಚಿಂತನೆಗಳನ್ನು ಹೆಚ್ಚಿನ ಜೀವನಪ್ರೀತಿಯನ್ನು ನೀಡುವ ಕಲಾ ಚಟುವಟಿಕೆಗಳಲ್ಲಿ ಎಲ್ಲ ವಯೋಮಾನದ ಜನರು ಪಾಲ್ಗೊಳ್ಳುವುದು ಅಗತ್ಯ. ಇಂದು ದೊಡ್ಡಬಳ್ಳಾಪುರದಲ್ಲಿ ಹಲವು ಗಾಯಕಿಯರು ಮೊದಲ ಬಾರಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಸದಭಿರುಚಿಯ ಕಾರ್ಯಕ್ರಮಗಳು ಆಯೋಜನೆಗೊಳ್ಳುವುದು ಅಗತ್ಯ ಎಂದು ಹೇಳಿದರು.

ರಂಗ ಸಂಸ್ಥಾನದ ಅಧ್ಯಕ್ಷ ಡಾ.ಬಂಡ್ಲಹಳ್ಳಿ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಹಲವೆಡೆ ಇಂತಹ ಪ್ರಯತ್ನಗಳು ಈಗಾಗಲೇ ನಡೆದಿದ್ದವು. ಆದರೆ ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಪರಿಶುದ್ದ ಸಾಂಸ್ಕೃತಿಕ ಅಭಿರುಚಿಯನ್ನು ಮಾತ್ರ ವಿಶೇಷವಾಗಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಹಿಳೆಯರು ಗಾಯನದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ ಎಂದು ವಿವರಿಸಿದರು.

120ಕ್ಕೂ ಹೆಚ್ಚು ಕಲಾವಿದರು ಏಕಕಾಲಕ್ಕೆ ಕನ್ನಡದ ಮಹತ್ವದ ಗೀತಗುಚ್ಛವನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು. ವಿವಿಧ ಕಲಾ ತಂಡಗಳ ಮಹಿಳೆಯರಿಂದ ಶತಕಂಠಗಳ ಸಮೂಹ ಗಾಯನ, ನಾಟ್ಯ ಮಯೂರಿ ಕಲಾ ಕೇಂದ್ರದ ಮಕ್ಕಳಿಂದ ಜಾನಪದ ಸಮೂಹ ನೃತ್ಯ, ಪೂಜಾ ಸುಮಂತ್‌ ತಂಡದಿಂದ ಕೋಲಾಟ ಸಮೂಹ ನೃತ್ಯ, ಪದ್ಮಾವತಿ ತಂಡದಿಂದ ಸಮೂಹ ಕುಣಿತ ಭಜನೆ ಮತ್ತಿತರರ ಕಾರ್ಯಕ್ರಮಗಳು ನಡೆದವು.

ಕಲಾ ಪೋಷಕರಾದ ಅರುಣಾಮೂರ್ತಿ, ಬಿ.ವಿ.ಮೇಘನಾ ಕುಮಾರ್, ರುಚಿತಾ ಬೆಂಗಳೂರು, ವಿವಿಧ ಕಲಾ ತಂಡಗಳ ಮುಖ್ಯಸ್ಥರಾದ ಹಂಸವೇಣಿ, ಶಾರದಾ ಶ್ರೀಧರ್, ಎಂ.ಕೆ.ವತ್ಸಲ, ಕವಿತಾ ರಾಜಶೇಖರ್, ಗಾಯತ್ರಿ ಪ್ರಕಾಶ್, ಪ್ರಿಯಾಂಕ, ಶೈಲಜಾ, ಶೋಭಾ, ಶೀಲ, ಎಚ್.ಕೃಷ್ಣಪ್ಪ, ಅಪರ್ಣ ಪ್ರಸನ್ನ ಸೇರಿದಂತೆ ಅನೇಕ ಕಲಾ ತಂಡಗಳ ಪ್ರಮುಖರು ಭಾಗಿಯಾದರು.

26ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ರಂಗ ಸಂಸ್ಥಾನ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಲಾ ಸಂಸ್ಕೃತಿ ಉತ್ಸವದಲ್ಲಿ 120 ಕಲಾವಿದರು ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನದಲ್ಲಿ ಭಾಗಿಯಾದರು.

26ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ರಂಗ ಸಂಸ್ಥಾನ ನೇತೃತ್ವದಲ್ಲಿ ಏರ್ಪಡಿಸಿದ್ದ ನಡೆದ ರಾಜ್ಯ ಮಟ್ಟದ ಕಲಾ ಸಂಸ್ಕೃತಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ತ.ನ.ಪ್ರಭುದೇವ್, ಪ್ರೊ.ರವಿಕಿರಣ್, ಡಾ.ಬಂಡ್ಲಹಳ್ಳಿ ವಿಜಯಕುಮಾರ್‌ ಭಾಗಿಯಾದರು.