ಸಾರಾಂಶ
ಶಿವಮೊಗ್ಗ : ಜಿಲ್ಲೆಯ ಜನರ ಜೀವಜಲದ ಮೂಲವಾಗಿರುವ ತುಂಗಾನದಿ ಮಲೀನವಾಗುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ ಮಾಡಿದರು.
ಚಿತ್ರ ನಟ ಅನಿರುದ್ಧ ಜತಕರ ಅವರು ತುಂಗಾನದಿ ಮಲೀನಗೊಳ್ಳುವುದನ್ನು ತಪ್ಪಿಸಬೇಕೆಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಬಳಿಕ ಅವರು ಈ ಸಂಬಂಧ ತೋರಿದ ಆಸಕ್ತಿಯ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ತಮ್ಮ ಕಚೇರಿಯಲ್ಲಿ ತುಂಗಾ ಮಲೀನವನ್ನು ತಪ್ಪಿಸುವ ಸಂಬಂಧ ಸಲಹೆ ಪಡೆಯಲು ಅಧಿಕಾರಿಗಳ ಜೊತೆ ನಟ ಅನಿರುದ್ಧ ಅವರ ಜೊತೆ ಸಭೆ ನಡೆಸಿದರು.
ನದಿ ನೀರು ಕಲುಷಿತಗೊಳ್ಳುವುದನ್ನು ನಿಯಂತ್ರಿಸಿ, ಜನಸಾಮಾನ್ಯರ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರಮುಖವಾಗಿ ಮಾನವ ಬಳಕೆ ಹಾಗೂ ಕೈಗಾರಿಕೆಗಳ ಬಳಕೆಯಿಂದ ನೀರು ಮಲೀನಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನದಿಗೆ ಮಲೀನ ನೀರು ಸೇರುವ ಸ್ಥಳ ಗುರುತಿಸಿ, ಅದನ್ನು ಸಂಸ್ಕರಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಿ, ನದಿಗೆ ಪುನರ್ ಸೇರ್ಪಡೆಗೊಳಿಸುವಂತಾಗಬೇಕು ಎಂದ ಅವರು, ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಅನೇಕ ಸ್ಥಳಗಳನ್ನು ಗುರುತಿಸಿ, ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಬೇಸಿಗೆಯಿಂದ ಈ ಘಟಕಗಳು ಕಾರ್ಯಾರಂಭಗೊಳ್ಳಲಿವೆ ಎಂದರು.
ತುಂಗಾನದಿಗೆ ಶಿವಮೊಗ್ಗ ನಗರ ಮಾತ್ರವಲ್ಲದೇ ತೀರ್ಥಹಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ವಸತಿ ಪ್ರದೇಶಗಳ ತ್ಯಾಜ್ಯವೂ ಸೇರಿಕೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ತೀರ್ಥಹಳ್ಳಿಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಆಯಾ ಗ್ರಾಮಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಪಡೆಯುವುದಾಗಿ ತಿಳಿಸಿದ ಅವರು, ಇದರ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ಓರ್ವ ಅಧಿಕಾರಿ ನೇಮಿಸಲಾಗುವುದು. ಮುಂದಿನ ದಿನಗಳಲ್ಲಿ ನದಿಯ ಶುದ್ಧತೆಗಾಗಿ ಕೈಗೊಂಡ ಕ್ರಮಗಳ ಕುರಿತು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸಿ, ಮುಂದಿನ 2 ವರ್ಷಗಳಲ್ಲಿ ನದಿಯನ್ನು ಸಂಪೂರ್ಣ ಶುದ್ಧವಾಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. ನದಿಯ ನಿರಂತರ ಉಸ್ತುವಾರಿ ಹಾಗೂ ನಿರ್ವಹಣೆಗಾಗಿ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಮಾತನಾಡಿ, ಕಲುಷಿತ ನೀರು ನದಿ ಸೇರುವುದನ್ನು ನಿಯಂತ್ರಿಸಲು ಸ್ಥಳೀಯವಾಗಿ ತಂತ್ರಜ್ಞಾನ ಹಾಗೂ ಪರ್ಯಾಯ ಕ್ರಮಗಳನ್ನು ಬಳಸುವುದು ಸೂಕ್ತವಾಗಿದೆ ಎಂದರು.
ನಟ ಅನಿರುದ್ಧ ಮಾತನಾಡಿ, ನದಿಯ ಮಾಲಿನ್ಯ ನಿಯಂತ್ರಿಸುವುದರ ಜೊತೆಗೆ ನ.01ರಂದು ತುಂಗೆಯನ್ನು ಎಲ್ಲರನ್ನು ಒಪ್ಪುವ ಹಾಗೂ ಅಪ್ಪಿಕೊಳ್ಳುವ ಹಾಗೂ ಗಂಗಾರತಿಯಂತೆ ಪ್ರತಿದಿನ ತುಂಗಾರತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಿಂದ ಉದ್ಘಾಟಿಸುವ ಆಶಯ ಹೊಂದಿದ್ದು, ಈ ಮಹತ್ವದ ಕಾರ್ಯದಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲರ ಸಹಕಾರ ಬಯಸುವುದಾಗಿ ತಿಳಿಸಿದರು.
ನದಿಯನ್ನು ಶುದ್ಧಗೊಳಿಸುವುದರಿಂದ, ತುಂಗಾರತಿ ಕಾರ್ಯಕ್ರಮದ ಅನುಷ್ಠಾನದಿಂದ ಎಲ್ಲರಲ್ಲೂ ಪೂಜ್ಯ ಭಾವನೆ ಬೆಳೆಯಲಿದೆ ಹಾಗೂ ಪ್ರವಾಸಿಗರ ತಾಣವಾಗಿ ಪರಿವರ್ತನೆಗೊಂಡು ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ, ಅಲ್ಲದೆ ಇಲ್ಲಿನ ಆಯಕಟ್ಟಿನ ಸ್ಥಳದಲ್ಲಿ ಜಲಸಾಹಸ ಕ್ರೀಡೆಗೆ ಅವಕಾಶಗಳು ಒದಗಿ ಬರಲಿವೆ ಎಂದರು.
ಕೊಳಚೆ ನೀರು ನದಿ ಸೇರುವುದನ್ನು ನಿಯಂತ್ರಿಸುವುದು, ಕಾರ್ಖಾನೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ, ನದಿ ಪಾತ್ರದಲ್ಲಿ ತುಂಬಿರುವ ಕಳೆ ಕಿತ್ತು ನೀರನ್ನು ಶುದ್ಧಗೊಳಿಸುವ ಅತ್ಯಂತ ತುರ್ತು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಿಯಮ ಮೀರಿ ತುಂಗೆಯನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಹೊಲಗದ್ದೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು. ಬಟ್ಟೆ, ಜಾನುವಾರು, ವಾಹನಗಳು ತೊಳೆಯುವುದನ್ನು ನಿಲ್ಲಿಸಬೇಕು ಎಂದವರು ಒತ್ತಾಯಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.