ಸಾರಾಂಶ
ಪಟ್ಟಣದ ಹೊಸ ಬಡಾವಣೆಯಲ್ಲಿ ಕೆಲವರು ನಿರ್ಮಾಣ ಮಾಡಿರುವ ಶೆಡ್ ತೆರವುಗೊಳಿಸದಂತೆ ಆಗ್ರಹಿಸಿ ಕೆಲ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮುಖ್ಯಾಧಿಕಾರಿ ಸತೀಶ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣದ ಹೊಸ ಬಡಾವಣೆಯಲ್ಲಿ ಕೆಲವರು ನಿರ್ಮಾಣ ಮಾಡಿರುವ ಶೆಡ್ ತೆರವುಗೊಳಿಸದಂತೆ ಆಗ್ರಹಿಸಿ ಕೆಲ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಮುಖ್ಯಾಧಿಕಾರಿ ಸತೀಶ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಪಂಚಾಯಿತಿಗೆ ಸೇರಿದ ಜಾಗದಲ್ಲಿ ಶೆಡ್ ಕಟ್ಟಿರುವುದು ಸರಿಯಲ್ಲ. ಕೂಡಲೇ ಶೆಡ್ ಅನ್ನು ನೀವೆ ತೆರವುಗೊಳಿಸಬೇಕೆಂದು ಮುಖ್ಯಾಧಿಕಾರಿ ಸೂಚಿಸಿದರು. ಶೆಡ್ ನಿರ್ಮಾಣದ ಬಗ್ಗೆ ಪಂಚಾಯಿತಿ ಅಧ್ಯಕ್ಷರಾದ ಜಯಂತಿ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಆ ಸ್ಥಳದಲ್ಲಿ ಗೌರಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಈ ಹಿಂದೆ ಪಂಚಾಯಿತಿ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಬಿಜೆಪಿಯ ಎಸ್.ಆರ್.ಸೋಮೇಶ್ ವಾದಿಸಿದರು. ಅಲ್ಲಿ ಪರ್ಮನೆಂಟ್ ಶೆಡ್ ನಿರ್ಮಿಸಿಲ್ಲ ಎಂದು ಶರತ್ಚಂದ್ರ ಹೇಳಿದರು. ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು.ಪಂಚಾಯಿತಿಗೆ ಬಂದು ಶೆಡ್ ನಿರ್ಮಿಸಿರುವುದಕ್ಕೆ ಸಮಾಜಾಯಿಸಿ ನೀಡಲು ಕರೆ ಮಾಡಲಾಗಿತ್ತು. ನೀವು ಬರಲಿಲ್ಲ. ಪಂಚಾಯಿತಿ ಆಸ್ತಿಗೆ ಧಕ್ಕೆಯಾದಾಗ ಪೊಲೀಸ್ ಠಾಣೆಗೆ ದೂರು ನೀಡುವುದು ಪಂಚಾಯಿತಿ ಆಡಳಿತದ ನಿಯಮ ಎಂದು ಮುಖ್ಯಾಧಿಕಾರಿ ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಅನೇಕರು ಚರಂಡಿ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಅದನ್ನು ಮೊದಲು ತೆಗೆಸಿ ಎಂದು ಶರತ್ಚಂದ್ರ ಮುಖ್ಯಾಧಿಕಾರಿಗೆ ಹೇಳಿದರು. ಮುಂದಿನ ಶುಕ್ರವಾರ ಪಂಚಾಯಿತಿ ಸದಸ್ಯರ ಸಭೆ ಕರೆದು, ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನಾಕಾರರು ತೆರಳಿದರು.