ಸಾರಾಂಶ
ಮನುವಿಕಾಸ ಸ್ವಯಂ ಸೇವಾ ಸಂಸ್ಥೆ ಮತ್ತು ಈಡೇಲ್ ಗೀವ್ ಫೌಂಡೇಶನ್ ಸಹಯೋಗದೊಂದಿಗೆ ಶನಿವಾರ ನಗರದ ಭಾರತ ಸೇವಾದಳ ಸಭಾ ಭವನದಲ್ಲಿ ಮಹಿಳೆಯರಿಗಾಗಿ ಬೀಜ ಸಂರಕ್ಷಣೆ ಮತ್ತು ಬೀಜ ಬ್ಯಾಂಕ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿರಸಿ
ಮನುವಿಕಾಸ ಸ್ವಯಂ ಸೇವಾ ಸಂಸ್ಥೆ ಮತ್ತು ಈಡೇಲ್ ಗೀವ್ ಫೌಂಡೇಶನ್ ಸಹಯೋಗದೊಂದಿಗೆ ಶನಿವಾರ ನಗರದ ಭಾರತ ಸೇವಾದಳ ಸಭಾ ಭವನದಲ್ಲಿ ಮಹಿಳೆಯರಿಗಾಗಿ ಬೀಜ ಸಂರಕ್ಷಣೆ ಮತ್ತು ಬೀಜ ಬ್ಯಾಂಕ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.ಮನುವಿಕಾಸ ಸಂಸ್ಥೆಯ ಯೋಜನಾ ನಿರ್ದೇಶಕ ಮಂಜುನಾಥ ಹೆಗಡೆ ಸಂಸ್ಥೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಬೆಳೆದು ಬಂದ ಹಾದಿಯ ಬಗೆ, ಸಂಸ್ಥೆಯಿಂದ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವನಸ್ತ್ರೀ ಸಂಸ್ಥೆಯ ಟ್ರಸ್ಟಿ ಶ್ಯಾಮಲಾ ಹೆಗಡೆ ಮಾಹಿತಿ ನೀಡಿ, ಬೀಜಗಳ ಸಂರಕ್ಷಣೆ, ಬೀಜಗಳ ಬಳಕೆ ಮಹಿಳೆಯರಿಂದಲೇ ಸಾಧ್ಯ. ಒಂದು ಮನೆಗೆ ಕೈತೋಟ ಬಹಳ ಮುಖ್ಯವಾಗಿದ್ದು, ಕೈತೋಟದಿಂದ ರಾಸಾಯನಿಕ ಮುಕ್ತ ತರಕಾರಿಗಳನ್ನು ಬೆಳೆಸಬಹುದು. ಇದರಿಂದ ಪೌಷ್ಟಿಕ ಆಹಾರದೊಂದಿಗೆ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.ಕೇವಲ ಬೀಜಗಳನ್ನು ಸಂರಕ್ಷಿಸಿ, ತಮ್ಮಲ್ಲೇ ಇರಿಸಿಕೊಳ್ಳುವುದಕ್ಕಿಂತ ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಉತ್ತಮ. ಹಾಗೆಯೇ ಇದರಿಂದ ವಿವಿಧ ಬೀಜಗಳ ಪರಿಚಯವಾಗುತ್ತದೆ. ಸಮಾರಂಭಗಳಲ್ಲಿ ಬಂದ ಅತಿಥಿಗಳಿಗೆ ಉಡುಗೊರೆ ರೂಪವಾಗಿ ನಾವು ಸಂಗ್ರಹಿಸಿದ ಬೀಜಗಳನ್ನು ವಿಚಾರಿಸಿದರೆ ನಮಗೂ ಸಂತೋಷ ಪಡೆದವರು ಸಂತೋಷಗೊಳ್ಳುತ್ತಾರೆಂದು ಬೀಜಗಳ ವಿನಿಮಯ ಮಾಡುವ ಬಗೆಗೆ ಹೇಳಿದರು.
ಸಂತೋಷಕುಮಾರ್ ನಾಯಕ ಮಾತನಾಡಿ, ಬೀಜಗಳ ಶೇಖರಣೆ ಮಾಡುವುದು, ಬೀಜ ಭಂಡಾರದ ಮಹತ್ವದ ಬಗ್ಗೆ ವಿವರಿಸಿದರು. ಬೀಜ ಭಂಡಾರದ ಉದ್ದೇಶವೇನೆಂದರೆ ಬೀಜ ವಿನಿಮಯ ಪ್ರಕ್ರಿಯೆಗೆ ಪ್ರೋತ್ಸಾಹಿಸಿ, ಬೀಜಗಳನ್ನು ಸಂರಕ್ಷಿಸಿ ರಾಸಾಯನಿಕ ರಹಿತ ತೋಟಗಾರಿಕೆಗೆ ಉತ್ತೇಜಿಸುವುದೇ ಆಗಿದೆ. ಬೀಜಗಳನ್ನು ಹೇಗೆ ಒಣಗಿಸುವುದು, ಬೀಜಗಳ ಸಂಗ್ರಹಣೆಯಲ್ಲಿ ಪುರಾತನ ಪದ್ಧತಿಯ ಮಹತ್ವ, ಏಕೆ ಬೀಜಗಳನ್ನು ಸಂಗ್ರಹಿಸಿ ಇಡುವುದು ಹೇಗೆ ಬೀಜಗಳನ್ನು ಪ್ರಸಾರ ಮಾಡುವುದರ ಕುರಿತು ವಿವರಿಸಿದರು.ಬೀಜ ಅಮೃತವನ್ನು ಹೇಗೆ ತಯಾರಿಸುವುದು ಅದರ ಮಹತ್ವ ಹಾಗೂ ಹೇಗೆ ಬಳಸುವುದು ಎಂಬುದರ ಬಗೆಗೂ ವಿವರಿಸಿ, ಉತ್ತಮ ಬೀಜ ಹಾಗೂ ಜೊಳ್ಳು ಬೀಜಗಳನ್ನು ಹೇಗೆ ಕಂಡುಹಿಡಿಯುವ ಬಗೆಗೆ ಪ್ರಾತ್ಯಕ್ಷಿತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.