ಪ್ರಾಚೀನ ಕನ್ನಡ ಶಾಸನಗಳ ಶೋಧನೆ, ಸಂರಕ್ಷಣಾ ಯೋಜನೆಗೆ ಇಂದು ಚಾಲನೆ

| Published : Apr 06 2024, 12:45 AM IST

ಸಾರಾಂಶ

ಸಾರ್ವಜನಿಕರು ತಮ್ಮಲ್ಲಿ ತಮ್ಮ ಸಂಸ್ಥೆ ಅಥವಾ ತಮ್ಮ ಪರಿಸರದಲ್ಲಿ ಇಂತಹ ಪ್ರಾಚೀನ ಕನ್ನಡದ ಶಾಸನಗಳನ್ನು ಕಂಡರೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ ೯೮೪೪೪೦೧೨೯೫ ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ತಾಲೂಕು ಘಟಕದ ವತಿಯಿಂದ ಪ್ರಾಚೀನ ಕಾಲದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಅದನ್ನು ಬೆಳಕಿಗೆ ತರುವ ಹಿನ್ನೆಲೆಯಲ್ಲಿ ಪ್ರಾಚೀನ ಕನ್ನಡ ಶಾಸನಗಳ ಶೋಧನ, ಅಧ್ಯಯನ ಮತ್ತು ಸಂರಕ್ಷಣಾ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಏ.೬ರಂದು ಶನಿವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಗುವುದು ಎಂದು ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಾಲಯಗಳಲ್ಲಿ, ಮಠ ಮಂದಿರಗಳಲ್ಲಿ, ಜೈನ ಮಂದಿರ, ಬಸದಿ, ಗರಡಿಗಳಲ್ಲಿ ಹಾಗೂ ದೈವಸ್ಥಾನ, ರಾಜರ ಯಾ ಅರಸರ ಅರಮನೆಯಲ್ಲಿ , ಗುತ್ತಿನ ಮನೆಗಳಲ್ಲಿ, ತರವಾಡು ಮನೆಗಳಲ್ಲಿ, ಪ್ರಾಚೀನ ಮನೆಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಪ್ರಾಚೀನ ಬರವಣಿಗೆಯ ಶಾಸನಗಳು ಲಭ್ಯವಾಗುತ್ತಿವೆ. ಇವುಗಳು ಶಿಲೆಗಳ ಮೇಲೆ, ತಾಮ್ರಪಟಗಳ ಮೇಲೆ, ರಥದಲ್ಲಿ, ತುಳಸಿ ಕಟ್ಟೆಯಲ್ಲಿ, ಮೂರ್ತಿಗಳ ಮೇಲೆ, ಗಂಟೆ, ಹರಿವಾಣ, ಆರತಿ, ಶಂಖ, ಖಡ್ಗ, ಮಡಕೆ, ಇತ್ಯಾದಿಗಳ ಮೇಲೆ ಬರೆಯಲ್ಪಟ್ಟಿರುತ್ತವೆ. ಇವುಗಳು ರಾಜಾಜ್ಞೆ, ದಾನ ಪತ್ರ, ಒಪ್ಪಂದ, ಪುರಾತನ ಘಟನೆಯ ವಿವರಗಳು ಇತ್ಯಾದಿಗಳನ್ನು ಹೊಂದಿರುತ್ತವೆ. ಇವುಗಳ ಅಧ್ಯಯನವು ನಮ್ಮ ಇತಿಹಾಸ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿ, ಸಾಮಾಜಿಕ ಹಾಗೂ ಚಾರಿತ್ರಿಕ ನಡವಳಿಕೆಗಳು ಇತ್ಯಾದಿಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳ ಅಧ್ಯಯನವು ಕುತೂಹಲಕಾರಿಯಾಗಿರುವಂತೆ ಜನಜೀವನದ ಅನೇಕ ಅಂಶಗಳ ಕುರಿತಾದ ಜ್ಞಾನ ನಿಧಿಗಳು ಆಗಿವೆ. ಇವುಗಳ ಶೋಧನೆ ಅಧ್ಯಯನ ಮತ್ತು ಪ್ರಕಟಣೆಯ ಒಂದು ಬೃಹತ್ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕವು ಕೈಗೆತ್ತಿಕೊಂಡಿದೆ.

ಹಿರಿಯ ಶಾಸನ ತಜ್ಞರಾಗಿರುವ ಡಾ. ಉಮಾನಾಥ್ ಶೆಣೈ ಈ ಯೋಜನೆಯ ಮುಖ್ಯ ಅಧ್ಯಯನಕಾರರಾಗಿರುತ್ತಾರೆ. ಮೊದಲ ಹಂತದಲ್ಲಿ ಪುತ್ತೂರು ತಾಲೂಕು ಹಾಗೂ ಅದರ ಪರಿಸರವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿರುತ್ತದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ ಈ ಶಾಸನ ಅಧ್ಯಯನವನ್ನು ವಿಸ್ತರಿಸಲಿದ್ದೇವೆ. ಈ ಯೋಜನೆಯ ಅಡಿಯಲ್ಲಿ ಸಂಬಂಧಪಟ್ಟ ಶಾಸನಗಳು ಲಭ್ಯವಾದ ವಿವರ, ಅದರ ಛಾಯಾಚಿತ್ರ, ಪೂರ್ಣಪಾಠ, ಭಾಷಾಂತರ ಸಾರಾಂಶ, ಸಂಕ್ಷಿಪ್ತ ಪರಿಚಯ ಇತ್ಯಾದಿಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಿಲಾಗುತ್ತದೆ. ಮುಂದಿನ ಹಂತದಲ್ಲಿ ಈ ಶಾಸನಗಳನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡುವ ಶಾಸನ ಅಧ್ಯಯನಕಾರರಿಗೆ ಉಪಯೋಗವಾಗುವಂತೆ ಆಂಗ್ಲ ಭಾಷೆಯಲ್ಲಿಯೂ ಪ್ರಕಟಿಸುವ ಯೋಜನೆಯಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರದೇಶದ ಸಾರ್ವಜನಿಕರು ತಮ್ಮಲ್ಲಿ ತಮ್ಮ ಸಂಸ್ಥೆ ಅಥವಾ ತಮ್ಮ ಪರಿಸರದಲ್ಲಿ ಇಂತಹ ಪ್ರಾಚೀನ ಕನ್ನಡದ ಶಾಸನಗಳನ್ನು ಕಂಡರೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ ೯೮೪೪೪೦೧೨೯೫ ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.